ನಿಜಾಮಾಬಾದ್ (ತೆಲಂಗಾಣ): “ನನ್ನ ತಂಗಿಗೆ ಬಂದ ಸ್ಥಿತಿ ಇನ್ಯಾವ ಹೆಣ್ಣುಮಗಳಿಗೂ ಬರಬಾರದು. ಕಾನೂನು ಮತ್ತು ಸರ್ಕಾರ ನಮಗೆ ನ್ಯಾಯ ನೀಡಲಿಲ್ಲ. ಹಾಗಾಗಿ ಆ ರಾಕ್ಷಸನನ್ನು ನಾನೇ ಮುಗಿಸಿದ್ದೇನೆ!” – ಇದು ತನ್ನ ಗರ್ಭಿಣಿ ತಂಗಿಯನ್ನು ಭೀಕರವಾಗಿ ಕೊಂದ ಹಂತಕನನ್ನೇ ಸಾರ್ವಜನಿಕವಾಗಿ ಹತ್ಯೆ ಮಾಡಿ, ಸೆಲ್ಫಿ ವಿಡಿಯೋ ಬಿಡುಗಡೆ ಮಾಡಿದ ರೋಷಾವಿಷ್ಟ ಅಣ್ಣನೊಬ್ಬನ ಕಣ್ಣೀರಿನ ಮಾತುಗಳು!
ತೆಲಂಗಾಣದ ನಿಜಾಮಾಬಾದ್ನ ರಾಜರಾಜೇಂದ್ರ ಚೌರಸ್ತಾದಲ್ಲಿ ನಡೆದ ಈ ಭೀಕರ ಪ್ರತೀಕಾರದ ಕೊಲೆ ಇಡೀ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಪ್ರೀತಿ, ಮದುವೆ ಹಾಗೂ ರಕ್ತಸಿಕ್ತ ಅಂತ್ಯ:
ಕೋರುಟ್ಲ ಮಂಡಲದ ಮಡಪೂರ್ ಗ್ರಾಮದ ಪ್ರಸಿದ್ಧ ಯೂಟ್ಯೂಬರ್ ವೈಷ್ಣವಿ ಹಾಗೂ ಚಿತ್ತಾರಿ ಹರಿಬಾಬು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ಕಲಹದಿಂದಾಗಿ ಮಾರ್ಚ್ 17, 2026ರಂದು ಹರಿಬಾಬು, 5 ತಿಂಗಳ ಗರ್ಭಿಣಿಯಾಗಿದ್ದ ತನ್ನ ಪತ್ನಿ ವೈಷ್ಣವಿಯನ್ನು ತವರು ಮನೆಯಲ್ಲೇ ಭೀಕರವಾಗಿ ಕೊಲೆ ಮಾಡಿದ್ದನು. ಈ ಪ್ರಕರಣದಲ್ಲಿ ಜೈಲು ಸೇರಿದ್ದ ಹರಿಬಾಬು ಜುಲೈನಲ್ಲಿ ಜಾಮೀನಿನ ಮೇಲೆ ಹೊರಬಂದು ನಿಜಾಮಾಬಾದ್ನಲ್ಲಿ ಆರಾಮಾಗಿ ಓಡಾಡಿಕೊಂಡಿದ್ದನು.
ನಡುರಸ್ತೆಯಲ್ಲಿ ಕಾರಿನಲ್ಲಿ ಬಂದು ಅಟ್ಯಾಕ್:
ಮಧ್ಯಾಹ್ನ ನಿಜಾಮಾಬಾದ್ನ ಮುಖ್ಯರಸ್ತೆಯಲ್ಲಿ ಹರಿಬಾಬು ನಿಂತಿದ್ದಾಗ, ವೈಷ್ಣವಿಯ ಸಹೋದರ ಗಂಧಂ ಸಂತೋಷ್ ಕಾರಿನಲ್ಲಿ ಬಂದು ಚಾಕುವಿನಿಂದ ಆತನ ಕುತ್ತಿಗೆ ಹಾಗೂ ತಲೆಗೆ ತೀವ್ರವಾಗಿ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಹರಿಬಾಬು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸೆಲ್ಫಿ ವಿಡಿಯೋ ವೈರಲ್, ಶರಣಾಗತಿ:
ಕೊಲೆಯ ನಂತರ ಸಂತೋಷ್ ಸೆಲ್ಫಿ ವಿಡಿಯೋ ಬಿಡುಗಡೆ ಮಾಡಿ, “ನಮಗೆ ನ್ಯಾಯ ಸಿಗದ ಕಾರಣ ನಾನೇ ಪ್ರತೀಕಾರ ತೀರಿಸಿಕೊಂಡಿದ್ದೇನೆ, ಸಾರ್ವಜನಿಕರು ನನ್ನ ಬೆಂಬಲಕ್ಕೆ ನಿಲ್ಲಬೇಕು” ಎಂದು ಕಣ್ಣೀರಿಟ್ಟು ವಿನಂತಿಸಿದ್ದಾನೆ. ಸಂತೋಷ್ ಪತ್ನಿ ಸಾನಿಯಾ ಕೂಡ ತಮ್ಮ ಕುಟುಂಬ ಹಾಗೂ ಮಕ್ಕಳ ಭವಿಷ್ಯಕ್ಕಾಗಿ ಜನ ಬೆಂಬಲ ಕೋರಿದ್ದಾರೆ. ಪ್ರಸ್ತುತ ಆರೋಪಿ ಸಂತೋಷ್ ಕೋರುಟ್ಲ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.





Leave a comment