SUDDIKSHANA KANNADA NEWS/ DAVANAGERE/ DATE:21-03-2024
ದಾವಣಗೆರೆ: ಯಾವ ದೇವಸ್ಥಾನಕ್ಕಾದರೂ ಬರಲಿ, ಮಠಗಳಿಗಾದರೂ ಬರಲಿ. ಆಣೆ ಮಾಡಲು ಸಿದ್ಧನಿದ್ದೇನೆ. ಬೇರೆಯೊಬ್ಬರ ಜೊತೆ ಹೊಂದಾಣಿಕೆ ಮಾಡಿಕೊಂಡು ಬಿಜೆಪಿ ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಮಾಡುವುದಿಲ್ಲ ಎಂದು ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕಾಗಿ ಹಗಲಿರುಳು ಕೆಲಸ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಬೇಕು. ರಾಜ್ಯದ 28 ಕ್ಷೇತ್ರಗಳಲ್ಲಿಯೂ ಗೆಲ್ಲಬೇಕು.
ದಾವಣಗೆರೆಯಲ್ಲಿಯೂ ಬಿಜೆಪಿ ಗೆಲ್ಲಿಸಬೇಕೆಂಬ ಅಪೇಕ್ಷೆ ನಮ್ಮದು ಎಂದು ಹೇಳಿದರು.
ಹಣಕ್ಕೋಸ್ಕರ ರೇಣುಕಾಚಾರ್ಯ ಸೇರಿದಂತೆ ಇತರರು ಭಿನ್ನಮತೀಯ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಆರೋಪದಲ್ಲಿ ಹುರುಳಿಲ್ಲ. ಇದರ ಅವಶ್ಯಕತೆಯೂ ಇಲ್ಲ. ಬಿಜೆಪಿ ಪಕ್ಷವು ನಮಗೆ ತಾಯಿ ಸಮಾನ. ವದಂತಿಗಳು ಹಾಗೂ ಊಹಾಪೋಹಗಳಿಗೆ ಯಾರೂ ಕಿವಿಗೊಡಬೇಡಿ. ದೇವರು ನಮಗೆ ಆರ್ಥಿಕವಾಗಿ ಶಕ್ತಿ ನೀಡಿದ್ದು, ಇಂಥ ಆಸೆ ನಮ್ಮಲ್ಲಿರುವ ಯಾರಿಗೂ ಇಲ್ಲ. ದುಡ್ಡಿಗಾಗಿ ಇಂಥ ಕೆಲಸಕ್ಕೂ ನಾವು ಕೈ ಹಾಕುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ನಮಗೂ ಆಸ್ತಿ ಇದೆ. ಆಸ್ಪತ್ರೆ, ವ್ಯಾಪಾರ ವಹಿವಾಟು ಸೇರಿದಂತೆ ಇತರೆ ರೀತಿಯಲ್ಲಿ ಶಕ್ತಿಯುತವಾಗಿದ್ದೇವೆ. ಕೆಲವರು ವಿನಾಕಾರಣ ಹಣ ಪಡೆದು ಅಥವಾ ಬೇರೆ ಯಾರಿಗೋ ಸಹಾಯ ಮಾಡಲು ಈ ರೀತಿ ಮಾಡಲಾಗುತ್ತಿದೆ ಎಂಬ ವದಂತಿ ಹಬ್ಬಿಸುತ್ತಿರುವುದು ಸರಿಯಲ್ಲ ಎಂದರು.
ಈಶ್ವರಪ್ಪರ ಪರ ಬ್ಯಾಟಿಂಗ್:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಅವರ ಪುತ್ರ ಕಾಂತೇಶ್ ಗೆ ಟಿಕೆಟ್ ನೀಡಬೇಕಿತ್ತು. ಯಾಕೆ ನಿರಾಕರಿಸಲಾಯಿತು ಎಂಬುದು ಗೊತ್ತಿಲ್ಲ. ಪಕ್ಷದ ವರಿಷ್ಠರು ಈ ಕ್ರಮ ತೆಗೆದುಕೊಂಡಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ. ಆದ್ರೆ, ಈ ವಿಚಾರದಲ್ಲಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಬಗ್ಗೆ ಆರೋಪ ಮಾಡುತ್ತಿರುವ ಕುರಿತಂತೆ ಪ್ರತಿಕ್ರಿಯೆ ನೀಡಲು ನಾನು ದೊಡ್ಡವನಲ್ಲ. ಈಶ್ವರಪ್ಪರ ಕುಟುಂಬಕ್ಕೆ ಟಿಕೆಟ್ ನೀಡಿದ್ದರೆ ತಪ್ಪೇನಾಗುತಿತ್ತು ಎಂಬುದಷ್ಟೇ ನನ್ನ ಭಾವನೆ ಎಂದು ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದರು.
