SUDDIKSHANA KANNADA NEWS/ DAVANAGERE/ DATE:19-01-2025
ದಾವಣಗೆರೆ: ಮಾಯಕೊಂಡ ಮಂದಿಯ ಮನ ಗೆದ್ದಿರುವ ಬಿಜೆಪಿ ಯುವ ನೇತಾರ, ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾಗಿರುವ ಜಿ. ಎಸ್. ಶ್ಯಾಮ್ ಅವರಿಗೆ ಪ್ರತಿಷ್ಠಿತ ರಾಷ್ಟ್ರೀಯ ಪ್ರಜಾ ಸೇವೆ ರತ್ನ ಪ್ರಶಸ್ತಿ ಲಭಿಸಿದೆ. ಈ ಮೂಲಕ ಬಿಜೆಪಿ ಯುವ ನಾಯಕನಿಗೆ ಸಂದ ಗೌರವವೂ ಹೌದು.
ಜನವರಿ 26ರಂದು ಮಧ್ಯಾಹ್ನ 2ಗಂಟೆಗೆ ಗೋವಾದ ಪಣಜಿಯ ಇನ್ಸಿಟ್ಯೂಟ್ ಮೆನೇಜಸ್ ಬ್ರಗಾಂಜಾದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಮತ್ತು ಸಂಕ್ರಾಂತಿ ಸಂಗೀತ ಸಂಭ್ರಮ ಕಾರ್ಯಕ್ರಮದಡಿ ಗಣ್ಯರ ಸಮ್ಮುಖದಲ್ಲಿ ತಮಗೆ ಅಕ್ಷರ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೆಕಳ ಹಾಜಬ್ಬ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಲಾಗಿದೆ.
ದಶಕಗಳಿಂದ ಶೋಷಿತರ ಪರ ಹೋರಾಟ ಮಾಡುವುದರ ಜೊತೆಗೆ ರಾಜಕೀಯ, ಸಾಮಾಜಿಕವಾಗಿ ಸಲ್ಲಿಸಿದ ತಮ್ಮ ಅನುಪಮ ಸೇವೆಯನ್ನು ಗುರುತಿಸಿ ತಮ್ಮನ್ನು ರಾಷ್ಟ್ರಮಟ್ಟದ ರಾಷ್ಟ್ರೀಯ ಪ್ರಜಾಸೇವ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಗೋವಾದ ಕ್ವಾಲಂಗುಟೆ ಕನ್ನಡ ಸಂಘ, ಬೆಂಗಳೂರಿನ ಸಾಂತ್ವನ ಮ್ಯೂಸಿಕ್ ಅಂಡ್ ಚಾರಿಟೇಬಲ್ ಫೌಂಡೇಶನ್ ತಿಳಿಸಿದೆ.
ಇಂಜಿನಿಯರ್ ಪದವಿಧರರಾಗಿ ಸುಮಾರು ಎರಡು ದಶಕಗಳ ಕಾಲ ದೇಶಭಕ್ತ ಮತ್ತು ಗೋಸಂರಕ್ಷಣೆ ಸಂಘಟನೆಗಳಲ್ಲಿ ನಾಡಿನಾದ್ಯಂತ ಯುವಶಕ್ತಿ ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಜಿ. ಎಸ್. ಶ್ಯಾಮ್ ಯುವಕರ ಕಣ್ಮಣಿ.
ದಾವಣಗೆರೆ ಜಿಲ್ಲೆಯ ಅಣಜಿ ಗೊಲ್ಲರಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಜಿ. ಎಸ್. ಶ್ಯಾಮ್ ಬಿ. ಟಿ..ಸಿದ್ದಪ್ಪನವರ ಪುತ್ರ. ಗೋರಕ್ಷಣಾ ಸಮಿತಿ ರಾಜ್ಯಾಧ್ಯಕ್ಷರಾಗಿ ನಲವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಅದೇರೀತಿ ತಿರುಪತಿ ತಿರುಮಲ
ದಾಸ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಾಗಿ ಮತ್ತು ವಿದ್ಯಾ ಸಂಸ್ಥೆಯ ಸಂಸ್ಥಾಪಕರಾಗಿದ್ದು ತಂದೆಯಂತೆ ಮಗ ಜಿಎಸ್ ಶ್ಯಾಮ್ ಸಾರ್ವಜನಿಕ ಕ್ಷೇತ್ರಕ್ಕೆ ಧುಮುಕಿ ಅತಿ ಜನಪ್ರಿಯ ವ್ಯಕ್ತಿಯಾಗಿದ್ದಾರೆ.
