Home ದಾವಣಗೆರೆ ಎಸ್. ಜಾನಕಿಯವರ ಅಂತ್ಯಕ್ರಿಯೆ ಮೈಸೂರಿನಲ್ಲಿ: ಗಾನ ಕೋಗಿಲೆ ಆಸೆಪಟ್ಟಂತೆ ನೆರವೇರಲಿದೆ ಈ ಸ್ಥಳದಲ್ಲಿ!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ಎಸ್. ಜಾನಕಿಯವರ ಅಂತ್ಯಕ್ರಿಯೆ ಮೈಸೂರಿನಲ್ಲಿ: ಗಾನ ಕೋಗಿಲೆ ಆಸೆಪಟ್ಟಂತೆ ನೆರವೇರಲಿದೆ ಈ ಸ್ಥಳದಲ್ಲಿ!

Share
ಎಸ್. ಜಾನಕಿ
Share

ಬೆಂಗಳೂರು: ಗಾನಕೋಗಿಲೆ, ಖ್ಯಾತ ಗಾಯಕಿ ಎಸ್. ಜಾನಕಿ ಅವರು ಮೈಸೂರಿನಲ್ಲಿ ಹೃದಯಘಾತಕ್ಕೊಳಗಾಗಿ ನಿಧನ ಹೊಂದಿದ್ದಾರೆ. ಮೈಸೂರಿನಲ್ಲಿಯೇ ಕಳೆದ ಕೆಲ ದಿನಗಳಿಂದ ವಾಸವಿದ್ದ ಗಾನಕೋಗಿಲೆ ಹಾಡು ನಿಲ್ಲಿಸಿದ್ದು, ಕೋಟ್ಯಂತರ ಅಭಿಮಾನಿಗಳಿಗೆ ಆಘಾತ ತಂದಿದೆ.  ಎಸ್. ಜಾನಕಿಯವರು ಆಸೆಪಟ್ಟಂತೆ ಮೈಸೂರಿನಲ್ಲಿಯೇ ಅಂತಿಮ ವಿಧಿವಿಧಾನಗಳು ನೆರವೇರಲಿವೆ. 

ಎಸ್. ಜಾನಕಮ್ಮ ಆಸೆಪಟ್ಟಂತೆ ಮೈಸೂರಿನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ. ಮೈಸೂರಿನಲ್ಲಿ ಮಾತನಾಡಿದ ಸಚಿವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಈ ಮಾಹಿತಿ ನೀಡಿದ್ದಾರೆ.

ಜಾನಕಿಯವರೇ ಅಂತಿಮ ಕ್ರಿಯೆ ಮೈಸೂರಿನಲ್ಲಿ ಆಗಬೇಕು. ಜಾಗ ಸೂಚಿಸಿದ್ದಾರೆ. ಅಲ್ಲಿಯೇ ಆಗಬೇಕು ಎಂದು ಜಾನಕಮ್ಮರು ಹೇಳಿದ್ರು. ಅಲ್ಲೇ ವ್ಯವಸ್ಥೆ ಮಾಡಲಾಗುತ್ತದೆ. ಅಂತಿಮ ಕ್ರಿಯೆ ಸಮಯ ನಿರ್ಧಾರ ಆಗಬೇಕು. ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳು ನೆರವೇರಲಿವೆ. ನಾಳೆ ಮಹಾರಾಜರ ಗ್ರೌಂಡ್ ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಜಾನಕಮ್ಮ ವಿಧಿವಶ:

ಭಾರತೀಯ ಚಿತ್ರರಂಗದ ದೈತ್ಯ ಪ್ರತಿಭೆ, ದಕ್ಷಿಣ ಭಾರತದ ‘ಗಾನ ಕೋಗಿಲೆ’ ಎಂದೇ ಖ್ಯಾತರಾಗಿದ್ದ ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ (88) ಅವರು ಶನಿವಾರ (ಜುಲೈ 11, 2026) ವಿಧಿವಶರಾಗಿದ್ದಾರೆ.

