ಕೋಲ್ಕತ್ತಾ: ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಪ್ರಸ್ತುತ ಬಂಗಾಳ ಕ್ರಿಕೆಟ್ ಸಂಸ್ಥೆಯ (CAB) ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಅವರ ಪತ್ನಿ ಡೋನಾ ಗಂಗೂಲಿಗೆ ಬಂದಿರುವ ಕೊಲೆ ಬೆದರಿಕೆ ಕರೆ ಮತ್ತು ಪತ್ರಗಳ ಕುರಿತು ಗಂಗೂಲಿ ಕೊನೆಗೂ ಮೌನ ಮುರಿದಿದ್ದಾರೆ. ಈ ಕುರಿತು ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದ್ದು, ಬೆದರಿಕೆ ಬಂದಿರುವ ಫೋನ್ ಸಂಖ್ಯೆಯು ಕೋಲ್ಕತ್ತಾಗೆ ಸೇರಿದ್ದಾಗಿದೆ ಎಂದು ಅವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಗಂಗೂಲಿ, “ನಾವು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ. ಪೊಲೀಸರು ಶೀಘ್ರದಲ್ಲೇ ಈ ಸಮಸ್ಯೆಯನ್ನು ಪರಿಹರಿಸಲಿದ್ದಾರೆ ಎಂಬ ಭರವಸೆಯಿದೆ. ಬೆದರಿಕೆ ಕರೆ ಬಂದ ಸಂಖ್ಯೆ ಇಲ್ಲೇ ಕೋಲ್ಕತ್ತಾದ್ದಾಗಿದೆ. ನನಗೆ ಅಗತ್ಯ ಭದ್ರತೆ ಇದೆ,” ಎಂದು ಹೇಳಿದ್ದಾರೆ.
ದಕ್ಷಿಣ ಕೋಲ್ಕತ್ತಾದ ಠಾಕೂರ್ಪುಕೂರ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಕಳೆದ ಆರು ತಿಂಗಳಿಂದ ಸೌರವ್ ಗಂಗೂಲಿ ಅವರ ಕಚೇರಿಗೆ ಬೆದರಿಕೆ ಪತ್ರಗಳು ಬರುತ್ತಿದ್ದರೂ, ಆರಂಭದಲ್ಲಿ ಅವುಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಇತ್ತೀಚೆಗೆ ಬಂದ ಪತ್ರಗಳಲ್ಲಿ ಸೌರವ್ ಗಂಗೂಲಿ, ಅವರ ಪತ್ನಿ ಮತ್ತು ಆಪ್ತರನ್ನು ಕೊಲೆ ಮಾಡುವುದಾಗಿ ನೇರ ಬೆದರಿಕೆ ಹಾಕಲಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರ ಮೆಟ್ಟಿಲೇರಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಉತ್ತರ 24 ಪರಗಣ ಜಿಲ್ಲೆಯ ಬೆಳಗರಿಯಾ ಎಂಬಲ್ಲಿಂದ ಕೊರಿಯರ್ ಮೂಲಕ ಈ ಪತ್ರಗಳನ್ನು ಕಳುಹಿಸಲಾಗಿದೆ ಎಂದು ಶಂಕಿಸಲಾಗಿದೆ. ಪೊಲೀಸರು ಕೊರಿಯರ್ ಸಂಸ್ಥೆಯ ಮಾಹಿತಿ, ಸಂದೇಶ ಕಳುಹಿಸಲು ಬಳಸಲಾದ ಸಿಮ್ ಕಾರ್ಡ್ ಮತ್ತು ಫೋನ್ ಸಂಖ್ಯೆಯ ನೆಟ್ವರ್ಕ್ ಚಲನವಲನಗಳನ್ನು ಆಧರಿಸಿ ಆರೋಪಿಯ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.





Leave a comment