Home ದಾವಣಗೆರೆ ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ಸಿಗರು ಯಾಕೆ ಪ್ರತಿಭಟಿಸಲಿಲ್ಲ?: ರಾಜನಹಳ್ಳಿ ಶಿವಕುಮಾರ್ ಪ್ರಶ್ನೆ
ದಾವಣಗೆರೆನವದೆಹಲಿ

ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ಸಿಗರು ಯಾಕೆ ಪ್ರತಿಭಟಿಸಲಿಲ್ಲ?: ರಾಜನಹಳ್ಳಿ ಶಿವಕುಮಾರ್ ಪ್ರಶ್ನೆ

Share
ರಾಜ್ಯ ಸರ್ಕಾರ
Share

ದಾವಣಗೆರೆ: ಇಡೀ ಪ್ರಪಂಚದಲ್ಲಿ ಪೆಟ್ರೋಲ್, ಡೀಸೆಲ್, ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಆದರೆ ಭಾರತದಲ್ಲಿ ಅತ್ಯಂತ ಕಡಿಮೆ ಇದೆ. ಕನಿಷ್ಠ ಜ್ಞಾನವೂ ಇಲ್ಲದ ಕಾಂಗ್ರೆಸ್ಸಿಗರು ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿರುವುದು ಹಾಸ್ಯಾಸ್ಪದ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ದಿನಬಳಕೆ ಮತ್ತು ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿದಾಗ ಯಾಕೆ ಬೀದಿಳಿಗಿದು ಹೋರಾಟ ಮಾಡಲಿಲ್ಲ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಕಿಡಿಕಾರಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ಹಾರ್ಮುಜ್ ಜಲಸಂಧಿಯ ಹಡಗು ಸಾಗಣೆಯ ಅಡೆತಡೆಗಳಿಂದಾಗಿ ಜಾಗತಿಕ ಇಂಧನ ಬೆಲೆಗಳು ತೀವ್ರವಾಗಿ ಏರಿಕೆಯಾಗಿದ್ದರೂ, ಭಾರತೀಯ
ಕುಟುಂಬಗಳನ್ನು ಅದರ ಸಂಪೂರ್ಣ ಹೊರೆಯಿಂದ ರಕ್ಷಿಸಲಾಗಿದೆ. ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶ ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿಯೂ ಬೆಲೆ ಏರಿಕೆ ಬಿಸಿ ತಟ್ಟಿದೆ. ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿದೆ. ಅಲ್ಲಿ ಪೆಟ್ರೋಲ್, ಡೀಸೆಲ್ ಲೀಟರ್ ಗೆ 350 ರೂಪಾಯಿಗಿಂತ ಹೆಚ್ಚಿದೆ. ಭಾರತದಲ್ಲಿ ಅಷ್ಟಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಉಪವಾಸ ಇರಲು ಹೇಳುತ್ತಾರೆ ಎಂಬ ಉಡಾಫೆ ಮಾತನಾಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಖಂಡನೀಯ ಕೇಂದ್ರ ಸರ್ಕಾರ ದೂಷಿಸುವುದಕ್ಕಷ್ಟೇ ಸೀಮಿತವಾಗಿಬಿಟ್ಟಿದ್ದಾರೆ. ಕಲಬುರ್ಗಿ ಜಿಲ್ಲೆಯು ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಯ ಸಾಧನೆ ನೋಡಿದರೆ ಸಚಿವರ ಕಾರ್ಯವೈಖರಿ ಗೊತ್ತಾಗುತ್ತೆ. ವಿನಾಕಾರಣ ಟೀಕೆ ಮಾಡುವುದನ್ನು ಬಿಟ್ಟು ಆರೋಗ್ಯಕರ, ಅಭಿವೃದ್ಧಿ ವಿಚಾರದಲ್ಲಿ ಆರೋಪ ಮಾಡಲಿ. ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಮೋದಿಯವರ ಒಂದು ಕರೆಗೆ ಭಾರತ ದೇಶದ ಜನರೇ ಸ್ಪಂದಿಸಿದ್ದಾರೆ. ಇರಾನ್ ಮೇಲೆ ಇರಾಕ್ ಮತ್ತು ಅಮೆರಿಕಾ ನಡೆಸುತ್ತಿರುವ ಯುದ್ಧದಿಂದಾಗಿ ಸಂಕಷ್ಟ ಎದುರಾಗುವ ಮೊದಲೇ ಭಾರತ ಎಚ್ಚೆತ್ತುಕೊಂಡಿದೆ. ಚಿನ್ನ ಖರೀದಿಸಬೇಡಿ ಎಂಬ ಮೋದಿ ಅವರ ಮಾತಿಗೆ ಮನ್ನಣೆ ಕೊಟ್ಟು ಶೇಕಡಾ 70ರಷ್ಟು ಜನರು ಚಿನ್ನ ಖರೀದಿಸಲು ಮುಂದಾಗಿಲ್ಲ. ದೇಶದ ಹಿತಕ್ಕೆ ಸ್ಪಂದಿಸುವ ಜನರು ದೇಶಕ್ಕಾಗಿ ಪ್ರಾಣ ಕೊಡಲು ಸಿದ್ದರಿರುತ್ತಾರೆ. ಆದರೆ ಕಾಂಗ್ರೆಸ್ಸಿಗರು ಮಾತ್ರ ದೇಶ, ಅಭಿವೃದ್ಧಿಗಿಂತ ಅಧಿಕಾರ, ಭ್ರಷ್ಟಾಚಾರಕ್ಕಾಗಿ
ಹಪಾಹಪಿಸುತ್ತಾರೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಸರ್ಕಾರ ಬೆಲೆ ಏರಿಸಿದ್ದರ ಬಗ್ಗೆ ಮಾತನಾಡಲಿ:

