SUDDIKSHANA KANNADA NEWS/ DAVANAGERE/ DATE:18-10-2024
ದಾವಣಗೆರೆ: ಕಚೇರಿಯಲ್ಲಿ ಕುಳಿತು ಜಾತಿಗಣತಿ ವರದಿ ಮಾಡಿಲ್ಲ. ಇದು ವೈಜ್ಞಾನಿಕವಾಗಿದೆ. ವರದಿಯೇ ಬಿಡುಗಡೆಯಾಗಿಲ್ಲ. ಆದ್ರೆ, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪರು ಇದೊಂದು ಅವೈಜ್ಞಾನಿಕ ವರದಿ. ಜಾರಿಗೆ ವಿರೋಧವಿದೆ ಎನ್ನುತ್ತಾರೆ. ಈ ವರದಿ ಬಿಡುಗಡೆಯಾದರೆ ಕೆಲ ಪ್ರಭಾವಿ ಸಮುದಾಯಗಳ ಹಿಡಿತ ಕೈ ತಪ್ಪುತ್ತದೆ ಎನ್ನುವ ಭೀತಿ ಕಾಡುತ್ತಿದೆ. ಹಾಗಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಟಾಂಗ್ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1351 ಜಾತಿಗಳ ಹೆಸರು ಪಟ್ಟಿ ಮಾಡಿ ಪ್ರತಿ ಜಾತಿಗೆ ಸಂಬಂಧಿಸಿದಂತೆ 50 ಅಂಶಗಳನ್ನು ಕಲೆ ಹಾಕಲಾಗಿದೆ. ಪರಿಣಿತರು ವರದಿ ಸಿದ್ಧಪಡಿಸಿದ್ದಾರೆ. 22,200 ಸಿಬ್ಬಂದಿ ಕರ್ನಾಟಕದಲ್ಲಿ ಜಾತಿಗಣತಿ ನಡೆಸಿದ್ದಾರೆ. ನಿಜವಾದ ಅಂಕಿಅಂಶಗಳು ಹೊರ ಬಂದರೆ ಎಷ್ಟೋ ಸರ್ಕಾರಿ ಕಚೇರಿಗಳಲ್ಲಿ ಉದ್ಯೋಗ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದ ವರ್ಗಗಳಿಗೆ ಶಕ್ತಿ ಬರುತ್ತದೆ. ಹಾಗಾಗಿ, ಪ್ರಭಾವಿ ಜಾತಿಗಳು ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತೆಂಬ ಕಾರಣಕ್ಕಾಗಿ ವಿರೋಧ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ 13ರಿಂದ 14 ಲಕ್ಷಕ್ಕೂ ಹೆಚ್ಚು ಮಂದಿ ಅಹಿಂದ ವರ್ಗದ ಜನರಿದ್ದಾರೆ. ಆದರೂ ಅವರೇ ಗೆಲ್ಲುತ್ತಾ ಬರುತ್ತಿರುವುದು ಹೇಗೆ? ಅಹಿಂದ ಮತಗಳನ್ನು ಪಡೆದಿಲ್ಲವೇ? ಬೆಂಗಳೂರಿನಲ್ಲಿ ಅಕ್ಟೋಬರ್ 22 ರಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪರು ಸಭೆ ಕರೆದಿದ್ದಾರೆ. ಜಾತಿ ಗಣತಿ ವರದಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುವ ಕುರಿತಂತೆ ನಡೆಯಲಿರುವ ಸಭೆ ಇದಾಗಿದೆ. ಈ ಕಾರಣಕ್ಕೆ ಸಭೆ ನಡೆಸಲಾಗುತ್ತಿದ್ದು, ಇದಕ್ಕೆ ಸಿದ್ದರಾಮಯ್ಯರು ಸೊಪ್ಪು ಹಾಕಬಾರದು ಎಂದು ಮನವಿ ಮಾಡಿದರು.
ಈ ಹಿಂದೆ ಶಾಮನೂರು ಶಿವಶಂಕರಪ್ಪರು ತಮ್ಮ ಸಮುದಾಯದ ಅಧಿಕಾರಿಗಳಿಗೆ ಅನ್ಯಾಯ ಆಗುತ್ತಿದೆ ಎಂಬ ಆರೋಪ ಮಾಡಿದ್ದರು. ಆಗ ದಾಖಲಾತಿ ಪರಿಶೀಲಿಸಿದಾಗ, ಹುದ್ದೆಯಲ್ಲಿ ಯಾವ ಸಮುದಾಯದವರು ಇದ್ದಾರೆ ಎಂಬ ಮಾಹಿತಿ ಹೊರ ಬಂದಿತ್ತು. ಧ್ವನಿ ಇಲ್ಲದವರು, ಪ್ರಾತಿನಿಧ್ಯ ಸಿಗದವರು ಸಾಮಾಜಿಕ ನ್ಯಾಯ ಪಡೆಯಲು ಯಾಕೆ ವಿರೋಧ ಮಾಡಲಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಹಿಂದುಳಿದ ಜಾತಿಗಳಿಗೆ ಸಾಮಾಜಿಕ ನ್ಯಾಯ ಸಿಗಬೇಕೆಂದರೆ ಜಾತಿಗಣತಿ ವರದಿ ಬಿಡುಗಡೆಯಾಲೇಬೇಕು. ವರದಿಯಲ್ಲಿನ ಅಂಶಗಳನ್ನು ರಾಜ್ಯದ ಜನರಿಗೆ ತಿಳಿಸುವ ಜೊತೆಗೆ ಆಡಳಿತದಲ್ಲಿಯೂ ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಜಾತಿ ಗಣತಿ ವರದಿ ಸ್ವೀಕಾರ ಮಾಡಿದ ಬಳಿಕ ಅನಿವಾರ್ಯತೆ ಬಂದರೆ ಸಿದ್ದರಾಮಯ್ಯರು ಸಿಎಂ ಸ್ಥಾನದಿಂದ ಇಳಿಯಲಿ. 5 ಕೋಟಿ ಅಹಿಂದ ವರ್ಗ ರಾಜ್ಯದಲ್ಲಿದ್ದು, ಅವರ ಧ್ವನಿ ಹತ್ತಿಕ್ಕುವವರ ಷಡ್ಯಂತ್ರಕ್ಕೆ ಮಣಿಯಬಾರದು ಎಂದು ಹೇಳಿದರು.