ಬೆಂಗಳೂರು: ಲೇ… ! ಜನಾರ್ದನರೆಡ್ಡಿ ಲೇ …! ಚಂಚಲಗುಡ ಕೈದಿ ನಂ. 697 ಅಲೆ ಲೇ… ಜೈಲಿನಲ್ಲಿ ಮುದ್ದೆ ಮುರಿದ ಗಣಿ ಲೂಟಿಕೋರ ಎಂದು ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.
ಹೀಗೆಲ್ಲಾ ನಾನೂ ಕೂಡ ‘ಲೇ’ ಎನ್ನಬಲ್ಲೆ. ಘನತೆ, ನಡತೆಯಲ್ಲಿ ಅಲ್ಲದಿದ್ದರೂ ವಯಸ್ಸಿನಲ್ಲಿ ನೀವು ಹಿರಿಯ. ಜೊತೆಗೆ ನನ್ನ ಹಿರಿಯರು ಸಂಸ್ಕಾರ ಕಲಿಸಿರುವುದರಿಂದ ‘ಲೇ’ ಎನ್ನುವ ಮಟ್ಟಕ್ಕೆ ನಾ ಇಳಿಯಲಾರೆ ಎಂದಿದ್ದಾರೆ.
ನಾನು ಮೊದಲ ಬಾರಿಗೆ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದಾಗ ತಮ್ಮುಡು, ತಮ್ಮುಡು ಎಂದು ಗೋಗರೆದು ಬೆಂಬಲ ಕೇಳಿದವನು ನೀನು. ಈಗ ಸುಳ್ಳುಗಳ ಸರಮಾಲೆಯನ್ನೇ ಹೆಣೆದು ಬೊಗಳೆ ಬಿಡುತ್ತಿದ್ದೀಯಾ? ಯಪ್ಪಾ ಬೊಗಳೆ ವೀರ, ‘ನಿನಗೆ ತಾಕತ್ತು ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾ. ನೀನು ರಾಜೀನಾಮೆ ಕೊಟ್ಟ 24 ಗಂಟೆಯಲ್ಲಿ ನಾನೂ ರಾಜೀನಾಮೆ ಕೊಡುತ್ತೇನೆ. ಗಂಗಾವತಿಯಲ್ಲಿ ನನ್ನ ವಿರುದ್ಧ ಉಪ ಚುನಾವಣೆ ಎದುರಿಸಿ ನಿನ್ನ ಬಲಾಬಲ ತೋರಿಸು. ಪ್ರಚಾರ ಶೋಕಿಗೆ ವ್ಯರ್ಥ ಪ್ರಲಾಪ ಮಾಡಬೇಡ’ ಎಂದಿದ್ದಾರೆ.
ನಿನಗೆ ನೇರ ಸವಾಲು ಹಾಕಿ ಪಂಥಾಹ್ವಾನ ನೀಡುತ್ತಿದ್ದೇನೆ. ನೀನು ‘ಎಸ್’ ಎಂದರೆ ನಾಳೆಯೇ ರಾಜೀನಾಮೆ ನೀಡುತ್ತೇನೆ. ಜನಾದೇಶ ಲೂಟಿಕೋರನಿಗೋ? ಜನ ಸೇವಕನಿಗೋ? ನೋಡೇ ಬಿಡೋಣ. ಗಣಿ ಲೂಟಿಯ ಅಕ್ರಮ ಸಂಪತ್ತು. ಅದರಿಂದ ಬಂದಿರುವ ಅಹಂಕಾರ ನಿನ್ನ ನೆತ್ತಿಗೇರಿದೆ. ಹೀಗಾಗಿ ಬಾಯಿಗೆ ಬಂದಂತೆ ನಾಲಿಗೆ ಹರಿಬಿಟ್ಟಿದ್ದೀಯ. ಹೋ..ಹೋ… ‘ಗಣಿಲೂಟಿ ಕಳ್ಳ ಎಂದ ಕೂಡಲೇ ನೀನು ಉರಿದು ಬೀಳುತ್ತಿದ್ದೀಯ. ನೀನೇನು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲು ಸೇರಿದ ಮಹನೀಯನಾ? ಜೈಲಿನಿಂದ ಹೊರ ಬರಲೂ ಕಳ್ಳಾಟ ಮಾಡಿದ ಭೂಪ ತಾನೇ?’ ಗಣಿ ಲೂಟಿ ಮಾಡಿ ಜೈಲಿಗೆ ಹೋಗಿಲ್ಲ ಎಂದರೆ ‘ಫೀಲ್ ದಿ ಜೈಲ್’ ಪ್ಯಾಕೇಜ್ ಮೇಲೆ ಹೋಗಿದ್ಯಾ? ಎಂದಿದ್ದಾರೆ.
