ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ 22 ವರ್ಷದ ಯುವತಿ ವಾಣಿಶ್ರೀ ಎಂಬುವವರು ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನ ಅಗರಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅಭಿಷೇಕ್ ಎಂಬ ಯುವಕನಿಂದ ನಿರಂತರ ಬ್ಲ್ಯಾಕ್ಮೇಲ್ ಮತ್ತು ಕಿರುಕುಳಕ್ಕೆ ಒಳಗಾಗಿದ್ದೇ ಅವರ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ. ಡೆತ್ ನೋಟ್ ನಲ್ಲಿ ಅಭಿಷೇಕ್ ಎಂಬಾತನ ಕಿರುಕುಳವೇ ಕಾರಣ ಎಂದು ಉಲ್ಲೇಖಿಸಿದ್ದಾರೆ.
ವಾಣಿಶ್ರೀ ಅವರು ಎಚ್ಎಸ್ಆರ್ ಲೇಔಟ್ನ ಪಿಜಿಯಲ್ಲಿ ನೆಲೆಸಿ, ಅಲ್ಲಿನ ಜ್ಯುವೆಲ್ಲರಿ ಸ್ಟೋರ್ ಒಂದರ ಮಾರಾಟ ವಿಭಾಗದಲ್ಲಿ (ಸೇಲ್ಸ್ ಡಿಪಾರ್ಟ್ಮೆಂಟ್) ಕೆಲಸ ಮಾಡುತ್ತಿದ್ದರು. ಅಭಿಷೇಕ್ ಮತ್ತು ವಾಣಿಶ್ರೀ ಹಿಂದೆ ಸಾಗರದಲ್ಲಿ ಪಿಯುಸಿ ಓದುವಾಗ ಸ್ನೇಹಿತರಾಗಿದ್ದರು. ಡಿಗ್ರಿ ಮುಗಿದ ಬಳಿಕ ವಾಣಿಶ್ರೀ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದರು.
ಆದರೆ, ಅಭಿಷೇಕ್ ಫೋನ್ ಕರೆಗಳು, ಸಂದೇಶಗಳು ಹಾಗೂ ಫೋಟೋ-ವಿಡಿಯೋಗಳನ್ನು ಬಳಸಿ ವಾಣಿಶ್ರೀಗೆ ನಿರಂತರವಾಗಿ ಕಿರುಕುಳ ನೀಡಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದನು. ಈ ಕಿರುಕುಳ ಹೆಚ್ಚಾದ ಹಿನ್ನೆಲೆಯಲ್ಲಿ ವಾಣಿಶ್ರೀ ಡೆತ್ನೋಟ್ ಬರೆದಿಟ್ಟು, ಅಗರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಸಹೋದರಿ ಪೂಜಾ ನೀಡಿದ ದೂರಿನ ಮೇರೆಗೆ ಎಚ್ಎಸ್ಆರ್ ಲೇಔಟ್ ಪೊಲೀಸರು ಬಿಎನ್ಎಸ್ ಸೆಕ್ಷನ್ 108ರ ಅಡಿಯಲ್ಲಿ (ಆತ್ಮಹತ್ಯೆಗೆ ಪ್ರಚೋದನೆ) ಅಭಿಷೇಕ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಅಭಿಷೇಕ್ ವಿರುದ್ಧ ಕಠಿಣ ಕಾನೂನು ಕ್ರಮ ಆಗಬೇಕು. ಮತ್ತೆ ಈ ರೀತಿಯ ಪ್ರಕರಣ ಮರುಕಳಿಸದಂತ ಶಿಕ್ಷೆ ವಿಧಿಸಬೇಕು ಎಂದು ಮೃತಳ ಪೋಷಕರು ಆಗ್ರಹಿಸಿದ್ದಾರೆ.





Leave a comment