ಬೆಂಗಳೂರು: ಕೇಂದ್ರ ಸಚಿವ ಸ್ಥಾನ ಉಳಿಸಿಕೊಳ್ಳುವ ಒದ್ದಾಟದಲ್ಲಿ ಸಚಿವ ಪ್ರಲ್ಹಾದ್ ಜೋಶಿ ಅವರು ಆರೆಸ್ಸೆಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಓಲೈಸುತ್ತಿದ್ದಾರೆ ಎಂದು ಕೆಪಿಸಿಸಿ ನಾಯಕ ಬಿ. ಕೆ. ಹರಿಪ್ರಸಾದ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷವು ಗಾಂಧೀಜಿಯವರ ತತ್ವಾದರ್ಶಗಳನ್ನು ನಂಬಿ ರಾಜಕೀಯ ಮಾಡುತ್ತಿದೆ. ಆದರೆ, ಬಿಜೆಪಿ ಗೋಡ್ಸೆಯ ಸಂತತಿಯೋ ಅಲ್ಲವೋ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ್ದಾರೆ.
“ನಾಥೂರಾಮ್ ಗೋಡ್ಸೆ ಈ ದೇಶದ ಮೊಟ್ಟಮೊದಲ ಭಯೋತ್ಪಾದಕ ಎಂದು ಬಹಿರಂಗವಾಗಿ ಹೇಳುವ ಕನಿಷ್ಠ ಧೈರ್ಯವಾದರೂ ನಿಮಗಿದೆಯೇ?” ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಗೋವು, ಧರ್ಮದ ಹೆಸರಿನಲ್ಲಿ ಧ್ರುವೀಕರಣ
ಚುನಾವಣೆ ಬಂದಾಗಲೆಲ್ಲಾ ಬಿಜೆಪಿಗೆ ಗೋವು, ಧರ್ಮ ಮತ್ತು ಪಾಕಿಸ್ತಾನ ನೆನಪಾಗುತ್ತದೆ. ಇವುಗಳ ಹೆಸರಿನಲ್ಲಿ ಧ್ರುವೀಕರಣ ಮಾಡದೆ ಬಿಜೆಪಿ ಒಂದೇ ಒಂದು ಸಾರ್ವತ್ರಿಕ ಚುನಾವಣೆಯನ್ನಾದರೂ ಗೆದ್ದ ಉದಾಹರಣೆ ಇದೆಯೇ ಎಂದು ಕೇಳಿರುವ ಅವರು, ಜಾಗತಿಕ ಮಟ್ಟದಲ್ಲಿ ಗೋಮಾಂಸ ರಫ್ತು ಮಾಡುವುದರಲ್ಲಿ ಭಾರತ ಮೊದಲ ಎರಡು ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿರುವಾಗ ಬಿಜೆಪಿಯವರು ಯಾಕೆ ಮೌನವಾಗಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.
‘ರಾಜಧರ್ಮ’ದ ನೆನಪು ಕಾಡುತ್ತಿದೆಯೇ?
“ದನ ಕೊಂದವರು ಜೈಲಲ್ಲಿದ್ದಾರೆ, ಮನುಷ್ಯರನ್ನು ಕೊಂದವರು ಅಧಿಕಾರದಲ್ಲಿದ್ದಾರೆ” ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಹರಿಪ್ರಸಾದ್, ಈ ಮಾತಿಗೆ ಬಿಜೆಪಿಯವರು ತಲ್ಲಣಗೊಳ್ಳುತ್ತಿರುವುದೇಕೆ ಎಂದು ಪ್ರಶ್ನಿಸಿದರು. 2002ರ ಗೋದ್ರಾ ಹಿಂಸಾಚಾರದ ಬಳಿಕ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಾರ್ವಜನಿಕವಾಗಿ ‘ರಾಜಧರ್ಮ ಪಾಲಿಸಿ’ ಎಂದು ಹೇಳಿದ್ದು ಯಾರಿಗೆ? ಇಂದಿನ ಗೃಹ ಸಚಿವ ಅಮಿತ್ ಶಾ ಅವರಿಗೆ ಹಳೆಯ ನ್ಯಾಯಾಲಯದ ಪ್ರಕರಣಗಳು ಮತ್ತು ಬಿಹಾರದ ಬಿಜೆಪಿ ನಾಯಕರ ಮೇಲಿರುವ ಕೊಲೆ ಪ್ರಕರಣಗಳ ನೆನಪು ಕಾಡುತ್ತಿದೆಯೇ ಎಂದು ಅವರು ಇಣುಕು ನೋಟ ಬೀರಿದ್ದಾರೆ.
ಹಿಂದುಳಿದವರು, ದಲಿತರು ಮತ್ತು ಆದಿವಾಸಿಗಳ ಭಾವನೆಗಳನ್ನು ಕೆರಳಿಸಿ ಸಮಾಜವನ್ನು ವಿಭಜಿಸುವ ರಾಜಕೀಯ ಮಾಡುತ್ತಿರುವವರು ಇಂದು ಕಾಂಗ್ರೆಸ್ಗೆ ತುಷ್ಟೀಕರಣದ ಪಾಠ ಮಾಡುತ್ತಿರುವುದು ಹಾಸ್ಯಾಸ್ಪದ. ಕಾಂಗ್ರೆಸ್ ಪ್ರಧಾನಿ ಹುದ್ದೆಗೆ ಗೌರವ ತಂದರೆ, ಬಿಜೆಪಿ ಸಾಂವಿಧಾನಿಕ ಹುದ್ದೆಗಳಿಗೆ ಕಳಂಕ ತಂದಿದೆ. ರಾಜ್ಯದ ಜನರು ಈಗಾಗಲೇ ಇಂತಹ ದ್ವೇಷದ ರಾಜಕೀಯಕ್ಕೆ ತಕ್ಕ ಉತ್ತರ ನೀಡಿದ್ದಾರೆ ಎಂದು ಹರಿಪ್ರಸಾದ್ ಕಿಡಿಕಾರಿದ್ದಾರೆ.





Leave a comment