ಬೆಂಗಳೂರು: ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಅನ್ನು ಎರಡು ಚರಣಗಳಿಗಿಂತ ಹೆಚ್ಚು ಹಾಡಿದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂಬ ಸಚಿವ ಶಿವರಾಜ್ ತಂಗಡಗಿ ಅವರ ಹೇಳಿಕೆಗೆ ಹಿಂದುತ್ವ ಹೋರಾಟಗಾರ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಚಿವರಿಗೆ ನೇರ ಸವಾಲು ಎಸೆದಿರುವ ಸೂಲಿಬೆಲೆ, “ವಂದೇ ಮಾತರಂ ಸ್ವಾತಂತ್ರ್ಯ ಸಂಗ್ರಾಮದ ಉಸಿರಾಗಿತ್ತು. ಇದನ್ನು ಹಾಡಲು ಸರ್ಕಾರದ ಅಪ್ಪಣೆ ಪಡೆಯಬೇಕಾದ ಅಗತ್ಯವಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
ವಂದೇ ಮಾತರಂ ಎರಡು ಚರಣಗಳಿಗಿಂತ ಹೆಚ್ಚು ಹಾಡಿದರೆ ಸಚಿವ ತಂಗಡಗಿಯವರು ಕ್ರಮ ಜರುಗಿಸುತ್ತಾರಂತೆ!
ಶಭಾಷ್! ಸ್ವಾತಂತ್ರ್ಯ ಸಂಗ್ರಾಮದ ಉಸಿರಾಗಿದ್ದ ವಂದೇ ಮಾತರಂ ಅನ್ನು ಹಾಡಲು ಈ ಕೊತ್ವಾಲರ ಅಪ್ಪಣೆ ಪಡೆಯಬೇಕಾಯ್ತಲ್ಲ! ಆದರೆ ನಾವು ಈ ಸವಾಲನ್ನು ಸ್ವೀಕರಿಸುತ್ತಿದ್ದೇವೆ. ನಿನ್ನೆಯೂ ವಂದೇ ಮಾತರಂ ಪೂರ್ತಿ ಹಾಡಿದ್ದೇವೆ, ಇಂದೂ ಹಾಡುತ್ತೇವೆ, ನಾಳೆಯೂ ಕೂಡ. ಇನ್ನು ಮುಂದೆ ವೇದಿಕೆಯ ಎಲ್ಲ ಕಾರ್ಯಕ್ರಮಗಳೂ ಪೂರ್ಣ ವಂದೇ ಮಾತರಂನೊಂದಿಗೇ ಮುಗಿಯಲಿ. ತಾಕತ್ತಿದ್ದರೆ ಕ್ರಮ ಜರುಗಿಸಿ.
- ಚಕ್ರವರ್ತಿ ಸೂಲಿಬೆಲೆ, ಹಿಂದುತ್ವ ಹೋರಾಟಗಾರ ಹಾಗೂ ವಾಗ್ಮಿ
ಸರ್ಕಾರಿ ನಿಯಮಾವಳಿಗಳ ಪ್ರಕಾರ ರಾಷ್ಟ್ರೀಯ ಗೀತೆಯ ನಿಗದಿತ ಚರಣಗಳನ್ನು ಮಾತ್ರ ಹಾಡಬೇಕೆಂಬುದು ಸರ್ಕಾರದ ವಾದವಾದರೆ, ಈ ನಿರ್ಬಂಧ ರಾಷ್ಟ್ರಪ್ರೇಮದ ಭಾವನೆಗೆ ಧಕ್ಕೆ ತರುತ್ತದೆ ಎಂಬುದು ಸೂಲಿಬೆಲೆ ಅವರ ಆರೋಪ. “ನಾವು ನಿನ್ನೆಯೂ ಸಂಪೂರ್ಣ ವಂದೇ ಮಾತರಂ ಹಾಡಿದ್ದೇವೆ, ಇಂದೂ ಹಾಡುತ್ತೇವೆ, ನಾಳೆಯೂ ಹಾಡುತ್ತೇವೆ. ಮುಂಬರುವ ನಮ್ಮ ಎಲ್ಲಾ ವೇದಿಕೆ ಕಾರ್ಯಕ್ರಮಗಳು ಪೂರ್ಣ ವಂದೇ ಮಾತರಂನೊಂದಿಗೆ ಮುಕ್ತಾಯಗೊಳ್ಳಲಿವೆ. ತಾಕತ್ತಿದ್ದರೆ ಕ್ರಮ ಜರುಗಿಸಿ” ಎಂದು ನೇರ ಸವಾಲು ಹಾಕಿದ್ದಾರೆ.
ಈ ಹೇಳಿಕೆಯು ರಾಜ್ಯ ರಾಜಕೀಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರದ ಆದೇಶ ಮತ್ತು ರಾಷ್ಟ್ರಪ್ರೇಮಿಗಳ ಸವಾಲಿನ ನಡುವೆ ಹೊಸ ಜಟಾಪಟಿಗೆ ಕಾರಣವಾಗಿದೆ.





Leave a comment