SUDDIKSHANA KANNADA NEWS/ DAVANAGERE/ DATE-01-07-2025
ದಾವಣಗೆರೆ: ಬಿಜೆಪಿ ವಿಧಾನಪರಿಷತ್ ಸದಸ್ಯ ಕೆ. ಎಸ್. ನವೀನ್ ಕುಮಾರ್ ತಾಕತ್ತಿದ್ದರೆ ದಾವಣಗೆರೆಗೆ ಕಾಲಿಡಲಿ. ರೈತರೇ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಗುಡುಗುವ ಮೂಲಕ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸ್ವಪಕ್ಷದ ನಾಯಕನ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.
Read Also This Story: ಇಸ್ಲಾಂ ಧರ್ಮದಂತೆ ವೀರಶೈವ ಲಿಂಗಾಯತ ಒಳಪಂಗಡಗಳು ಒಗ್ಗೂಡಿದ್ರೆ ಕರ್ನಾಟಕದಲ್ಲಿ ನಾವೇ ಹೆಚ್ಚು: ರಂಭಾಪುರಿ ಶ್ರೀ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ. ಎಸ್. ನವೀನ್ ಕುಮಾರ್ ನನಗೆ ಹೇಳಲು ಯಾರು? ತಾಕತ್ತಿದ್ದರೆ ನನ್ನನ್ನು ಪಕ್ಷದಿಂದ ಉಚ್ಚಾಟಿಸಲಿ. ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರಿಗೆ ದೂರು ಕೊಡಲಿ. ಅದನ್ನು ಬಿಟ್ಟು ನನ್ನ ವಿರುದ್ಧ ಹಗುರವಾಗಿ ಮಾತಾಡಿದರೆ ಸಹಿಸಲು ಆಗದು ಎಂದು ಎಚ್ಚರಿಕೆ ನೀಡಿದರು.
ಭದ್ರಾ ಡ್ಯಾಂನ ಬಳಿ ಭದ್ರಾ ಬಲದಂಡೆ ನಾಲೆ ಸೀಳಿ ಕಾಮಗಾರಿ ನಡೆಸಲಾಗುತ್ತಿದೆ. ಈ ಸ್ಥಳಕ್ಕೆ ನವೀನ್ ಕುಮಾರ್ ಗೊತ್ತಿಲ್ಲ. ಭದ್ರಾ ಡ್ಯಾಂ ಕುರಿತಂತೆ ಆಳ, ಅಗಲ ಏನೂ ಗೊತ್ತಿಲ್ಲ. ಸುಮ್ಮನೆ ನನ್ನ ವಿರುದ್ಧ ಮಾತನಾಡಿದರೆ ಸಹಿಸಿಕೊಂಡು ಇರಲ್ಲ. ಹತಾಶ ಭಾವನೆಯಿಂದ ಮಾತನಾಡಿದ್ದಾರೆ. ಕುಡಿಯುವ ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಛೇಡಿಸಿದರು.
ರಾಜ್ಯಾಧ್ಯಕ್ಷರ ಗಮನಕ್ಕೆ ತೆಗೆದುಕೊಂಡು ಬಾ. ವಿಜಯೇಂದ್ರ, ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಹೋಗಿ. ಹೊಸದುರ್ಗ ಚುನಾವಣೆಗೆ ಸ್ಪರ್ಧೆ ಮಾಡಲು ಏನೇನೋ ಮಾತನಾಡುತ್ತೀಯಾ. ನಾವು ರೈತ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ನನ್ನ ಬಗ್ಗೆ ಮಾತನಾಡಲು ನೀನ್ಯಾರು? ಈಗಲೂ ಸವಾಲು ಹಾಕುತ್ತೇನೆ. ತಾಕತ್ತು, ಧಮ್ ಇದ್ದರೆ ಸಸ್ಪೆಂಡ್ ಮಾಡಿಸು. ಹುಷಾರ್, ನನ್ನ ಬಗ್ಗೆ ಮಾತನಾಡಿದರೆ ತಕ್ಕ ಉತ್ತರ ನೀಡುತ್ತೇನೆ ಎಂದು ಗುಡುಗಿದರು.
ಈ ವೇಳೆ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ಮಾಡಾಳ್ ಮಲ್ಲಿಕಾರ್ಜುನ್, ಬಿ. ಜಿ. ಅಜಯ್ ಕುಮಾರ್, ಮಾಜಿ ಶಾಸಕ ಬಸವರಾಜ್ ನಾಯ್ಕ್ ಮತ್ತಿತರರು ಹಾಜರಿದ್ದರು. ಪತ್ರಿಕಾಗೋಷ್ಠಿ ಮುಗಿದ ಬಳಿಕ ವಾಟ್ಸಪ್ ಗ್ರೂಪ್ ನಲ್ಲಿ ನವೀನ್ ಕುಮಾರ್ ದಾವಣಗೆರೆಗೆ ತಾಕತ್ತಿದ್ದರೆ ಕಾಲಿಡಲಿ ಎಂಬ ಮಾತು ಕೈಬಿಡುವಂತೆ ರೇಣುಕಾಚಾರ್ಯ ಮನವಿ ಮಾಡಿದ ಘಟನೆಯೂ ನಡೆದಿದೆ.