“ಜಯ ಜನಾರ್ಧನ ಕೃಷ್ಣ ರಾಧಿಕಾಪತೇ” ಅಂಥ ಕೃಷ್ಣಜನ್ಮಾಷ್ಟಮಿ ದಿನ ಕೃಷ್ಣನ ಭಜನೆ ಮಾಡಿದ್ದಕ್ಕೆ ನಿನ್ನನ್ನು ಕೃಷ್ಣ ಜನ್ಮಸ್ಥಾನಕ್ಕೆ ಕಳಿಸಿದರಾ? ಹೇಳಪ್ಪಾ ಕೋಳ ತೊಟ್ಟ ಗಣಿ ಕಳಂಕಿತ ಎಂದು ಕಿಡಿಕಾರಿದ್ದಾರೆ.
ಗಣಿ ಲೂಟಿ ಕಳ್ಳ ನೀನು. ಸುಂಕಲಮ್ಮ ದೇವಸ್ಥಾನ ಒಡೆದ ಅವಿವೇಕಿ ನೀನು. ಗಂಗಾವತಿಯಲ್ಲಿ ಗೆದ್ದರೆ ಮತದಾರರಿಗೆ ಡಬಲ್ ಬೆಡ್ ರೂಮ್ ಮನೆ ನೀಡ್ತೀನಿ. ಕ್ರಿಕೆಟ್ ಸ್ಟೇಡಿಯಂ ಮಾಡ್ತೀನಿ ಅಂದಿದ್ದೆ ಈಡೇರಿಸಿದ್ದೀಯಾ? ಸುಳ್ಳು ಹೇಳಿಕೊಂಡು ಜೀವನ ಮಾಡೋ ನಿನಗೆ ಇಷ್ಟಿರುವಾಗ ಸ್ವಾಭಿಮಾನದಿಂದ ಬೆಳೆದವನು ನನಗೆ ಎಷ್ಟಿರಬೇಡ? ನಿನ್ನ ಕಾಲಿಗೆ ಬಿದ್ದೆ ಎಂದು ಹೇಳಿಕೊಳ್ಳುತ್ತಾ ಇದ್ಯಾ. ನಾಚಿಕೆ ಆಗಲ್ವಾ? ನಾನು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮಾತನಾಡಿದ್ರೆ ನಿನ್ನ ಬಂಡವಾಳ ಬಟಾ ಬಯಲು ಆಗುತ್ತದೆ. ಕತ್ತಲೆ ಲೋಕದ ಕರಾಳ ಮುಖ ಕಳಚಿ ಬೀಳುತ್ತದೆ ಹುಷಾರು. ನಾನು ಸೇರಿ ಪಕ್ಷೇತರ ಶಾಸಕರ ಬೆಂಬಲದ ಭಿಕ್ಷೆಯಿಂದ ಒಬ್ಬ ಶಾಸಕನಾಗಲೂ ಅರ್ಹತೆ ಇಲ್ಲದವನು ಅಂದು ಸಚಿವನಾದವನು ನೀನು. ನನಗೆ ಹಣ ಕೊಟ್ಟಿದ್ದೆ ಎಂದಿದ್ದೀಯ. ನಿನ್ನಂತಹ ಅಡ್ಡಾದಿಡ್ಡಿ ದಾರಿಯಲ್ಲಿ ಹಣ ಸಂಪಾದಿಸಿದ ಅಡ್ನಾಡಿ ಬಳಿ ಹಣ ಪಡೆಯುವ ದುರ್ದೈವ ನನಗೆ ಬಂದಿಲ್ಲ. ಹೇ.. ಜನಾರ್ದನರೆಡ್ಡಿ ನಾನು ಪಕ್ಷೇತರನಾಗಿ ಗೆದ್ದಾಗ ನನ್ನ ಮನೆ ಮುಂದೆ ಕಾದು ಕುಳಿತವರು ನಿನ್ನ ಪಟಾಲಂ. ಅದನ್ನು ಮರೆಯಬೇಡ ಎಂದು ಕಿಡಿಕಾರಿದ್ದಾರೆ.
