ದಾವಣಗೆರೆ: ಅವನ್ಯಾವನಿಗೋ ಅಣ್ಣ ಅಂತೀಯಾ, ನಿನ್ನ ಸ್ವಂತ ಅಣ್ಣನಿಗೆ ಅಣ್ಣ ಎಂದು ಹೇಳುತ್ತೀಯಾ. ಹೋಗು ಹೋಗು ಎಂದು ರೈತರೊಬ್ಬರಿಗೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಕಿಡಿಕಾರಿದರದಲ್ಲದೇ ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಅವರ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ ವಿಚಾರ ಈಗ ವಿವಾದಕ್ಕೆ ಕಾರಣವಾಗಿದೆ.
ಘಟನೆಯ ಹಿನ್ನೆಲೆ: ಪ್ರಸ್ತುತ ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸುವ ವಿಚಾರವಾಗಿ ರೈತರು ಹಾಗೂ ಸರ್ಕಾರದ ನಡುವೆ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಹರಿಹರದಲ್ಲಿ ರೈತರು ಸಚಿವರಿಗೆ ಮನವಿ ಸಲ್ಲಿಸಲು ತೆರಳಿದ್ದರು. ಈ ವೇಳೆ ರೈತರೊಬ್ಬರು ಮಾತನಾಡಿ, “ನೀರಿನ ಸಮಸ್ಯೆ ಬಗ್ಗೆ ಹರಿಹರ ಶಾಸಕ ಬಿ.ಪಿ. ಹರೀಶ್ ಅವರನ್ನು ಕೇಳಿದರೆ, ‘ನೀವು ನಿಮ್ಮ ಸಾಹುಕಾರರಿಗೆ (ಸಚಿವರಿಗೆ) ಕೇಳಿ, ಅವರೇ ಜಿಲ್ಲಾ ಉಸ್ತುವಾರಿ ಸಚಿವರು’ ಎನ್ನುತ್ತಾರೆ” ಎಂದು ಹೇಳಿದರು.
ಸಚಿವರ ಆಕ್ರೋಶ: ರೈತನ ಬಾಯಲ್ಲಿ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರ ಹೆಸರು ಹಾಗೂ ‘ಸಾಹುಕಾರ’ ಪದ ಕೇಳುತ್ತಿದ್ದಂತೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತೀವ್ರವಾಗಿ ರೊಚ್ಚಿಗೆದ್ದರು. ರೈತನನ್ನು ಕುರಿತು “ಅವನ್ಯಾವನಿಗೋ ಅಣ್ಣ ಅಂತೀಯಾ, ನಿನ್ನ ಸ್ವಂತ ಅಣ್ಣನಿಗೆ ಅಣ್ಣ ಎಂದು ಹೇಳುತ್ತೀಯಾ, ಹೋಗು ಹೋಗು” ಎಂದು ಏಕವಚನದಲ್ಲಿ ಗದರಿದರು. ಅಷ್ಟೇ ಅಲ್ಲದೆ, ಶಾಸಕರ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದರು ಎನ್ನಲಾಗಿದ್ದು, ಈ ಸಂಪೂರ್ಣ ವಿಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಘಟನೆಯು ಜಿಲ್ಲೆಯಲ್ಲಿ ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದೆ.
ಹರಿಹರಕ್ಕೆ ಕಾರ್ಯಕ್ರಮಕ್ಕೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹೋಗಿದ್ದರು. ಈ ವೇಳೆ ರೈತರೊಬ್ಬರು ಈ ಬಾರಿ ಭದ್ರಾ ಡ್ಯಾಂನಿಂದ ನೀರು ಹರಿಸಿಲ್ಲ. ಹರಿಹರ ಭಾಗದ ರೈತರಿಗೆ ತೊಂದರೆಯಾಗಿದೆ ಎಂದು ಹೇಳಿದರು. ಆಗ ಸಮಾಧಾನದಿಂದಲೇ ಸಚಿವರು ಆಲಿಸುತ್ತಿದ್ದರು. ಇದ್ದಕ್ಕಿದ್ದಂತೆ ರೈತ ಹರಿಹರ ಶಾಸಕ ಬಿ. ಪಿ. ಹರೀಶಣ್ಣರಿಗೆ ಕೇಳಿದರೆ ನೀವು ನಿಮ್ಮ ಸಾಹುಕಾರರಿಗೆ ಕೇಳಿ. ಅವರೇ ಜಿಲ್ಲಾ ಉಸ್ತುವಾರಿ ಸಚಿವರು ಎನ್ನುತ್ತಾರೆ ಎನ್ನುತ್ತಿದ್ದಂತೆ ಎಸ್. ಎಸ್. ಮಲ್ಲಿಕಾರ್ಜುನ್ ಅವರು ರೊಚ್ಚಿಗೆದ್ದರು.
ಭದ್ರಾ ನೀರು ಹರಿಹರ ಭಾಗಕ್ಕೆ ರೈತರು ಮನವಿ ಸಲ್ಲಿಸುವ ವೇಳೆ ಈ ಘಟನೆ ನಡೆದಿದೆ. ಬಿ. ಪಿ. ಹರೀಶ್ ಹೆಸರು ಕೇಳುತ್ತಿದ್ದಂತೆ ಸಚಿವರು ಅಸಭ್ಯ ಪದ ಬಳಕೆ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.





Leave a comment