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೆಟ್ರೋ ದರಗಳಲ್ಲಿ ಸುಮಾರು 71% ರಷ್ಟು, ಪ್ರತಿ ಲೀಟರ್ ಹಾಲಿನ ಬೆಲೆಯಲ್ಲಿ ರೂ. 4 ತುಪ್ಪದ ಬೆಲೆಯಲ್ಲಿ ಪ್ರತಿ ಕೆಜಿಗೆ ರೂ. 90 ಹೆಚ್ಚಳ, ವಿದ್ಯುತ್ ಸ್ಥಿರ ಶುಲ್ಕ ₹120 ರಿಂದ ₹145 ಕ್ಕೆ ಏರಿಕೆ, ಆಸ್ತಿ ನೋಂದಣಿ ಶುಲ್ಕ ದ್ವಿಗುಣಗೊಳಿಸಲಾಗಿದೆ. ಆಸ್ತಿಯ ಮಾರ್ಗದರ್ಶಿ ಮೌಲ್ಯದಲ್ಲಿ 25% ರಿಂದ 30% ರಷ್ಟು ಹೆಚ್ಚಳ, ಸ್ಟಾಂಪ್ ಡ್ಯೂಟಿ ದರಗಳಲ್ಲಿ 200% ರಿಂದ 500% ರಷ್ಟು ಏರಿಕೆ, ಬಸ್ ಪ್ರಯಾಣ ದರಗಳಲ್ಲಿ 15%, ಬೆಂಗಳೂರಿನಲ್ಲಿ ನೀರಿನ ಸುಂಕ ಹೆಚ್ಚಿಸಲಾಗಿದೆ. ಕಸ ವಿಲೇವಾರಿ ಸುಂಕ ₹10 ರಿಂದ ₹400ವರೆಗೆ ಏರಿಸಲಾಗಿದೆ. ಬಹುಮಹಡಿ ಕಟ್ಟಡಗಳ ಮೇಲೆ ಅಗ್ನಿಶಾಮಕ ಸುಂಕ ಹೇರಿಕೆ ಮಾಡಲಾಗಿದೆ. ಕ್ಯಾಬ್, ಆಟೋ ಮತ್ತು ವಾಣಿಜ್ಯ ವಾಹನಗಳ ಮೇಲೆ 3% ಸಾರಿಗೆ ಸುಂಕ, ಓಟಿಟಿ ಹಾಗೂ ಸಿನಿಮಾ ಟಿಕೆಟ್‌ಗಳ ಮೇಲೆ 2% ಸುಂಕ, ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಂಗಲ್ ಬೆಡ್ ವಿಶೇಷ ವಾರ್ಡ್ ಶುಲ್ಕ ₹750 ರಿಂದ ₹2000 ಕ್ಕೆ ಹೆಚ್ಚಿಸಲಾಗಿದೆ. ಹೊರರೋಗಿ (ಓಪಿಡಿ) ಮತ್ತು ಒಳರೋಗಿ ಪ್ರವೇಶ ಶುಲ್ಕ ದ್ವಿಗುಣ, ಖಾಸಗಿ ಕಾಲೇಜುಗಳಲ್ಲಿ ಶೇಕಡಾ 10% ರಷ್ಟು ಶುಲ್ಕ ಹೆಚ್ಚಿಸಲಾಗಿದ್ದರೂ ಕಾಂಗ್ರೆಸ್ಸಿಗರು ಯಾಕೆ ಬೀದಿಗಿಳಿದು ಹೋರಾಟ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *