ಮಧುರೈ (ತಮಿಳುನಾಡು): ತನ್ನ ಪ್ರೇಯಸಿ ಕಳೆದ ಒಂದು ವಾರದಿಂದ ತನ್ನೊಂದಿಗೆ ಮಾತನಾಡುತ್ತಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ 23 ವರ್ಷದ ಯುವಕನೊಬ್ಬ, ಆಕೆಯ ಮನೆ ಬಳಿ ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಆರೋಪಿಯನ್ನು ಲೋಡ್ ಕಾರ್ಮಿಕನಾಗಿರುವ ನಾಗಾರ್ಜುನ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ನಾಗಾರ್ಜುನ ಮತ್ತು ಯುವತಿ ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇತ್ತೀಚೆಗೆ ಆಕೆ ನಾಗಾರ್ಜುನನ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದಳು. ಇದರಿಂದ ಕೋಪಗೊಂಡಿದ್ದ ಆತ, ಮದ್ಯಪಾನ ಮಾಡಿ, ಮುಂಜಾನೆ ಪ್ರೇಯಸಿಯ ಮನೆ ಬಳಿ ಬಂದು ಪೆಟ್ರೋಲ್ ಬಾಂಬ್ ಎಸೆದಿದ್ದಾನೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ, ನಾಗಾರ್ಜುನ ಪೆಟ್ರೋಲ್ ಬಾಂಬ್ ಹಚ್ಚಿ ಎಸೆಯುವುದು ಸ್ಪಷ್ಟವಾಗಿ ಸೆರೆಯಾಗಿದೆ. ಬಾಂಬ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದ್ದು, ಆಕಸ್ಮಿಕವಾಗಿ ಬೆಂಕಿಯ ಕಿಡಿ ಆತನ ಮೇಲೆಯೇ ಬಿದ್ದಿದೆ. ಕೂಡಲೇ ಆತ ಸ್ಥಳದಿಂದ ಓಡಿಹೋಗಿದ್ದಾನೆ. ಘಟನೆ ನಡೆದಾಗ ಸಮೀಪದ ಅಂಗಡಿಯೊಂದರ ಹೊರಗೆ ವ್ಯಕ್ತಿಯೊಬ್ಬ ಮಲಗಿರುವುದನ್ನೂ ವಿಡಿಯೋದಲ್ಲಿ ಕಾಣಬಹುದು. ಸದ್ಯ ಆತನನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದೆ.
ಈ ಘಟನೆಯು ತಮಿಳುನಾಡು ವಿಧಾನಸಭೆಯಲ್ಲಿ ಅಪರಾಧ, ಕಾನೂನು ಸುವ್ಯವಸ್ಥೆ ಮತ್ತು ಮಹಿಳಾ ಸುರಕ್ಷತೆಯ ಬಗ್ಗೆ ಪ್ರತಿಪಕ್ಷ ಮತ್ತು ಆಡಳಿತರೂಢ ಟಿವಿಎಕೆ (TVK) ಪಕ್ಷದ ನಡುವೆ ತೀವ್ರ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ವರದಿಯಾಗಿದೆ.





Leave a comment