ಪುಣೆ: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ವೀರ್ ಸಾವರ್ಕರ್ ಮಾನನಷ್ಟ ಮೊಕದ್ದಮೆಯಲ್ಲಿ ಮಧ್ಯಪ್ರವೇಶಿಸಲು ಯತ್ನಿಸಿದ ಸಂಶೋಧಕ ಪಂಕಜ್ ಕೆ. ಫಡ್ನಿಸ್ ಅವರ ಅರ್ಜಿಯನ್ನು ಪುಣೆಯ ನ್ಯಾಯಾಲಯ ವಜಾಗೊಳಿಸಿದೆ. ಅಷ್ಟೇ ಅಲ್ಲದೆ, ಅನಗತ್ಯ ಅರ್ಜಿ ಸಲ್ಲಿಸಿ ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ಅವರಿಗೆ 20,000 ರೂಪಾಯಿ ದಂಡ ವಿಧಿಸಿದೆ.
ಕೋರ್ಟ್ ಹೇಳಿದ್ದೇನು?
ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (JMFC) ಅಮೋಲ್ ಶ್ರೀರಾಮ್ ಶಿಂಧೆ ಅವರು ಈ ತೀರ್ಪು ನೀಡಿದ್ದು, ಅರ್ಜಿದಾರ ಪಂಕಜ್ ಫಡ್ನಿಸ್ ಅವರಿಗೆ ಈ ಪ್ರಕರಣದಲ್ಲಿ ಭಾಗವಹಿಸಲು ಯಾವುದೇ ಕಾನೂನುಬದ್ಧ ಹಕ್ಕು (Locus Standi) ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ಮೃತರಾದ ಸಾವರ್ಕರ್ ಅವರ ಕುಟುಂಬದ ಸದಸ್ಯರು ಅಥವಾ ಹತ್ತಿರದ ಸಂಬಂಧಿಯಲ್ಲದ ವ್ಯಕ್ತಿಯು ಸಿಆರ್ಪಿಸಿ ಸೆಕ್ಷನ್ 199ರ ಅಡಿಯಲ್ಲಿ ತನಗೆ ನೋವಾಗಿದೆ ಎಂದು ಸ್ವಯಂಪ್ರೇರಿತನಾಗಿ ಹಕ್ಕು ಸಾಧಿಸಲು ಸಾಧ್ಯವಿಲ್ಲ” ಎಂದು ಮ್ಯಾಜಿಸ್ಟ್ರೇಟ್ ಅಭಿಪ್ರಾಯಪಟ್ಟಿದ್ದಾರೆ . ವಿಧಿಸಲಾದ ದಂಡದ ಮೊತ್ತವನ್ನು ಪುಣೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಜಮೆ ಮಾಡುವಂತೆ ಕೋರ್ಟ್ ಸೂಚಿಸಿದೆ.
ಇಬ್ಬರ ವಕೀಲರಿಂದಲೂ ತೀವ್ರ ವಿರೋಧ:
ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಮರಿ ಮೊಮ್ಮಗ ಸತ್ಯಕಿ ಸಾವರ್ಕರ್ ಅವರು ರಾಹುಲ್ ಗಾಂಧಿ ವಿರುದ್ಧ ಈ ಖಾಸಗಿ ದೂರು ನೀಡಿದ್ದರು. ಸಂಶೋಧಕ ಫಡ್ನಿಸ್, ತಾವು 25 ವರ್ಷಗಳಿಂದ ಸಾವರ್ಕರ್ ಬಗ್ಗೆ ಸಂಶೋಧನೆ ನಡೆಸಿದ್ದು, ತಮ್ಮಲ್ಲಿರುವ ದಾಖಲೆಗಳು ಕೋರ್ಟ್ಗೆ ನೆರವಾಗಲಿವೆ ಎಂದು ಮಧ್ಯಂತರ ಅರ್ಜಿ ಸಲ್ಲಿಸಿದ್ದರು.
ಆದರೆ ಸತ್ಯಕಿ ಸಾವರ್ಕರ್ ಹಾಗೂ ರಾಹುಲ್ ಗಾಂಧಿ—ಇಬ್ಬರ ಪರ ವಕೀಲರು ಈ ಅರ್ಜಿಯನ್ನು ತೀವ್ರವಾಗಿ ವಿರೋಧಿಸಿದರು. ಖಾಸಗಿ ದೂರಿನಲ್ಲಿ ಮೂರನೇ ವ್ಯಕ್ತಿಗೆ ಮಧ್ಯಪ್ರವೇಶಿಸಲು ಅವಕಾಶವಿಲ್ಲ ಮತ್ತು ಇದು ವಿಚಾರಣೆಯ ಹಾದಿಯನ್ನು ತಪ್ಪಿಸುವ ಯತ್ನ ಎಂದು ಆಕ್ಷೇಪಿಸಲಾಯಿತು. ಇಬ್ಬರ ವಾದವನ್ನು ಪುರಸ್ಕರಿಸಿದ ಕೋರ್ಟ್, ಅರ್ಜಿಯನ್ನು ವಜಾಗೊಳಿಸಿ ಮುಖ್ಯ ಪ್ರಕರಣದ ವಿಚಾರಣೆಯನ್ನು ಮುಂದುವರಿಸಿದೆ.





Leave a comment