ಟಿ. ನರಸೀಪುರ: ಗಣೇಶ ಮೆರವಣಿಗೆ ಮತ್ತು ಪಟಾಕಿ ಸಿಡಿಸುವ ವಿಚಾರದಲ್ಲಿ ಸಾರ್ವಜನಿಕರಿಗೆ ಹಾಗೂ ಆಯೋಜಕರಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಟಿ. ನರಸೀಪುರ ಪೊಲೀಸ್ ಇನ್ಸ್ಪೆಕ್ಟರ್ ಬಿ. ಧನಂಜಯ್ ಅವರ ಹಳೆಯ ಕ್ರಿಮಿನಲ್ ಹಿನ್ನೆಲೆಯನ್ನು ಬಿಜೆಪಿ ನಾಯಕರು ಹಾಗೂ ಹಿಂದೂ ಸಂಘಟನೆಗಳು ಬಹಿರಂಗವಾಗಿ ಕೆದಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಹಿಂದೂ ಸಂಘಟನೆಗಳು ಕಲೆಹಾಕಿರುವ ದಾಖಲೆಗಳ ಪ್ರಕಾರ, ಧನಂಜಯ್ ಈ ಹಿಂದೆ ಪಿಎಸ್ಐ ಆಗಿದ್ದಾಗ, ದೆಹಲಿ ಮೂಲದ 28 ವರ್ಷದ ಮಾಡೆಲ್ ಮೇಲೆ ಮದುವೆ ವಿಚಾರ ಮುಚ್ಚಿಟ್ಟು ಲೈಂಗಿಕ ದೌರ್ಜನ್ಯ ಎಸಗಿದ ಹಾಗೂ ವಂಚಿಸಿದ ಆರೋಪ ಎದುರಿಸಿದ್ದರು.
ಈ ಸಂಬಂಧ ದೆಹಲಿಯ ಮಾಳವೀಯ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420 (ವಂಚನೆ) ಮತ್ತು 376 (ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, 2014 ರಲ್ಲಿ ದೆಹಲಿ ಪೊಲೀಸರು ಬಂಧನ ವಾರಂಟ್ನೊಂದಿಗೆ ಬಂದಾಗ ಧನಂಜಯ್ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ.
ಸಾರ್ವಜನಿಕರಿಗೆ “ಗ್ರಹಚಾರ ಬಿಡಿಸುತ್ತೇನೆ” ಎಂದು ಬೆದರಿಕೆಯೊಡ್ಡಿದ ಇಂತಹ ಗಂಭೀರ ಹಿನ್ನೆಲೆಯ ಅಧಿಕಾರಿಯನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕೆಂದು ಬಿಜೆಪಿ ನಾಯಕರು ಮತ್ತು ಪ್ರತಿಭಟನಾಕಾರರು ಗೃಹ ಇಲಾಖೆಯನ್ನು ತೀವ್ರವಾಗಿ ಒತ್ತಾಯಿಸಿದ್ದಾರೆ.
Leave a comment