ದಾವಣಗೆರೆ: ಮೇಲ್ನೋಟಕ್ಕೆ ನೇಣು ಬಿಗಿದುಕೊಂಡ ಆತ್ಮಹತ್ಯೆಯಂತೆ ಕಂಡುಬಂದಿದ್ದ ಸಾವಿನ ಪ್ರಕರಣವೊಂದು, ಈಗ ಮೃತನ ಮುಗ್ಧ ಮಗಳು ಬಿಚ್ಚಿಟ್ಟ ಸತ್ಯದಿಂದಾಗಿ ಭೀಕರ ಕೊಲೆಯ ತಿರುವು ಪಡೆದುಕೊಂಡಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
15 ವರ್ಷಗಳ ಹಳೆಯ ಪರಿಚಯ:
ಅಜ್ಜಿಹಳ್ಳಿಯ ನಿವಾಸಿ ಶಕ್ತಿಕುಮಾರ್ ಎಂಬವರ ತಾಯಿ ಹಾಲಮ್ಮಳಿಗೆ ಸುಮಾರು 15 ವರ್ಷಗಳ ಹಿಂದೆ ಗೋಪಾಲ್ ಎಂಬಾತನ ಪರಿಚಯವಾಗಿತ್ತು. ದಿನಗಳೆದಂತೆ ಆ ಪರಿಚಯ ಸಲುಗೆಯಾಗಿ ಬದಲಾಗಿ, ಗೋಪಾಲ್ ಅದೇ ಮನೆಯಲ್ಲಿ ಠಿಕಾಣಿ ಹೂಡಿದ್ದ. ಹಾಲಮ್ಮನ ಜೊತೆಯಲ್ಲೇ ವಾಸವಿದ್ದ ಈತ, ಇತ್ತೀಚೆಗೆ ಅದೇ ಮನೆಯ ಸೊಸೆ, ಅಂದರೆ ಶಕ್ತಿಕುಮಾರ್ನ ಪತ್ನಿಯ ಮೇಲೆಯೂ ಕಣ್ಣಾಕಿದ್ದ ಎನ್ನಲಾಗಿದೆ.
ಅತ್ತೆ ಊರು ಬಿಡುತ್ತಿದ್ದಂತೆ ಶುರುವಾಯ್ತು ಕಳ್ಳಾಟ:
ಕಳೆದ ಮೂರು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಾಲಮ್ಮ ಚಿಕಿತ್ಸೆಗಾಗಿ ಮಗಳ ಮನೆಗೆ ತೆರಳಿದ್ದರು. ಮನೆಯಲ್ಲಿ ಶಕ್ತಿಕುಮಾರ್, ಆತನ ಪತ್ನಿ ಹಾಗೂ ಗೋಪಾಲ್ ಮಾತ್ರವೇ ಇದ್ದರು. ಇದೇ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ
ಗೋಪಾಲ್ ಮತ್ತು ಸೊಸೆ ಸಲುಗೆಯಿಂದ ಇರಲು ಶುರುಮಾಡಿದ್ದರು. ಇವರ ಅಕ್ರಮ ಸಂಬಂಧಕ್ಕೆ ಶಕ್ತಿಕುಮಾರ್ ಅಡ್ಡಲಾಗಿದ್ದರಿಂದ, ಆತನನ್ನು ಮುಗಿಸಲು ಇಬ್ಬರೂ ಸಂಚು ರೂಪಿಸಿದ್ದರು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ಆತ್ಮಹತ್ಯೆ ಅಂದುಕೊಂಡವರಿಗೆ ಶಾಕ್ ಕೊಟ್ಟ ಕಂದಮ್ಮ:
ಮನೆಯಲ್ಲಿ ಶಕ್ತಿಕುಮಾರ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಗ, ಆರಂಭದಲ್ಲಿ ಎಲ್ಲರೂ ಇದನ್ನು ಆತ್ಮಹತ್ಯೆ ಎಂದೇ ಭಾವಿಸಿದ್ದರು. ಆದರೆ ಇಡೀ ಪ್ರಕರಣಕ್ಕೆ ಅಸಲಿ ಟ್ವಿಸ್ಟ್ ಕೊಟ್ಟಿದ್ದು ಶಕ್ತಿಕುಮಾರ್ನ ಮುಗ್ಧ ಮಗಳು. ತನ್ನ ತಂದೆಯ ಮೇಲೆ ತಾಯಿ ಹಾಗೂ ಗೋಪಾಲ್ ಇಬ್ಬರೂ ಸೇರಿ ಮನಸೋಇಚ್ಛೆ ಹಲ್ಲೆ ನಡೆಸಿದ್ದನ್ನು ಬಾಲಕಿ ಕಣ್ಣಾರೆ ಕಂಡಿದ್ದಳು. ಅಪ್ಪನ ಸಾವಿಗೆ ಅವರಿಬ್ಬರೇ ಕಾರಣವೆಂದು ಸಂಬಂಧಿಕರೆದುರು ಕಣ್ಣೀರಿಡುತ್ತಾ ಆಕೆ ಅಸಲಿ ಸತ್ಯ ಬಿಚ್ಚಿಟ್ಟಿದ್ದಾಳೆ.
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಪತ್ನಿ ಹಾಗೂ ಆಕೆಯ ಪ್ರಿಯಕರ ಗೋಪಾಲ್ ಸೇರಿಕೊಂಡು ಉಸಿರುಗಟ್ಟಿಸಿ ಕೊಂದು, ನಂತರ ನೇಣು ಹಾಕಿ ಆತ್ಮಹತ್ಯೆಯ ಕಥೆ ಕಟ್ಟಿದ್ದಾರೆ ಎಂದು ಮೃತನ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಂಪೂರ್ಣ ಸತ್ಯಾಸತ್ಯತೆ ಬಯಲಾಗಲಿದೆ.





Leave a comment