SUDDIKSHANA KANNADA NEWS/ DAVANAGERE/ DATE:30-10-2024
ದಾವಣಗೆರೆ: ನ್ಯಾಮತಿ ಪಟ್ಟಣದ ನೆಹರೂ ರಸ್ತೆಯಲ್ಲಿನ ಎಸ್ ಬಿ ಐ ಬ್ಯಾಂಕ್ ನಲ್ಲಿ ಸುಮಾರು 13 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನ ಪ್ರಕರಣದ ಬಳಿಕ ಗ್ರಾಹಕರಲ್ಲಿ ಢವ ಢವ ಶುರುವಾಗಿದೆ. ಬ್ಯಾಂಕ್ ನಲ್ಲಿಟ್ಟಿದ್ದ ಬಂಗಾರದ ಒಡವೆಗಳು ಮತ್ತೆ ಸಿಗುತ್ತೋ ಇಲ್ಲವೋ ಎಂಬ ಆತಂಕದಲ್ಲಿ ಗ್ರಾಹಕರು ಕಾಲ ಕಳೆಯುವಂತಾಗಿದೆ.
ಕಳವು ಪ್ರಕರಣ ಗೊತ್ತಾಗುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಬ್ಯಾಂಕ್ ನತ್ತ ದೌಡಾಯಿಸಿದ್ದಾರೆ. ನಾನು ಅಷ್ಟು ಬಂಗಾರ ಇಟ್ಟಿದ್ದೆ, ಇಷ್ಟು ಬಂಗಾರ ಇಟ್ಟಿದ್ದೆ, ಹಣವನ್ನೂ ಠೇವಣಿ ಮಾಡಿದ್ದೆ ಎಂಬ ಮಾತುಗಳು ಸಾಮಾನ್ಯವಾಗಿ ಕೇಳಿ ಬರುತ್ತಿವೆ.
ಕುಟುಂಬದ ನಿರ್ವಹಣೆಗಾಗಿ ಕೆಲವರು ಬಂಗಾರದ ಸರ, ಆಭರಣ, ಉಂಗುರ ಸೇರಿದಂತೆ ಚಿನ್ನಾಭರಣಗಳನ್ನು ಬ್ಯಾಂಕ್ ನಲ್ಲಿ ಅಡವಿಟ್ಟಿದ್ದರು. ಆದ್ರೆ, ಈಗ ಕಳ್ಳತನವಾಗಿರುವುದು ಗ್ರಾಹಕರ ಭಯ ಹೆಚ್ಚಾಗುವಂತೆ ಮಾಡಿದೆ. ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿ ಕಳವು ಪ್ರಕರಣ ಬಳಿಕ ಶಾಕ್ ಗೆ ಒಳಗಾಗಿದ್ದು, ಅವರೂ ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಇದು ಗ್ರಾಹಕರ ಆತಂಕ ಮತ್ತಷ್ಟು ಜಾಸ್ತಿಯಾಗುವಂತೆ ಮಾಡಿದೆ.
ಕೆಲವರು ದೀಪಾವಳಿ ಹಬ್ಬಕ್ಕೆ ಬಂಗಾರದ ಒಡವೆ ಬಿಡಿಸಿಕೊಳ್ಳುವ ಧಾವಂತದಲ್ಲಿದ್ದರೆ, ಮತ್ತೆ ಕೆಲವರು ಮಕ್ಕಳ ಮದುವೆ ವೇಳೆ ಬಂಗಾರದ ಒಡವೆ ಬಿಡಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದರು. ಆದ್ರೆ, ಈಗ ಎಲ್ಲವೂ ಉಲ್ಟಾಪಲ್ಟ ಆಗಿದ್ದು, ದೀಪಾವಳಿ ಬೆಳಕು ತರಬೇಕಿತ್ತು. ಆದ್ರೆ, ಕಳ್ಳತನದಿಂದ ಹಬ್ಬದ ಸಂಭ್ರಮ ಗ್ರಾಹಕರಲ್ಲಿ ಕಂಡು ಬರುತ್ತಿಲ್ಲ. ಬದಲಾಗಿ ಕತ್ತಲು ಆವರಿಸಿದಂತಾಗಿದೆ.
ಬ್ಯಾಂಕ್ ನಲ್ಲಿ ಅಡವಿಟ್ಟ ಚಿನ್ನಾಭರಣಕ್ಕೆ ವಿಮೆ ಭದ್ರತೆ ಇರುತ್ತದೆ. ಇಂಥ ಪ್ರಕರಣಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ ಪರಿಹಾರ ನಿಗದಿ ಮಾಡಲಾಗಿರುತ್ತದೆ. ದುಷ್ಕರ್ಮಿಗಳನ್ನು ಪತ್ತೆ ಮಾಡಿ ಸ್ವತ್ತು ವಾಪಸ್ ಪಡೆದಾಗ ಮಾತ್ರ ಕಳೆದುಕೊಂಡ ಚಿನ್ನಾಭರಣ ಮತ್ತೆ ಸಿಗಬಹುದು. ಆದ್ರೆ, ಕಳ್ಳರು ಕದ್ದ ಚಿನ್ನಾಭರಣ ಕರಗಿಸದಿದ್ದರೆ ಸಿಗುತ್ತದೆ. ಇಲ್ಲದಿದ್ದರೆ ಸಾಧ್ಯತೆ ಕಡಿಮೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಬಂಗಾರದ ಒಡವೆ ಇಟ್ಟವರು, ಹಣ ಠೇವಣಿ ಇಟ್ಟವರು ದೀಪಾವಳಿ ಹಬ್ಬ ಆಚರಿಸುವುದು ಹೇಗೆ ಎಂಬ ಪ್ರಶ್ನೆ ಮಾಡುತ್ತಿದ್ದಾರೆ.