ಶಿವಸಾಗರ (ಅಸ್ಸಾಂ): ಕಷ್ಟದಲ್ಲಿರುವವರಿಗೆ ನೆರವಾಗಲು ವಯಸ್ಸು ತಡೆಯಾಗುವುದಿಲ್ಲ ಎಂಬುದನ್ನು ಅಸ್ಸಾಂನ 103 ವರ್ಷದ ಹಿರಿಯ ಜೀವ ಕನಕಲತಾ ದಾಸ್ ಅವರು ಸಾಬೀತುಪಡಿಸಿದ್ದಾರೆ. ತಾವಿಡೀ ಜೀವಮಾನವಿಡೀ ಕಷ್ಟಪಟ್ಟು ಕಾಯ್ದುಕೊಂಡಿದ್ದ ಸಂಪೂರ್ಣ ಉಳಿತಾಯದ ಹಣವನ್ನು ಇತ್ತೀಚಿನ ಭೀಕರ ಪ್ರವಾಹದಿಂದ ಸಂತ್ರಸ್ತರಾದ ಕುಟುಂಬಗಳಿಗೆ ದೇಣಿಗೆ ನೀಡುವ ಮೂಲಕ ರಾಜ್ಯಾದ್ಯಂತ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅಸ್ಸಾಂನ ಶೋಣಿತ್ಪುರ ಜಿಲ್ಲೆಯ ಮಜ್ರೋಯ್ಮಾರಿ ಗ್ರಾಮದ ನಿವಾಸಿಯಾದ ಕನಕಲತಾ ದಾಸ್ ಅವರು ಶಿವಸಾಗರ ಜಿಲ್ಲೆಯ ಅಮ್ಗುರಿ ಪ್ರದೇಶದಲ್ಲಿ ಪ್ರವಾಹದಿಂದ ಜನರು ಅನುಭವಿಸುತ್ತಿರುವ ಸಂಕಟವನ್ನು ತಿಳಿದು ನೆರವಾಗಲು ನಿರ್ಧರಿಸಿದರು. ನೇರವಾಗಿ ಶಿವಸಾಗರ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಅವರು, ತಮ್ಮ ಸಂಪಾದನೆಯ ಉಳಿತಾಯದಲ್ಲಿದ್ದ ಹಣದಿಂದ ಪ್ರವಾಹ ಪೀಡಿತ 77 ಕುಟುಂಬಗಳಿಗೆ ತಲಾ 2,000 ರೂಪಾಯಿಗಳಂತೆ ಆರ್ಥಿಕ ಸಹಾಯ ಹಸ್ತಾಂತರಿಸಿದರು.
ಕನಕಲತಾ ಅವರ ಈ ಅಭೂತಪೂರ್ವ ಉದಾರತೆಯನ್ನು ಕಂಡು ಜಿಲ್ಲಾಧಿಕಾರಿ ಮೃದುಲ್ ಯಾದವ್ ಹಾಗೂ ಕಚೇರಿಯ ಸಿಬ್ಬಂದಿ ಭಾವುಕರಾದರು. ದೇಣಿಗೆಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ವೃದ್ಧೆಯ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆದರು. ವೃದ್ಧಾಪ್ಯದಲ್ಲೂ ಕನಕಲತಾ ಅವರು ತೋರಿದ ಈ ಸಮಾಜಮುಖಿ ಕಾಳಜಿ ಮತ್ತು ಮಾನವೀಯತೆ ಸಾರ್ವಜನಿಕರಿಗೆ ದೊಡ್ಡ ಪ್ರೇರಣೆಯಾಗಿದೆ.





Leave a comment