ಜಲಗಾವ್: ರಕ್ಷಾ ಬಂಧನದ ಹಬ್ಬದ ದಿನವೇ ಮಹಾರಾಷ್ಟ್ರದ ಜಲಗಾವ್ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಆನ್ಲೈನ್ ಗೇಮ್ನಲ್ಲಿ ಹಣ ಕಳೆದುಕೊಂಡ ಮನನೊಂದ 17 ವರ್ಷದ ವಿದ್ಯಾರ್ಥಿಯೊಬ್ಬ ತನ್ನೆಲ್ಲಾ ಖುಷಿಯ ಹಬ್ಬದ ದಿನವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತರನ್ನು 11ನೇ ತರಗತಿ ವಿದ್ಯಾರ್ಥಿ ರೋಹಿತ್ ಸಾಹೇಬ್ರಾವ್ ಧಂಗರ್ (Rohit Sahebrao Dhangar) ಎಂದು ಗುರುತಿಸಲಾಗಿದೆ. ರೋಹಿತ್ ತನ್ನ ತಂದೆಯೊಂದಿಗೆ ಅಕ್ಕನ ಮನೆಗೆ ಹೋಗಿ ರಾಖಿ ಕಟ್ಟಿಸಿಕೊಂಡು ಅತ್ಯಂತ ಖುಷಿಯಿಂದ ವಾಪಸ್ ಮನೆಗೆ ಬಂದಿದ್ದನು. ಮನೆಗೆ ಬಂದ ಬಳಿಕ ಅಕ್ಕನ ಜೊತೆಗಿನ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಲ್ಲದೆ, ಭಾವನಾತ್ಮಕ ಸಂದೇಶವೊಂದನ್ನು ಬರೆದುಕೊಂಡಿದ್ದನು.
“ಎಲ್ಲವನ್ನೂ ನೋಡಿಕೊಳ್ಳಿ ಅಕ್ಕ, ಅಮ್ಮ ಮತ್ತು ಅಪ್ಪನನ್ನು ಒಂಟಿಯಾಗಿ ಬಿಡಬೇಡಿ, ನಾನು ಹೊರಟೆ” ಎಂದು ಮೆಸೇಜ್ ಮಾಡಿದ್ದನು. ಇದರ ಬೆನ್ನಲ್ಲೇ ಆನ್ಲೈನ್ ಗೇಮಿಂಗ್ನಲ್ಲಿ ಹಣ ಕಳೆದುಕೊಂಡಿರುವುದಾಗಿ ಸ್ನೇಹಿತನೊಬ್ಬನಿಗೆ ವೀಡಿಯೊ ಸಂದೇಶ ಕಳುಹಿಸಿದ್ದನು. ಇದನ್ನು ಕಂಡು ಆತಂಕಗೊಂಡ ಸ್ನೇಹಿತರು ಮತ್ತು ಮನೆಯವರು ರೋಹಿತ್ ಮನೆಗೆ ಧಾವಿಸಿ ಹೋಗುವಷ್ಟರಲ್ಲಿ, ರೋಹಿತ್ ನೇಣು ಬಿಗಿದುಕೊಂಡು ಜೀವ ಕಳೆದುಕೊಂಡಿದ್ದನು.
ತಕ್ಷಣವೇ ಆತನನ್ನು ಸರ್ಕಾರದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಾಗಲೇ ರೋಹಿತ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಅಸಾಮಾವೃದ್ಧಿ (ಅಪಘಾತಕಾರಿ ಸಾವು) ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.





Leave a comment