ಉಧಂಪುರ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ತಡರಾತ್ರಿಯ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಪ್ರಮುಖ ಉಗ್ರರನ್ನು ಹೊಡೆದುರುಳಿಸಲಾಗಿದೆ.
ಮಿಂಚಿನ ಕಾರ್ಯಾಚರಣೆ ಹೇಗೆ ನಡೆಯಿತು?
ಉಧಂಪುರ ಜಿಲ್ಲೆಯ ಸೋಹನ್ ಹಾಗೂ ಮಜಾಲ್ತಾ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಶಂಕಿತ ಭಯೋತ್ಪಾದಕರ ನುಸುಳುವಿಕೆ ಮತ್ತು ಅನುಮಾನಾಸ್ಪದ ಚಲನವಲನಗಳ ಕುರಿತು ಜಾಗರೂಕತಾ ಪಡೆಯ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಭಾರತೀಯ ಸೇನೆ, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ ಮತ್ತು ಜಮ್ಮು ಅಂಡ್ ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (SOG) ಜಂಟಿಯಾಗಿ ಪ್ರದೇಶವನ್ನು ಸುತ್ತುವರೆದು ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಿದವು.
ಇತ್ತೀಚಿನ ಸರಣಿ ಕಾರ್ಯಾಚರಣೆಗಳು:
ಕಳೆದ ಸೆಪ್ಟೆಂಬರ್ 5 ರಂದು ಮಧ್ಯ ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಯೂಸ್ ಮರ್ಗ್ ಅರಣ್ಯ ಪ್ರದೇಶದಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಯ ಕಮಾಂಡರ್ ‘ಯಾಸಿರ್’ ಎಂಬಾತನನ್ನು ಯೋಧರು ಶೂಟ್ ಮಾಡಿ ಕೊಂದಿದ್ದರು. ಆ ಘಟನೆಯ ಬೆನ್ನಲ್ಲೇ ಇದೀಗ ಉಧಂಪುರದಲ್ಲೂ ಇಬ್ಬರು ಉಗ್ರರು ಖತಂ ಆಗಿರುವುದು ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಜಾಲವನ್ನು ಮತ್ತಷ್ಟು ಬಲಪಡಿಸಿದೆ.
ಸದ್ಯ ಸೋಹನ್ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಇನ್ನು ಯಾರಾದರೂ ಉಗ್ರರು ಅಡಗಿದ್ದಾರೆಯೇ ಎಂಬ ಅನುಮಾನದಿಂದ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿವೆ.





Leave a comment