ಧಾರವಾಡ: ಜಮೀನು ದಾಖಲೆಗಳ ತಿದ್ದುಪಡಿ ಹಾಗೂ ಪೋಡಿ ಕಾರ್ಯ ಮಾಡಿಕೊಡಲು ರಿಯಲ್ ಎಸ್ಟೇಟ್ ಡೆವಲಪರ್ ಒಬ್ಬರಿಂದ ₹50 ಲಕ್ಷ ನಗದು ಲಂಚ ಸ್ವೀಕರಿಸುತ್ತಿದ್ದ ಧಾರವಾಡ ತಹಶೀಲ್ದಾರ್ ಸಚಿದಾನಂದ ಕುಚನೂರು ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ತಡರಾತ್ರಿ ರಂಗೇಹಾತ್ ಬಂಧಿಸಿದ್ದಾರೆ.
ಘಟನೆಯ ವಿವರ:
ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದಲ್ಲಿ ಡೆವಲಪರ್ ಒಬ್ಬರು ಸುಮಾರು 33 ಎಕರೆ ಜಮೀನು ಖರೀದಿಸಿದ್ದರು. ಈ ಜಮೀನಿನ ಸಾಗುವಳಿ ಮತ್ತು ಖರಾಬು ಭೂಮಿಯ ದಾಖಲೆಗಳ ತಿದ್ದುಪಡಿ ಹಾಗೂ ಹೊಸದಾಗಿ ‘ಪೋಡಿ’ (ಉಪ-ವಿಭಾಗ) ಮಾಡಿಕೊಡಲು ಅರ್ಜಿ ಸಲ್ಲಿಸಲಾಗಿತ್ತು.
ಈ ಕೆಲಸಕ್ಕೆ ತಹಶೀಲ್ದಾರ್ ಸಚಿದಾನಂದ ಕುಚನೂರು ಅವರು 1 ಎಕರೆ ಜಮೀನು ಹಾಗೂ ₹50 ಲಕ್ಷ ನಗದು ಹಣ ನೀಡುವಂತೆ ಬೇಡಿಕೆಯಿಟ್ಟಿದ್ದರು. ಇದರಿಂದ ಬೇಸತ್ತ ಡೆವಲಪರ್ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರಿಗೆ ದೂರು ನೀಡಿದ್ದರು.
ಕೆಸಿಡಿ ಗ್ರೌಂಡ್ ಬಳಿ ದಾಳಿ:
ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ತಹಶೀಲ್ದಾರ್ಗೆ ಬಲೆ ಬೀಸಿದ್ದರು. ತಹಶೀಲ್ದಾರ್ ಸೂಚನೆಯಂತೆ ಕೆಸಿಡಿ ಗ್ರೌಂಡ್ (KCD Ground) ಬಳಿ ಕೆಂಪು ಬಣ್ಣದ ಚೀಲದಲ್ಲಿದ್ದ ₹50 ಲಕ್ಷ ಹಣವನ್ನು ಸ್ವೀಕರಿಸಿ, ಅದನ್ನು ತಮ್ಮ ಬಳಿಯಿದ್ದ ಮತ್ತೊಂದು ಚೀಲಕ್ಕೆ ಹಾಕಿಕೊಳ್ಳುತ್ತಿದ್ದಂತೆಯೇ ಲೋಕಾಯುಕ್ತ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.





Leave a comment