ದಾವಣಗೆರೆ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಮುಖ್ಯ ಬೆಳೆಗಳಿಗೆ ಗ್ರಾಮ ಪಂಚಾಯತಿ ಹಾಗೂ ಹೋಬಳಿ ಮಟ್ಟದಲ್ಲಿ ವಿಮೆ ಅನುಷ್ಠಾನಗೊಳಿಸಲು ಎಸ್.ಬಿ.ಐ ಜನರಲ್ ಇನ್ಸೂರನ್ಸ್ ಕಂಪನಿಯನ್ನು ನಿಗದಿಪಡಿಸಲಾಗಿದೆ. ಬೆಳೆ ಸಾಲ ಪಡೆದ ರೈತರು ಸಂಬಂಧಿಸಿದ ಬ್ಯಾಂಕುಗಳಲ್ಲೇ ನೋಂದಾಯಿಸಿಕೊಳ್ಳಬೇಕು. ಸಾಲ ಪಡೆಯದ ರೈತರು ಪಹಣಿ, ಆಧಾರ್ ಕಾರ್ಡ್, ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಪುಸ್ತಕ ಮತ್ತು ಕಡ್ಡಾಯವಾಗಿ ಫ್ರೂಟ್ಸ್ ಐಡಿ (FRUITS ID) ಜೊತೆಗೆ ಸಿಎಸ್ಸಿ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು.
ವಿವಿಧ ಬೆಳೆಗಳ ನೋಂದಣಿಗೆ ಕೊನೆಯ ದಿನಾಂಕಗಳು:
ಹತ್ತಿ ಬೆಳೆ: ಜುಲೈ 15, 2026
ಮುಸುಕಿನ ಜೋಳ, ಭತ್ತ, ರಾಗಿ, ತೊಗರಿ, ಸಜ್ಜೆ, ಜೋಳ, ನೆಲಗಡಲೆ: ಜುಲೈ 31, 2026
ಸೂರ್ಯಕಾಂತಿ ಬೆಳೆ: ಆಗಸ್ಟ್ 14, 2026
ಹೆಚ್ಚಿನ ಮಾಹಿತಿಗಾಗಿ ರೈತರು ಸ್ಥಳೀಯ ಬ್ಯಾಂಕ್ಗಳು, ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.





Leave a comment