ತಮ್ಮ ಸುಮಧುರ ಧ್ವನಿಯ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ಜಾನಕಮ್ಮ ಅವರ ನಿಧನದ ಸುದ್ದಿಯನ್ನು ಅವರ ಮೊಮ್ಮಗಳು ಅಪ್ಸರಾ ವೈದ್ಯುಲ ಅವರು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಜಾನಕಿ ಅವರು ತಮ್ಮ ಕೊನೆಯ ದಿನಗಳಲ್ಲಿ ಕುಟುಂಬಸ್ಥರ ಪ್ರೀತಿಯ ಮಡಿಲಿನಲ್ಲಿ ಶಾಂತಿಯುತವಾಗಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಲಾಗಿದ್ದು, ಸದ್ಯದ ಕಷ್ಟದ ಸಮಯದಲ್ಲಿ ಕುಟುಂಬದ ಗೌಪ್ಯತೆಯನ್ನು ಕಾಯ್ದುಕೊಳ್ಳಲು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

7 ದಶಕಗಳ ಅದ್ಭುತ ಸಂಗೀತ ಪಯಣ:

1938ರ ಏಪ್ರಿಲ್ 23 ರಂದು ಆಂಧ್ರಪ್ರದೇಶದಲ್ಲಿ ಜನಿಸಿದ ಎಸ್. ಜಾನಕಿ ಅವರು, 1950ರ ದಶಕದ ಕೊನೆಯಲ್ಲಿ ಚೆನ್ನೈನಲ್ಲಿ ತಮ್ಮ ಗಾಯನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಸುಮಾರು 17ಕ್ಕೂ ಹೆಚ್ಚು ಭಾಷೆಗಳಲ್ಲಿ 48,000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗುವ ಮೂಲಕ ಭಾರತೀಯ ಚಿತ್ರಸಂಗೀತ ಲೋಕದಲ್ಲಿ ಅಳಿಸದ ಮುದ್ರೆ ಒತ್ತಿದ್ದಾರೆ.

ವಿಶೇಷವಾಗಿ ಕನ್ನಡ ಚಿತ್ರರಂಗದೊಂದಿಗೆ ಅಪಾರ ಒಡನಾಟ ಹೊಂದಿದ್ದ ಅವರು ಡಾ. ರಾಜ್‌ಕುಮಾರ್, ಪಿ. ಬಿ. ಶ್ರೀನಿವಾಸ್, ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಹಾಡಿದ ನೂರಾರು ಗೀತೆಗಳು ಇಂದಿಗೂ ನಿತ್ಯನೂತನ. ಹಂಸಲೇಖ, ಇಳಯರಾಜಾ, ರಾಜನ್-ನಾಗೇಂದ್ರ, ಎ. ಆರ್. ರೆಹಮಾನ್ ಸೇರಿದಂತೆ ದೈತ್ಯ ಸಂಗೀತ ನಿರ್ದೇಶಕರ ಸಾರಥ್ಯದಲ್ಲಿ ಅವರು ಹಾಡಿರುವ ಸಾರ್ವಕಾಲಿಕ ಸೂಪರ್ ಹಿಟ್ ಹಾಡುಗಳು ಸಂಗೀತ ಪ್ರೇಮಿಗಳ ಮನಸ್ಸಿನಲ್ಲಿ ಸದಾ ಜೀವಂತವಾಗಿರಲಿವೆ.

ಪ್ರಶಸ್ತಿ ಮತ್ತು ಗೌರವಗಳು:

ಎಸ್. ಜಾನಕಿ ಅವರ ಅದ್ಭುತ ಗಾಯನಕ್ಕೆ ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಹಾಗೂ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶ ಸರ್ಕಾರಗಳಿಂದ ಹಲವಾರು ರಾಜ್ಯ ಪ್ರಶಸ್ತಿಗಳು ಒಲಿದು ಬಂದಿವೆ. 2013 ರಲ್ಲಿ ದಕ್ಷಿಣ ಭಾರತದ ಕಲಾವಿದರಿಗೆ ಸೂಕ್ತ ಗೌರವ ಸಿಗುತ್ತಿಲ್ಲ ಹಾಗೂ ತಡವಾಗಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಗೌರವಪೂರ್ವಕವಾಗಿಯೇ ಪದ್ಮಭೂಷಣ ಪ್ರಶಸ್ತಿಯನ್ನು ನಿರಾಕರಿಸಿ ತಮ್ಮ ಧ್ವನಿ ಎತ್ತಿದ್ದರು. 2010ರ ದಶಕದ ಉತ್ತರಾರ್ಧದಲ್ಲಿ ಅವರು ಗಾಯನ ವೃತ್ತಿಯಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದರು.

ಸಂಗೀತ ಲೋಕದ ಧ್ರುವತಾರೆಯಾಗಿದ್ದ ಜಾನಕಮ್ಮ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಹಾಗೂ ದೇಶಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles