ನಿಜಾಮಾಬಾದ್: ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಅರ್ಮೂರ್ ಮಂಡಲದ ಪೆರ್ಕಿಟ್ ಗ್ರಾಮದಲ್ಲಿರುವ ಭಾರತ್ ಚಂದ್ರ (ಭವಿಷ್ಯ ದರ್ಶಿನಿ) ಖಾಸಗಿ ಶಾಲೆಯಲ್ಲಿ ಸರ್ಕಾರದ ಪೂರ್ವಾನುಮತಿ ಇಲ್ಲದೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉರ್ದು ಭಾಷೆ ಮತ್ತು ನಮಾಜ್ ಕಲಿಸಲಾಗುತ್ತಿದೆ ಎಂಬ ಆರೋಪದ ಮೇಲೆ ಶಾಲಾ ಆಡಳಿತ ಮಂಡಳಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇತ್ತೀಚೆಗಷ್ಟೇ ನೇಮಕಗೊಂಡಿದ್ದ ಹಿಂದಿ ಶಿಕ್ಷಕಿ ಹುಮಾ ಹಾನಿಯಾ ಅವರು ನಿಗದಿತ ಪಠ್ಯಕ್ರಮದ ಬದಲು ಉರ್ದು ಅಕ್ಷರಮಾಲೆಯನ್ನು ಕಲಿಸುತ್ತಿದ್ದರು ಎಂದು ತಹಶೀಲ್ದಾರ್ ಸತ್ಯನಾರಾಯಣ ನೇತೃತ್ವದ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಜೂನ್ 27 ರಂದು ಈ ವಿಷಯ ಆಚೆ ಬರುತ್ತಿದ್ದಂತೆ, ಸ್ಥಳೀಯ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಶಾಲಾ ಆವರಣಕ್ಕೆ ನುಗ್ಗಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಬಿಜೆಪಿ ನಾಯಕರು ಶಾಲೆಯ ಪ್ರಿನ್ಸಿಪಾಲ್ ಅಮೀರ್ ಖಾನ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಸ್ತುತ ಅರ್ಮೂರ್ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ನಿಯಮಬಾಹಿರವಾಗಿ ಉರ್ದು ಬೋಧನೆ ಹಾಗೂ ಧಾರ್ಮಿಕ ವೈಷಮ್ಯ ಉಂಟುಮಾಡಿದ ಆರೋಪದ ಮೇಲೆ ಶಾಲೆಯ ಕರೆಸ್ಪಾಂಡೆಂಟ್ ಮಲ್ಲಯ್ಯ, ಪ್ರಿನ್ಸಿಪಾಲ್ ಅಮೀರ್ ಖಾನ್ ಮತ್ತು ಶಿಕ್ಷಕಿ ವಿರುದ್ಧ ಮೊದಲ ಕೇಸ್ ದಾಖಲಾಗಿದ್ದರೆ, ಶಾಲಾ ಆವರಣಕ್ಕೆ ಅಕ್ರಮವಾಗಿ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಿಜೆಪಿ ಪದಾಧಿಕಾರಿಗಳ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಶಿಕ್ಷಣ ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ತನಿಖೆ ಮುಂದುವರಿಸಿದ್ದಾರೆ.





Leave a comment