SUDDIKSHANA KANNADA NEWS/ DAVANAGERE/ DATE:17-01-2024
ದಾವಣಗೆರೆ: ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿರುವ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಕಛೇರಿಯಲ್ಲಿ (ಗ್ರಾಮೀಣ ಕೂಟ ಸ್ಮಾಲ್ ಫೈನಾನ್ಸ್) ಕಳ್ಳತನ ಮಾಡಿದ ಆರೋಪಿಯನ್ನು ಪ್ರಕರಣ ವರದಿಯಾಗಿ ಕೇವಲ 12 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿ ಕಳ್ಳತನವಾದ 10,88,440- ರೂ ನಗದು ವಶಪಡಿಸಿಕೊಂಡ ಘಟನೆ ನಡೆದಿದೆ.
ದಾವಣಗೆರೆ ತಾಲೂಕಿನ ಯರವನಾಗತಿಹಳ್ಳಿ ಗ್ರಾಮದ ಕೆ. ಬಿ. ಕಿರಣ ಕುಮಾರ (26) ಬಂಧಿತ ಆರೋಪಿ.

ಕಳೆದ 13ರಂದು ಅವಿನಾಶ್ ಅವರು ದಾವಣಗೆರೆ ನಗರದ ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ (ಗ್ರಾಮೀಣ ಕೂಟ ಸ್ಮಾಲ್ ಪೈನಾನ್ಸ್) ಕಛೇರಿಯಲ್ಲಿ ಗ್ರೂಪ್ ಲೋನ್ ನೀಡಿದ
ಮಹಿಳೆಯರಿಂದ ಸಂಗ್ರಹಿಸಿದ ಲೋನ್ ಹಣದ ಬಾಬ್ತು 10,88,440- ರೂ ನಗದನ್ನು ಕಛೇರಿಯ ಸೇಫ್ ಲಾಕರ್ನಲ್ಲಿಟ್ಟಿದ್ದರು. ಆದ್ರೆ, 16ರಂದು ಬ್ಯಾಂಕ್ಗೆ ಜಮಾ ಮಾಡಲು ಸೇಫ್ ಲಾಕರ್ನಲ್ಲಿ ಚೆಕ್ ಮಾಡಿದಾಗ
ಹಣವು ಕಳ್ಳತನವಾಗಿರುವುದು ಕಂಡು ಬಂದಿತ್ತು.
ಈ ಸಂಬಂಧ ಹಣ ಪತ್ತೆ ಮಾಡುವಂತೆ ಕೊಟ್ಟ ದೂರಿನ ಮೇರೆಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿಗಳು ಹಾಗೂ ಹಣ ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎನ್ ಸಂತೋಷ, ಮಂಜುನಾಥ ಜಿ ಅವರ ನಿರ್ದೇಶನದಲ್ಲಿ ಹಾಗೂ ದಾವಣಗೆರೆ ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ ದೊಡ್ಡಮನಿ ಮಾರ್ಗದರ್ಶನಲ್ಲಿ ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಶಶಿಧರ ಯು ಜೆ, ಪಿಎಸ್ಐ ಸಾಗರ್ ಅತ್ತರವಾಲ, ಮಂಜುಳಾರ ನೇತೃತ್ವದ ತಂಡವು ಪ್ರಕರಣ ವರದಿಯಾಗಿ 12 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಹಾಗೂ ಹತ್ತು ಲಕ್ಷ ರೂಪಾಯಿ ಪತ್ತೆ ಮಾಡಿದ ದಾವಣಗೆರೆ ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ ಡಿ., ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಶಶಿಧರ ಯು ಜೆ, ಪಿಎಸ್ಐಗಳಾದ ಸಾಗರ್ ಅತ್ತರವಾಲ, ಮಂಜುಳಾ, ಕೆಟಿಜೆ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಯಾದ ಪ್ರಕಾಶ ಟಿ, ಶಂಕರ ಆರ್. ಜಾಧವ್, ತಿಮ್ಮಣ್ಣ ಎನ್. ಆರ್, ಮಂಜಪ್ಪ ಎಂ., ಕೆ. ಷಣ್ಮುಖ, ಎಂ. ಎಸ್. ಶಿವರಾಜ, ರವಿ ಲಂಬಾಣಿ, ರಾಘವೇಂದ್ರ, ಶಾಂತರಾಜ್ ಅವರ ಪತ್ತೆ ಕಾರ್ಯವನ್ನು ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಅವರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.