ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸೋಮವಾರ ವಿಧಾನಸಭೆಯಲ್ಲಿ ಹಲವು ಹೊಸ ಕಲ್ಯಾಣ ಯೋಜನೆಗಳನ್ನು ಪ್ರಕಟಿಸಿದ್ದಾರೆ.
2027ರ ಪೊಂಗಲ್ ಹಬ್ಬದಿಂದ ಜಾರಿಗೆ ಬರುವ ‘ಅನ್ನಪೂರಣಿ ಸೂಪರ್ ಸಿಕ್ಸ್’ (Annapoorani Super Six) ಯೋಜನೆಯಡಿ, ವಾರ್ಷಿಕ 2.5 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ವರ್ಷಕ್ಕೆ 3 ಎಲ್ಪಿಜಿ ಗ್ಯಾಸ್ (LPG) ಸಿಲಿಂಡರ್ಗಳನ್ನು ಉಚಿತವಾಗಿ ನೀಡಲಾಗುವುದು.
ಈ ಯೋಜನೆಯಿಂದ ಸುಮಾರು 1.30 ಕೋಟಿ ಕುಟುಂಬಗಳಿಗೆ ಲಾಭವಾಗಲಿದ್ದು, ರಾಜ್ಯ ಬೊಕ್ಕಸಕ್ಕೆ ವಾರ್ಷಿಕ 4,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಸಿಲಿಂಡರ್ ಖರೀದಿಸಿದ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಮಹಿಳೆಯರ ಉಚಿತ ಬಸ್ ಪ್ರಯಾಣದ ಯೋಜನೆಯನ್ನು ವಿಸ್ತರಿಸಲಾಗಿದ್ದು, ಅಕ್ಟೋಬರ್ 2ರ ಗಾಂಧಿ ಜಯಂತಿಯಿಂದ ‘ವೆಟ್ರಿ ಪಯಣಂ’ (ಗೆಲುವಿನ ಪಯಣ) ಹೆಸರಿನಲ್ಲಿ ಜಾರಿಗೊಳ್ಳಲಿದೆ. ಇದರ ಅನ್ವಯ ಮಹಿಳೆಯರು ಕೇವಲ ಸಾಮಾನ್ಯ ಬಸ್ಗಳಲ್ಲಿ ಮಾತ್ರವಲ್ಲದೆ ಎಕ್ಸ್ಪ್ರೆಸ್, ಎಲ್ಎಸ್ಎಸ್, ಡಿಲಕ್ಸ್ ಹಾಗೂ ಅಂತರ್-ಜಿಲ್ಲಾ ಬಸ್ಗಳಲ್ಲೂ ಉಚಿತವಾಗಿ ಪ್ರಯಾಣಿಸಬಹುದು. ಇದರ ಜತೆಗೆ, ತೃತೀಯಲಿಂಗಿಗಳಿಗೂ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಸಿಎಂ ಘೋಷಿಸಿದ್ದಾರೆ.
ಇದೇ ವೇಳೆ ರೈತರ ಮತ್ತು ಸ್ಥಳೀಯರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಚೆನ್ನೈ ಸಮೀಪದ ಪರಂದೂರಿನಲ್ಲಿ ಉದ್ದೇಶಿತ ವಿಮಾನ ನಿಲ್ದಾಣ ಯೋಜನೆಯನ್ನು ಕೈಬಿಡಲಾಗುವುದು ಮತ್ತು ಪರ್ಯಾಯ ಸ್ಥಳವನ್ನು ಹುಡುಕಲಾಗುವುದು ಎಂದು ಸಿಎಂ ವಿಜಯ್ ಸ್ಪಷ್ಟಪಡಿಸಿದ್ದಾರೆ. ಹಾಗೆಯೇ, ಮೀನಂಬಾಕ್ಕಂನಲ್ಲಿರುವ ಹಾಲಿ ಚೆನ್ನೈ ವಿಮಾನ ನಿಲ್ದಾಣದಲ್ಲೇ ಹೊಸ ‘ಟರ್ಮಿನಲ್ 5’ ಅನ್ನು ನಿರ್ಮಿಸುವುದಾಗಿ ಅವರು ತಿಳಿಸಿದ್ದಾರೆ.





Leave a comment