SUDDIKSHANA KANNADA NEWS/ DAVANAGERE/ DATE:25-03-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಂಚಿತ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಔಟ್ ರೀಚ್ ವಿಭಾಗದ ಕರ್ನಾಟಕ ಉಪಾಧ್ಯಕ್ಷರೂ, ಅಹಿಂದ ಯುವ ನಾಯಕ ಜಿ.ಬಿ. ವಿನಯ್ ಕುಮಾರ್ ಜಗಳೂರು ತಾಲೂಕಿನಲ್ಲಿ ಜನರ ಅಭಿಪ್ರಾಯ ಸಂಗ್ರಹಿಸಿದರು.
ಜಗಳೂರು ತಾಲ್ಲೂಕಿನ ಬೆಣ್ಣೆಹಳ್ಳಿ ಸೇರಿದಂತೆ ಕೆಲವು ಗ್ರಾಮಗಳಿಗೆ ಭೇಟಿ ನೀಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ವಿನಯ್ ಕುಮಾರ್ ಅವರು ಮತದಾರರ ಅಭಿಪ್ರಾಯ ಸಂಗ್ರಹಿಸಿದರು.
ಹಳ್ಳಿ ಹಳ್ಳಿಗೆ ಹೋಗುತ್ತಿರುವ ವಿನಯ್ ಕುಮಾರ್ ಅವರಿಗೆ ಜನರು ಅದ್ಧೂರಿಯಾಗಿ ಸ್ವಾಗತ ಕೋರಿದರು. ಟಿಕೆಟ್ ವಂಚಿತರಾದರೂ ಗ್ರಾಮಗಳಿಗೆ ಬರುತ್ತಿರುವುದಕ್ಕೆ ಜನರು ಖುಷಿ ವ್ಯಕ್ತಪಡಿಸಿದರು. ವಿನಯ್ ಕುಮಾರ್ ಹೋದಾಗ ಜನರೆಲ್ಲರೂ ಪಕ್ಷೇತರರಾಗಿ ಕಣಕ್ಕಿಳಿಯುವಂತೆ ಮನವಿ ಮಾಡುತ್ತಿದ್ದಾರೆ.
ನೀವು ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನ ಬಂದಿದ್ದೀರಿ. ಈಗಲೂ ಬರುತ್ತಿದ್ದೀರಾ. ಜನರ ಬಗ್ಗೆ ನಿಮಗಿರುವ ಕಾಳಜಿಗೆ ನಮ್ಮ ವಂದನೆಗಳು. ನಿಮ್ಮಂಥ ರಾಜಕಾರಣಿಗಳು ಬೇಕು, ಚುನಾವಣೆಯಲ್ಲಿ ಗೆದ್ದು ಲೋಕಸಭಾ ಸದಸ್ಯರಾದರೆ ಜಿಲ್ಲೆಯ ಅಭಿವೃದ್ಧಿಯಾಗುವುದರಲ್ಲಿ ಎರಡು ಮಾತಿಲ್ಲ. ನಿಮ್ಮಂಥ ಯುವನಾಯಕರಿಗೆ ಹೆಚ್ಚಿನ ಅವಕಾಶ ಸಿಗುವಂತಾಗಬೇಕು ಎಂದು ಹೇಳುತ್ತಿದ್ದಾರೆ.
ವಿನಯ್ ಕುಮಾರ್ ಅವರೂ ಸಹ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದೆ. ಆದ್ರೆ, ಕೊನೆ ಗಳಿಗೆಯಲ್ಲಿ ತಪ್ಪಿತು. ಜನರಿಗೋಸ್ಕರ, ಸಮಸ್ಯೆಗಳನ್ನು ಪರಿಹರಿಸುವುದಕ್ಕೋಸ್ಕರ, ನೀಡಿದ ಮಾತಿನಂತೆ, ಕೊಟ್ಟ ಭರವಸೆಯಂತೆ ಜನರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದೇನೆ. ಪಕ್ಷೇತರರಾಗಿ ಕಣಕ್ಕಿಳಿಯಬೇಕೋ ಅಥವಾ ಬೇಡವೋ ಎಂಬ ಕುರಿತಂತೆ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಜನರು ಈಗಲೂ ತೋರುತ್ತಿರುವ ಪ್ರೀತಿ, ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ ಎಂದು ಹೇಳುತ್ತಿದ್ದಾರೆ.
