ಬೆಂಗಳೂರು: ಗಣೇಶೋತ್ಸವ ಎಂದರೆ ಕೇವಲ ಒಂದು ಹಬ್ಬವಲ್ಲ; ಅದು ನಮ್ಮ ಸಮಾಜದ ಐಕ್ಯತೆ, ಭಕ್ತಿ ಮತ್ತು ಸೌಹಾರ್ದತೆಯ ಸಂಕೇತ. ಇಂತಹ ಪವಿತ್ರ ಸಂದರ್ಭದಲ್ಲಿ ಟಿ. ನರಸೀಪುರದ ಪೊಲೀಸ್ ಅಧಿಕಾರಿಯೊಬ್ಬರು ಗಣೇಶ ಮೆರವಣಿಗೆ ಕುರಿತು ದುರಹಂಕಾರದ ಧಾಟಿಯಲ್ಲಿ ಮಾತನಾಡಿ, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದು ಅತ್ಯಂತ ಖಂಡನೀಯ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
ಗಣೇಶ ಮೆರವಣಿಗೆ ಮಸೀದಿ ಮುಂದೆ ಸಾಗಬಾರದು, ಪಟಾಕಿ ಸಿಡಿಸಬಾರದು, ನೃತ್ಯ ಮಾಡಬಾರದು, ಮೌನವಾಗಿ ಸಾಗಬೇಕು ಎಂದು ಉತ್ಸವ ಸಮಿತಿಗೆ ಪೊಲೀಸ್ ಇಲಾಖೆಯಿಂದಲೇ ಬೆದರಿಕೆ ಹಾಕಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
ಗಣೇಶೋತ್ಸವ ಭಾವನೆಗಳಿಗೆ ತಂದ ಧಕ್ಕೆ:
ಮಾಧ್ಯಮಗಳೊಂದಿಗೆ ಮಾತನಾಡಿದ ಆರ್. ಅಶೋಕ್, “ಗಣೇಶೋತ್ಸವ ಎನ್ನುವುದು ಬರಿ ಒಂದು ಹಬ್ಬವಲ್ಲ, ಅದು ದೇಶದ ಸಾಂಸ್ಕೃತಿಕ ಪರಂಪರೆ, ಐಕ್ಯತೆ ಮತ್ತು ಸೌಹಾರ್ದತೆಯ ಸಂಕೇತವಾಗಿದೆ. ಮಸೀದಿ ಮುಂಭಾಗದಲ್ಲಿ ಮೆರವಣಿಗೆ ಸಾಗಬಾರದು, ಪಟಾಕಿ ಸಿಡಿಸಬಾರದು, ನೃತ್ಯ ಮಾಡಬಾರದು ಮತ್ತು ಮೌನವಾಗಿಯೇ ಸಾಗಬೇಕು ಎಂದು ಗಣೇಶ ಸಮಿತಿಯ ಸಂಘಟಕರಿಗೆ ಬೆದರಿಕೆ ಹಾಕಿರುವುದು ನಾಚಿಕೆಗೇಡಿನ ಸಂಗತಿ. ಶಾಂತಿಯುತವಾಗಿ ಸಾಗುವ ಧಾರ್ಮಿಕ ಆಚರಣೆಗೆ ಈ ರೀತಿಯ ದುರಹಂಕಾರದ ಷರತ್ತುಗಳನ್ನು ವಿಧಿಸುವುದು ಕಾನೂನು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ” ಎಂದು ಧ್ವನಿಯೆತ್ತಿದ್ದಾರೆ.
ಪೋಲಿಸ್ ಅಧಿಕಾರಿಯ ಅಮಾನತಿಗೆ ಆಗ್ರಹ:
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆಯ ಮುಖ್ಯ ಕರ್ತವ್ಯವಾಗಿದ್ದರೂ, ಒಂದು ಧರ್ಮದ ಆಚರಣೆಯನ್ನು ನಿರ್ಬಂಧಿಸುವ ರೀತಿಯಲ್ಲಿ ಬೆದರಿಕೆ ಹಾಕುವುದು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ತಕ್ಷಣವೇ ಸಾರ್ವಜನಿಕರನ್ನು ಬೆದರಿಸಿದ ಅಧಿಕಾರಿಯನ್ನು ಅಮಾನತುಗೊಳಿಸಬೇಕು. ಈ ರೀತಿಯ ಆಡಳಿತ ಧೋರಣೆಯನ್ನು ಖಂಡಿಸಿ ನ್ಯಾಯ ಒದಗಿಸಲು ತಾವೇ ಸ್ವತಃ ಟಿ. ನರಸೀಪುರಕ್ಕೆ ತೆರಳುವುದಾಗಿ ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕರ್ತವ್ಯ. ಆದರೆ ಒಂದು ಧರ್ಮದ ಆಚರಣೆಯನ್ನು ನಿರ್ಬಂಧಿಸುವ ರೀತಿಯಲ್ಲಿ ಬೆದರಿಕೆ ಹಾಕುವುದು ಯಾವುದೇ ಕಾರಣಕ್ಕೂ ಒಪ್ಪಲಾಗದು ಎಂದು ಆರ್. ಅಶೋಕ್ ಕಿಡಿಕಾರಿದ್ದಾರೆ.





Leave a comment