ಚಂಡೀಗಢ: ಪಂಜಾಬ್ನಲ್ಲಿ ಸಿಖ್ ಸಮುದಾಯದ ಜನಸಂಖ್ಯೆ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಾ. ಜಗಮೋಹನ್ ಸಿಂಗ್ ರಾಜು, ಯುವ ಸಿಖ್ ದಂಪತಿಗಳಿಗೆ ನಾಲ್ಕು ಮಕ್ಕಳನ್ನು ಹೊಂದಲು ಉತ್ತೇಜನ ನೀಡುವಂತೆ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಪತ್ರ ಬರೆದಿದ್ದಾರೆ.
ಇತ್ತೀಚೆಗೆ ಆಂಧ್ರಪ್ರದೇಶ ಸರ್ಕಾರವು ಮೂರನೇ ಮತ್ತು ನಾಲ್ಕನೇ ಮಗುವಿಗೆ ನಗದು ಪ್ರೋತ್ಸಾಹಧನ ಘೋಷಿಸಿದ ಮಾದರಿಯಲ್ಲೇ, ಪಂಜಾಬ್ನಲ್ಲೂ ಯುವ ಸಿಖ್ ದಂಪತಿಗಳಿಗೆ ಆರ್ಥಿಕ ನೆರವು ನೀಡುವ ನೀತಿಯನ್ನು ಜಾರಿಗೆ ತರಬೇಕು ಎಂದು ಅವರು ಸಿಎಂಗೆ ಮನವಿ ಮಾಡಿದ್ದಾರೆ. “ಪ್ರತಿ ಸಿಖ್ ಕುಟುಂಬವೂ ನಾಲ್ಕು ಮಕ್ಕಳನ್ನು ಹೊಂದಬೇಕು” ಎಂದು ರಾಜು ಪ್ರತಿಪಾದಿಸಿದ್ದಾರೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಅಂಕಿ-ಅಂಶಗಳನ್ನು ಉಲ್ಲೇಖಿಸಿರುವ ಅವರು, ದೇಶದ ಪ್ರಮುಖ ಸಮುದಾಯಗಳ ಪೈಕಿ ಸಿಖ್ ಸಮುದಾಯದಲ್ಲಿ ಜನನ ಪ್ರಮಾಣ ಅತ್ಯಂತ ಕಡಿಮೆಯಿದೆ. 1991 ರ ಜನಗಣತಿಯಲ್ಲಿ ಪಂಜಾಬ್ನಲ್ಲಿ ಶೇ. 62.95 ರಷ್ಟಿದ್ದ ಸಿಖ್ಖರ ಜನಸಂಖ್ಯೆ, 2011 ರ ವೇಳೆಗೆ ಶೇ. 57.69 ಕ್ಕೆ ಕುಸಿದಿದೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಜನಸಂಖ್ಯಾ ಕುಸಿತವು ಸಿಖ್ ಸಮುದಾಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ದೇಶದ ರಕ್ಷಣೆ, ಕೃಷಿ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಅಪಾರ ಕೊಡುಗೆ ನೀಡಿರುವ ಈ ಅಲ್ಪಸಂಖ್ಯಾತ ಸಮುದಾಯದ ಅಸ್ತಿತ್ವವನ್ನು ಉಳಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಆದರೆ, ಈ ಕುರಿತು ಮಾಧ್ಯಮಗಳು ಸಂಪರ್ಕಿಸಿದಾಗ, “ಇದು ನನ್ನ ವೈಯಕ್ತಿಕ ಅಭಿಪ್ರಾಯವೇ ಹೊರತು ಪಕ್ಷದ ಅಧಿಕೃತ ನಿಲುವಲ್ಲ” ಎಂದು ಡಾ. ಜಗಮೋಹನ್ ಸಿಂಗ್ ರಾಜು ಸ್ಪಷ್ಟಪಡಿಸಿದ್ದಾರೆ.
- Bhagwant Mann
- cash incentive for children
- demographic change
- Jagmohan Singh Raju
- NFHS data Punjab
- Punjab BJP
- Punjab news
- Punjab politics
- Sikh family four children
- Sikh population decline
- ಆಂಧ್ರಪ್ರದೇಶ ಮಾದರಿ
- ಜಗಮೋಹನ್ ಸಿಂಗ್ ರಾಜು
- ಜನಸಂಖ್ಯೆ ಕುಸಿತ
- ನಗದು ಪ್ರೋತ್ಸಾಹಧನ
- ಪಂಜಾಬ್ ಬಿಜೆಪಿ
- ಪಂಜಾಬ್ ರಾಜಕಾರಣ
- ಪಂಜಾಬ್ ಸುದ್ದಿ
- ಭಗವಂತ್ ಮಾನ್
- ಸಿಖ್ ಕುಟುಂಬ
- ಸಿಖ್ ಜನಸಂಖ್ಯೆ





Leave a comment