ನವದೆಹಲಿ: ಪ್ರಿಯಕರನೊಂದಿಗೆ ಮನೆಯಿಂದ ಓಡಿಹೋಗಲು ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಯುವತಿಯೊಬ್ಬಳು, ಕೊನೆಯ ಕ್ಷಣದಲ್ಲಿ ತನ್ನ ತಂದೆಯ ಕಣ್ಣೀರು ಹಾಗೂ ಮೌನದ ಮಾತಿಗೆ ಮನಸೋತು ವಾಪಸ್ ಮನೆಗೆ ಮರಳಿರುವ ಭಾವುಕ ಘಟನೆಯೊಂದು ನಡೆದಿದೆ.
ಯುವತಿ ತನ್ನ ಪ್ರೇಮಿಯೊಂದಿಗೆ ತೆರಳಲು ಸಿದ್ಧಳಾಗಿ ನಿಂತಿದ್ದ ವೇಳೆ, ವಿಷಯ ತಿಳಿದು ಆಕೆಯ ಪೋಷಕರು ಹತಾಶರಾಗಿ ರೈಲ್ವೆ ನಿಲ್ದಾಣಕ್ಕೆ ದೌಡಾಯಿಸಿದರು. ಮಗಳನ್ನು ಮನವೊಲಿಸಲು ಹಿರಿಯರಾದವರು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು, ಆಕೆಯೊಂದಿಗೆ ವಿನಂತಿಸಿಕೊಂಡರು. ಆದರೆ, ಯುವತಿ ಯಾವುದಕ್ಕೂ ಕಿವಿಗೊಡದೇ ತನ್ನ ನಿರ್ಧಾರವೇ ಅಂತಿಮವೆಂಬಂತೆ ವರ್ತಿಸಿದಳು.
ಮಗಳ ಹಠಾತ್ ವರ್ತನೆಯಿಂದ ನೊಂದ ತಂದೆ, ಕಣ್ಣೀರು ತುಂಬಿದ ಕಣ್ಣುಗಳಿಂದ ಕೊನೆಯದಾಗಿ ಒಂದು ಮಾತನ್ನು ಹೇಳಿದರು: “ನನ್ನೊಂದಿಗೆ ಇರಲು ನಿನಗೆ ಇಷ್ಟವಿಲ್ಲದಿದ್ದರೆ, ನೀನು ಖುಷಿಯಾಗಿರು. ಇಂದಿನಿಂದ ನಿನ್ನ ನಿರ್ಧಾರಗಳನ್ನು ತೆಗೆದುಕೊಳ್ಳಲು ನೀನು ಸ್ವತಂತ್ರಳು.” ಈ ಮಾತುಗಳನ್ನಾಡಿ, ಅವರು ಮಗುವಿನಂತೆ ಮರುಗಿ ಅಲ್ಲಿಂದ ಹಿಂದೆ ತಿರುಗಿ ಹೊರಟುಬಿಟ್ಟರು.
ಆದರೆ, ಕೆಲವೇ ಹೆಜ್ಜೆಗಳು ಮುಂದೆ ಹೋದ ತಂದೆಯ ಈ ನಡೆ ಯುವತಿಯ ಮನಸ್ಸಿನಲ್ಲಿ ದೊಡ್ಡ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿತು. ತಂದೆಯ ಆ ನೋವು, ಮುನಿಸಿಲ್ಲದ ಮೌನ ಮತ್ತು ಅವರ ನಿಸ್ವಾರ್ಥ ಪ್ರೀತಿಯ ಆಳವನ್ನು ಆಕೆ ಆ ಕ್ಷಣದಲ್ಲಿ ಗ್ರಹಿಸಿದಳು. ತಾನು ತಂದೆ-ತಾಯಿಗೆ ನೀಡುತ್ತಿರುವ ನೋವು ಮತ್ತು ಕಣ್ಣೀರಿನ ಭಾರ ಅರಿವಿಗೆ ಬಂದಿತು.
ಕ್ಷಣಾರ್ಧದಲ್ಲಿ ತನ್ನ ನಿರ್ಧಾರವನ್ನು ಬದಲಾಯಿಸಿದ ಆ ಯುವತಿ, ಬಿಕ್ಕಿ ಬಿಕ್ಕಿ ಅಳುತ್ತಾ ಓಡಿಹೋಗಿ ತನ್ನ ತಂದೆಯನ್ನು ಅಪ್ಪಿಕೊಂಡಳು. ಕೊನೆಗೆ ಎಲ್ಲರ ಕಣ್ಣೀರಿನ ನಡುವೆಯೇ ತನ್ನ ಹೆತ್ತವರೊಂದಿಗೆ ಸಂತೋಷದಿಂದ ಮನೆಗೆ ವಾಪಸ್ ಮರಳಿದಳು.
ಸಾವಿರ ಪದಗಳು ಹೇಳಲಾಗದ ಸತ್ಯವನ್ನು, ಕೆಲವೊಮ್ಮೆ ಒಬ್ಬ ತಂದೆಯ ಮೌನ ಮತ್ತು ಕಣ್ಣೀರು ಹೇಳುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿದ್ದು, ತಂದೆಯ ಕಣ್ಣೀರಿಗೆ ಮಗಳು ಬೆಲೆ ಕೊಟ್ಟಿದ್ದಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.





Leave a comment