ತಮ್ಮುಡು- ತಮ್ಮುಡು ಎಂದು ಗೊಗರೆದು, ಗೆಲುವಿನ ಸಂಭ್ರಮದಲ್ಲಿದ್ದ ನನ್ನನ್ನು ಕಾಲಿಗೆ ಚಪ್ಪಲಿ ಹಾಕಲೂ ಬಿಡದೇ ನಿಮ್ಮವರು ನನ್ನನ್ನು ಕರೆದುಕೊಂಡು ಬಂದರು. ನನ್ನ ಬೆಂಬಲ ತೋರಿಸಿ ನೀವು ಅಣ್ಣ ತಮ್ಮ ಇಬ್ಬರೂ ಮಂತ್ರಿ ಆಗುದ್ದೀರಿ. ನೀನು ಯಾವ ಪುಟ್ಗೋಸಿ ಪಕ್ಷ ಸಂಘಟನೆ ಮಾಡಿದ್ದೀಯ ಅಂಥ ನಿನ್ನ ಮನೆಗೆ ಎರಡು ಸಚಿವ ಸ್ಥಾನ ನೀಡಿದರು. ಅದೆಲ್ಲವೂ ನಾನು ಕೊಟ್ಟ ಬೆಂಬಲ ಹಾಗೂ ನನ್ನ ಕನಕಗಿರಿ ಕ್ಷೇತ್ರದ ಜನತೆ ನಿನಗೆ ನೀಡಿದ ಭಿಕ್ಷೆ ಎಂದು ಕಿಡಿಕಾರಿದ್ದಾರೆ.
ನಮ್ಮ ಹೆಸರಿನಲ್ಲಿ ಯಡಿಯೂರಪ್ಪ ಅವರನ್ನು ಬ್ಲಾಕ್ ಮೇಲ್ ಮಾಡಿದ ಎಡಬಿಡಂಗಿ ಗಿರಾಕಿ ನೀನು. ನನಗೆ ಕರೆ ಮಾಡಿ ದಮ್ಮಯ್ಯ ಎಂದು ಬೇಡಿಕೊಂಡವನು ಈಗ ನಾನು ನಿನ್ನ ಕಾಲಿಗೆ ಬಿದ್ದೆ ಎಂದು ಬಾಲ ಬಿಚ್ಚುತ್ತಿದ್ದೀಯಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನಗೆ ತಾಕತ್ತಿದ್ದರೆ ಕಳೆದ ಬಾರಿ ರಾಜ್ಯಸಭಾ ಚುನಾವಣೆಯಲ್ಲಿ ನನಗೆ ಎಷ್ಟು ಕರೆ ಮಾಡಿದ್ದೀಯ?. ಯಾರಿಗೆ ವೋಟ್ ಹಾಕಿದ್ಯಾ? ಕಾಲ್ ಲಿಸ್ಟ್ ತೆಗೆದು ಬಹಿರಂಗ ಪಡಿಸು. ನಿನ್ನ ಯೋಗ್ಯತೆ, ಪಕ್ಷವಿರೋಧಿ ಬೂಟಾಟಿಕೆ ರಾಜ್ಯದ ಜನತೆಗೆ ಹಾಗೂ ನಿನ್ನ ಬಿಜೆಪಿ ಪಕ್ಷದವರಿಗೆ ತಿಳಿಯಲಿ. ಪುಂಗು ಅಂದ್ರೆ ಹೆಂಗ್ ಪುಂಗ್ಲಿನೇ ಮೀರಿಸೋ ಥರ ನನಗೆ ಹಣ ನೀಡಿದ್ದೇನೆ ಅಂದಿದ್ದೀಯ. ನಿನ್ನ ಮಿಥ್ಯ ಸಾಧನೆ ಜನರಿಗೆ ತಿಳಿದಿದೆ. ನಿನಗೆ ಕಿಂಚಿತ್ ಮಾನ ಮರ್ಯಾದೆ ಇದ್ದರೂ ನನ್ನ ಸವಾಲು ಸ್ವೀಕರಿಸು ಎಂದು ಸವಾಲು ಹಾಕಿದ್ದಾರೆ.
- Bellary Mining Scam
- Chanchalguda Jail
- G Janardhana Reddy
- Gangavathi Bypoll Challenge
- Gangavathi Politics
- Karnataka News
- Karnataka Politics
- Political War
- Shivraj Tangadagi
- Tangadagi vs Reddy
- ಕರ್ನಾಟಕ ರಾಜಕಾರಣ
- ಕಾಂಗ್ರೆಸ್
- ಗಂಗಾವತಿ ರಾಜಕೀಯ
- ಗಣಿ ಲೂಟಿ ಆರೋಪ
- ಚಂಚಲಗುಡ ಜೈಲು
- ಜನಾರ್ದನ ರೆಡ್ಡಿ
- ತಂಗಡಗಿ ವರ್ಸಸ್ ರೆಡ್ಡಿ
- ಬಿಜೆಪಿ
- ಬ್ರಹ್ಮಾವರ ಸುದ್ದಿ.
- ಶಿವರಾಜ್ ತಂಗಡಗಿ
- ಸಚಿವ ತಂಗಡಗಿ ಸವಾಲು





Leave a comment