SUDDIKSHANA KANNADA NEWS/ DAVANAGERE/ DATE:13-03-2024
ನವದೆಹಲಿ: ಹೈಕೋರ್ಟ್ ವಿಭಾಗೀಯ ಪೀಠವು 5,8,9 ನೇ ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಹೈಕೋರ್ಟ್ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ಸುಪ್ರೀಂ ಗೆ ರೂಪ್ಸ ಹಾಗೂ ಅವರ್ ಸ್ಕೂಲ್ಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕಾರ ಮಾಡಿದ್ದು, ಪರೀಕ್ಷೆ ನಡೆಸದಂತೆ ತಡೆ ಕೊಟ್ಟಿದೆ.
ಇದೀಗ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠದ ಆದೇಶಕ್ಕೆ ತಡೆ ನೀಡಿದ್ದು, ಮೇಲ್ಮನವಿ ಅರ್ಜಿಯ ಸಂಪೂರ್ಣ ವಾದ ಮಂಡಿಸಿ ತೀರ್ಪು ನೀಡುವವರೆಗೂ ಬೋರ್ಡ್ ಎಕ್ಸಾಂ ನಡೆಸಬಾರದು ಎಂದು ಹೇಳಿದೆ. ನ್ಯಾ.ಬೇಲಾ ತ್ರವೇದಿ ಹಾಗೂ ನ್ಯಾ.ಪಂಕಜ್ ಮಿತ್ತಲ್ ಅವರಿಂದ ಆದೇಶ ಹೊರಬಿದ್ದಿದೆ.

ಬೋರ್ಡ್ ಪರೀಕ್ಷೆ ವಿಚಾರವಾಗಿ ಸರ್ಕಾರದ ಸುತ್ತೋಲೆ ರದ್ದು ಗೊಳಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿತ್ತು. ಇದನ್ನು ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ವಿಭಾಗೀಯ ಪೀಠ ಏಕಸದಸ್ಯ
ಪೀಠ ಆದೇಶ ರದ್ದು ಮಾಡಿ ಪರೀಕ್ಷೆ ನಡೆಸಲು ಗ್ರೀನ್ ಸಿಗ್ನಲ್ ನೀಡಿತ್ತು. ಇದನ್ನು ಪ್ರಶ್ನಿಸಿ ರುಪ್ಸಾ ಸುಪ್ರೀಂ ಕೋರ್ಟ್ ಮೆಟ್ಟಲೇರಿತ್ತು.
ಗೊಂದಲದ ನಡುವೆಯೇ ರಾಜ್ಯಾದ್ಯಂತ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆಗಳು ಆರಂಭವಾಗಿ, ರಾಜ್ಯದ ಎಲ್ಲಾ ಶಾಲೆಗಳಲ್ಲೂ ಸೋಮವಾರ ಮೊದಲ ದಿನದ ಪ್ರಥಮ ಭಾಷೆ ಕನ್ನಡ ಭಾಷಾ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ.
ಮಂಗಳವಾರ ಎರಡನೇ ದಿನ ದ್ವಿತೀಯ ಭಾಷೆ ಇಂಗ್ಲೀಷ್ ಭಾಷಾ ಪರೀಕ್ಷೆ ಕೂಡ ನಡೆದಿದೆ. ಇದರ ಮಧ್ಯೆ ಮೌಲ್ಯಾಂಕನ ಪರೀಕ್ಷೆ ರದ್ದು ಪಡಿಸಬೇಕೆಂದು ಖಾಸಗಿ ಶಾಲಾ ಸಂಘಟನೆ ರುಪ್ಸಾ ಸಲ್ಲಿಸಿರುವ ಮೇಲ್ಮನವಿ ಅರ್ಜಿಗೆ ಮನ್ನಣೆ ದೊರೆತಂತಾಗಿದೆ. ಹೀಗಾಗಿ ಸದ್ಯಕ್ಕೆ ನಡೆಸುತ್ತಿರುವ ಪರೀಕ್ಷೆಯನ್ನು ಸ್ಥಗಿತಗೊಳಿಸಬೇಕಿದೆ.