SUDDIKSHANA KANNADA NEWS/ DAVANAGERE/ DATE:14-04-2025
ದಾವಣಗೆರೆ: ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಇಂದು ಬೆಂಗಳೂರಿನ ‘ಇ ಸಾಹಿತ್ಯ’ ಸಂಸ್ಥೆಯ ವತಿಯಿಂದ ತಾಡೋಲೆಗಳ ಗಣಕೀಕರಣ ಕಾರ್ಯಕ್ಕೆ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಚಾಲನೆ ನೀಡಿದರು.
ಕಳೆದ ಹದಿನೈದು ವರ್ಷಗಳಿಂದ ದೇಶವಿದೇಶಗಳಲ್ಲಿರುವ ಮೂವತ್ತು ಲಕ್ಷ ತಾಡೋಲೆಗಳನ್ನು ಗಣಕೀಕರಣ ಮಾಡಿರುವ ಅಶೋಕ್ ದಮ್ಮಲೂರರು ಸಿರಿಗೆರೆ ಬೃಹನ್ಮಠದ ಗ್ರಂಥಾಲಯದಲ್ಲಿರುವ ತಾಡೋಲೆಗಳನ್ನು ಗಣಕೀಕರಣ ಮಾಡುತ್ತಿದ್ದಾರೆ.
ಸಿರಿಗೆರೆಯ ಪೂಜ್ಯರ ವಚನ ಸಾಹಿತ್ಯ ಸಂಶೋಧನೆಯ ಆಸಕ್ತಿ, ಶ್ರದ್ಧೆಯನ್ನು ಕಂಡು ದಮ್ಮಲೂರರು ಅಚ್ಚರಿ ವ್ಯಕ್ತಪಡಿಸಿದರು.
ಪೂಜ್ಯರು ಶಿವಶರಣರ 22,000 ವಚನಗಳನ್ನು ಮೊಬೈಲ್ ತಂತ್ರಾಂಶದ ಮೂಲಕ ಅಂಗೈಯಲ್ಲಿ ನೋಡುವಂತೆ ಮಾಡಿದ್ದಾರೆ. ಈಗಾಗಲೇ ಬಸವಣ್ಣನವರ ಮೂಲ ವಚನಗಳ ತಾಡೋಲೆ ಪ್ರತಿ, ತಮಿಳು ಹಸ್ತಪ್ರತಿ, ಜೊತೆಗೆ ಇಂಗ್ಲಿಷ್ ಲಿಪ್ಯಂತರ, ಇಂಗ್ಲಿಷ್, ರಷ್ಯನ್, ತಮಿಳು, ಮರಾಠಿ, ಹಿಂದಿ, ಉರ್ದು ಮುಂತಾದ ಭಾಷೆಗಳ ಅನುವಾದ, ವ್ಯಾಖ್ಯಾನ, ಗಾಯನ, ನೃತ್ಯವನ್ನು ನೋಡಬಹುದು.
ವಚನ ಸಾಹಿತ್ಯ ಸಂಶೋಧನೆ, ಪ್ರಕಟಣೆ, ಪ್ರಚಾರ ಕಾರ್ಯದಲ್ಲಿ ಫ ಗು ಹಳಕಟ್ಟಿಯವರ ಕಾರ್ಯ ಒಂದು ಮೈಲುಗಲ್ಲು. ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಮೊಬೈಲ್ ತಂತ್ರಾಂಶ ಅಭಿವೃದ್ಧಿ ಮತ್ತು ಅಶೋಕ್ ದಮ್ಮಲೂರರ ತಾಂತ್ರಿಕ ಸ್ಪರ್ಶ ಮತ್ತೊಂದು ಮೈಲುಗಲ್ಲನ್ನು ಸೃಷ್ಟಿಸಿದೆ.