ಗ್ರಾಮ ಗ್ರಾಮಗಳಲ್ಲಿಯೂ ವಿನಯ್ ಕುಮಾರ್ ಅವರನ್ನು ಜನರು ಗುರುತಿಸಿ ಮಾತನಾಡಿಸುತ್ತಿದ್ದಾರೆ. ಶಿಕ್ಷಣದ ಬಗ್ಗೆ ಹೊಂದಿರುವ ಕಲ್ಪನೆ, ಜನರ ಬಳಿಗೆ ಬರುತ್ತಿರುವ ರೀತಿ, ಮಾತುಗಳು, ಭರವಸೆಗಳು, ರಾಜಕಾರಣಿಗಳು ಹೇಗೆ ಇರಬೇಕು ಎಂದು ತೋರಿಸಿಕೊಡುತ್ತಿದ್ದಾರೆ. ಇಂಥ ಯುವ ನಾಯಕರಿಗೆ ರಾಜಕಾರಣದಲ್ಲಿ ಅವಕಾಶ ಸಿಗುವಂತಾಗಬೇಕು. ಇದು ನಮ್ಮೆಲ್ಲರ ಆಶಯವಾಗಿದೆ ಎಂದು ಜನರು ಹೇಳುತ್ತಿದ್ದಾರೆ.
ಎಲ್ಲಾ ವರ್ಗದವರು ಪ್ರೀತಿ ತೋರುತ್ತಿದ್ದಾರೆ, ಪ್ರತಿಯೊಂದು ವರ್ಗದ ಜನರೂ ವಿನಯ್ ಕುಮಾರ್ ಅವರ ಬಳಿ ಬಂದು ಸಂಕಷ್ಟ ಹೇಳಿಕೊಳ್ಳುತ್ತಿದ್ದಾರೆ. ನಮ್ಮ ಬಳಿಗೆ ಬಂದಿರುವವರು ನೀವು. ಪಾದಯಾತ್ರೆ ಮೂಲಕ ಜಿಲ್ಲೆಯ ಜನರ ಪ್ರೀತಿ ಸಂಪಾದನೆ ಮಾಡಿದ್ದೀರಾ. ಮತ್ತೆ ಬಂದಿದ್ದು, ಸಂತಸವಾಗಿದೆ. ನಾವೆಲ್ಲರೂ ನಿಮ್ಮ ಪರವಾಗಿದ್ದೇವೆ. ಮುನ್ನೆಡೆಯಿರಿ. ನೀವು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಜನರು ಹೇಳುತ್ತಿದ್ದಾರೆ.
ಇನ್ನು ವಿನಯ್ ಕುಮಾರ್ ಅವರು ಇನ್ನು 12 ದಿನಗಳ ಬಳಿಕ ಅಂತಿಮ ನಿರ್ಧಾರ ಘೋಷಣೆ ಮಾಡಲಿದ್ದಾರೆ. ಜನರಿಂದ ಬಹುತೇಕ ಪಕ್ಷೇತರರಾಗಿ ಕಣಕ್ಕಿಳಿಯಿರಿ ಎಂಬ ಒತ್ತಾಯವೂ ಕೇಳಿ ಬರುತ್ತಿದೆ. ಕೆಲವರು ಈಗ ಒಳ್ಳೆಯ ಹೆಸರು ಮಾಡಿದ್ದೀರಾ. ಮುಂಬರುವ ದಿನಗಳಲ್ಲಿ ಮತ್ತಷ್ಟು ಅವಕಾಶ ಸಿಗುತ್ತವೆ. ಆತುರದ ನಿರ್ಧಾರ ಬೇಡ. ಯೋಚಿಸಿ ತೆಗೆದುಕೊಳ್ಳಿ. ಈಗಿನ್ನು ಯುವಕ ನೀವು. ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಬಂದೇ ಬರುತ್ತವೆ. ಸಮಾಧಾನದಿಂದ ಮುನ್ನಡೆಯಿರಿ ಎಂಬ ಸಲಹೆಗಳೂ ಬರುತ್ತಿವೆ.
ಒಟ್ಟಿನಲ್ಲಿ ವಿನಯ್ ಕುಮಾರ್ ಅವರ ನನ್ನ ನಡಿಗೆ ಮತದಾರರ ಬಳಿಗೆ ಎಂಬ ಅಭಿಯಾನಕ್ಕೂ ಉತ್ತಮ ಸ್ಪಂದನೆ ದೊರಕುತ್ತದೆ. ಯಾವ ನಿರ್ಧಾರಕ್ಕೆ ವಿನಯ್ ಕುಮಾರ್ ಬರುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.