ನಾನು ಸ್ವಾರ್ಥಿ ಅಲ್ಲ. ಎಲ್ಲರಿಗೂ ಒಳ್ಳೆಯದಾಗಬೇಕು ಎಂದು ಬಯಸುವವನು ನಾನು. ಈಗ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಏನೇ ನಿರ್ಧಾರ ತೆಗೆದುಕೊಂಡರೂ ನನ್ನ ಒಬ್ಬನ ಅಭಿಪ್ರಾಯ, ನಿರ್ಧಾರ ಸಾಧ್ಯವಿಲ್ಲ. ಎಲ್ಲರೊಟ್ಟಿಗೆ ಚರ್ಚಿಸಿದ ಬಳಿಕವಷ್ಟೇ ನಿರ್ಧಾರ ಘೋಷಿಸುತ್ತೇವೆ. ಸಮಯ ಇರುವುದರಿಂದ ಕಾಯಿರಿ ಎಂದು ಹೇಳಿದರು.
ಒಟ್ಟಾರೆ ರೇಣುಕಾಚಾರ್ಯರ ನಿಗೂಢ ನಡೆ ಬಿಜೆಪಿಗರಿಗಂತೂ ಟೆನ್ಶನ್ ತಂದಿಟ್ಟುರುವುದು ನಿಜ. ಒಂದೆಡೆ ರೇಣುಕಾಚಾರ್ಯ ಅವರನ್ನು ಸಮಾಧಾನಪಡಿಸುವ ಪ್ರಯತ್ನ ನಡೆಯುತ್ತಿವೆಯಾದರೂ ರೇಣುಕಾಚಾರ್ಯ ಅವರು ಮಾತ್ರ ಯಾವುದಕ್ಕೂ ಜಪ್ಪಯ್ಯ ಎನ್ನುತ್ತಿಲ್ಲ. ನಾವೆಲ್ಲರೂ ಸಭೆ ನಡೆಸಿ ಚರ್ಚಿಸಿ ನಿರ್ಧರಿಸುತ್ತೇವೆ ಎನ್ನುವ ಮೂಲಕ ನಿಗೂಢ ನಡೆ ಇಟ್ಟಿದ್ದಾರೆ. ಯಾವ ನಿರ್ಧಾರಕ್ಕೆ ಬರುತ್ತಾರೆ ಎಂಬ ಕುತೂಹಲವೂ ಕೆರಳಿಸಿದೆ.
ಶಿವಶಂಕರ್ ಹೇಳಿಕೆಗೆ ಪ್ರತಿಕ್ರಿಯಿಸಲ್ಲ:
ಇನ್ನು ಜೆಡಿಎಸ್ ನ ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್ ಅವರು, ಬಿಜೆಪಿಯಲ್ಲಿಒಳಬೇಗುದಿ ಹೆಚ್ಚಿದ್ದು, ಮೈತ್ರಿ ಧರ್ಮ ಪಾಲನೆ ಮಾಡದಿದ್ದರೆ ನಾವು ಲೋಕಸಭೆ ಚುನಾವಣೆಗೆ ಕಣಕ್ಕಿಳಿಯಬೇಕಾಗುತ್ತದೆ. ಇಲ್ಲದಿದ್ದರೆ ನಮಗೆ ಟಿಕೆಟ್ ನೀಡಿ ಎಂಬ ಮನವಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ಕೇಂದ್ರದ ವರಿಷ್ಠರು ಈಗಾಗಲೇ ರಾಜ್ಯದಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿಕೂಟದಡಿ ಚುನಾವಣಾ ಮೈತ್ರಿ ಮಾಡಿಕೊಂಡಿದ್ದಾರೆ. ವರಿಷ್ಠರು ತೆಗೆದುಕೊಂಡಿರುವ ನಿರ್ಧಾರದಂತೆ ಕೆಲಸ ಮಾಡುತ್ತೇವೆ. ಈ ಕುರಿತಂತೆ ಹೆಚ್ಚು ಮಾತನಾಡಲು ಹೋಗಲ್ಲ, ನಾನು ಅಷ್ಟು ದೊಡ್ಡವನೂ ಅಲ್ಲ ಎಂದು ತಿಳಿಸಿದರು.