ಪಾಲೊಂಚ (ತೆಲಂಗಾಣ): ಗಣೇಶ ಚತುರ್ಥಿ ಉತ್ಸವದ ಅಂಗವಾಗಿ ತೆಲಂಗಾಣದ ಭದ್ರಾದ್ರಿ ಕೊತ್ತಗೂಡೆಂ ಜಿಲ್ಲೆಯ ಪಾಲೊಂಚದಲ್ಲಿ ಭಾರಿ ವೈಭವದಿಂದ ಗಣೇಶೋತ್ಸವ ಆಚರಿಸಲಾಗುತ್ತಿದೆ. ಇಲ್ಲಿನ ಎರಡು ಪ್ರಮುಖ ಗಣೇಶ ಮಂಟಪಗಳಲ್ಲಿ ಬರೋಬ್ಬರಿ 2.90 ಕೋಟಿ ರೂಪಾಯಿ ಮೌಲ್ಯದ ಹೊಸ ಕರೆನ್ಸಿ ನೋಟುಗಳಿಂದ ಗಣೇಶನ ವಿಗ್ರಹಗಳನ್ನು ಕಣ್ಣು ಕೋರೈಸುವಂತೆ ಅಲಂಕರಿಸಲಾಗಿದ್ದು, ಇದನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
ಕಾಪು ಸಮುದಾಯದ ಗಣೇಶೋತ್ಸವ: ಕಾಪು ಸಮುದಾಯದ ವತಿಯಿಂದ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗೆ 1.40 ಕೋಟಿ ರೂಪಾಯಿ ಮೌಲ್ಯದ ಕರೆನ್ಸಿ ನೋಟುಗಳಿಂದ ಮಹಾ ಹಾರ ಹಾಗೂ ಮಂಟಪ ಅಲಂಕಾರ ಮಾಡಲಾಗಿದೆ.
ಟೀಮ್ ಏಕದಂತ ಯುವ ಸಂಘಟನೆ: ‘ಟೀಮ್ ಏಕದಂತ’ ಎಂಬ ಯುವಕರ ತಂಡವು ಮತ್ತೊಂದು ಹೆಜ್ಜೆ ಮುಂದೆ ಹೋಗಿ, ತಮ್ಮ ಗಣೇಶ ಮೂರ್ತಿಗೆ 1.50 ಕೋಟಿ ರೂಪಾಯಿ ಮೊತ್ತದ ಕರೆನ್ಸಿ ನೋಟುಗಳನ್ನು ಬಳಸಿ ಅದ್ಧೂರಿಯಾಗಿ ಅಲಂಕರಿಸಿದೆ.
ಸ್ಥಳೀಯ ವರ್ತಕರು, ಉದ್ಯಮಿಗಳು ಹಾಗೂ ಸಾರ್ವಜನಿಕರ ದೇಣಿಗೆಯನ್ನು ಸಂಗ್ರಹಿಸಿ ಈ ವಿಶಿಷ್ಟ ಆಚರಣೆಯನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕಾಗಿ ಬ್ಯಾಂಕ್ ಅಧಿಕಾರಿಗಳು ವಿಶೇಷವಾಗಿ ಹೊಸ ನೋಟುಗಳ ಕಟ್ಟುಗಳನ್ನು ಒದಗಿಸಿ ಸಹಕರಿಸಿದ್ದಾರೆ. ಕೋಟಿ ಕೋಟಿ ಮೌಲ್ಯದ ನೋಟುಗಳಿಂದ ಕಂಗೊಳಿಸುತ್ತಿರುವ ವಿಘ್ನನಿವಾರಕನ ದರ್ಶನ ಪಡೆಯಲು ಪಾಲೊಂಚದ ಮಂಟಪಗಳ ಬಳಿ ಭಕ್ತರ ಸಾಗರವೇ ಹರಿದುಬರುತ್ತಿದೆ.





Leave a comment