ಜಿಲ್ಲೆಯಲ್ಲಷ್ಟೇ ಅಲ್ಲದೆ ರಾಜ್ಯಾದ್ಯಂತ ಯುವಕರ ಪಡೆಗೆ ಅಚ್ಚುಮೆಚ್ಚು. ರಾಜಕೀಯ ಕ್ಷೇತ್ರದಲ್ಲೂ ಗಣನೀಯ ಸೇವೆ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಕಟ್ಟಾಭಿಮಾನಿ. ಪ್ರಾಮಾಣಿಕತೆ ಸರಳತೆ ಮೈಗೂಡಿಸಿಕೊಂಡಿರುವ ಶ್ಯಾಮ್
ಅವರು ಬಿಜೆಪಿ ನಾಯಕರು, ಕಾರ್ಯಕರ್ತರು, ಮುಖಂಡರು, ಜನರನ್ನು ಸೂಜಿಗಲ್ಲಿನಂತೆ ಸೆಳೆಯುವಂಥ ಯುವ ನಾಯಕ.
ಈಗಾಗಲೇ ದಾವಣಗೆರೆ ಜಿಲ್ಲೆಯ ಮಾಯಾಕೊಂಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಲು ಕ್ಷೇತ್ರದ ತುಂಬಾ ಓಡಾಡಿದ್ದರು. ಟಿಕೆಟ್ ಕೊನೆಗಳಿಗೆಯಲ್ಲಿ ಕೈ ತಪ್ಪಿತು. ಆದ್ರೆ, ಪಕ್ಷದ ತತ್ವ, ಸಿದ್ಧಾಂತಕ್ಕೆ ತಲೆಬಾಗಿ ಚುನಾವಣೆಯಲ್ಲಿ ಕೆಲಸ ಮಾಡಿದರು .ಇದನ್ನು ಗಮನಿಸಿದ ಬಿಜೆಪಿ ಹಾಗೂ ರಾಷ್ಟ್ರ ನಾಯಕರು ಜಿಎಸ್.ಶ್ಯಾಮ್ ಅವರನ್ನ ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದರು. ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಸೇವೆಗಳ ಮಧ್ಯೆ ರಾಜಕೀಯ ಕ್ಷೇತ್ರದಲ್ಲೂ ಜನಸ್ನೇಹಿ
ಯುವ ನಾಯಕರಾಗಿ ಬೆಳೆದಿದ್ದಾರೆ.
ಬಿಜೆಪಿ ಬೂತ್ ಅಭಿಯಾನಕ್ಕೆ ಶ್ಯಾಮ್ ಬರುತ್ತಾರೆ ಎಂದರೆ ಎಲ್ಲರಲ್ಲೂ ಒಂದು ರೀತಿಯ ಮಿಂಚಿನ ಸಂಚಾರ. ಯುವ ನಾಯಕನ ಸರಳ, ಸಜ್ಜನಿಕೆಗೆ ಫಿದಾ ಆಗುತ್ತಿದ್ದಾರೆ. ಇದ್ದರೆ ಇಂಥ ನಾಯಕರು ಇರಬೇಕು. ಆಗ ನಮ್ಮ ಸಂಕಷ್ಟ ಪರಿಹಾರ ಆಗುತ್ತವೆ ಎಂಬ ಮಾತು ಆಡುತ್ತಿರುವುದು ಕ್ಷೇತ್ರದ ಜನತೆ. ಮಾತ್ರವಲ್ಲ, ದಾವಣಗೆರೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಆಗಮಿಸಿದಾಗ ಸೂಜಿಗಲ್ಲಿನಂತೆ ಸೆಳೆದಿದ್ದರು ಯುವನಾಯಕ.
ಕೊರೊನಾ ಸೇರಿದಂತೆ ಯಾವುದೇ ಸಂಕಷ್ಟ ಬಂದರೂ ಸ್ಪಂದಿಸುವ ಗುಣ ಎಲ್ಲರಿಗೂ ಅಚ್ಚುಮೆಚ್ಚು. ಎಲ್ಲೆಡೆ ಉತ್ಸಾಹದಿಂದ, ಜನರ ಪ್ರೀತಿಗೆ ಪಾತ್ರರಾಗಿರುವ ಶ್ಯಾಮ್ ಜನಿಸಿದ್ದು 1991 ರ ಮಾರ್ಚ್ 30ರಂದು. ತಂದೆ ಬಿ. ಟಿ.
ಸಿದ್ದಪ್ಪ ಹಾಗೂ ತಾಯಿ ಟಿ. ಮಹಾಲಕ್ಷ್ಮೀ ದಂಪತಿಗೆ ಇಬ್ಬರು ಗಂಡು ಮಕ್ಕಳು. ಶ್ಯಾಮ್ ಹಿರಿಯರು. ರಾಘವೇಂದ್ರ ಮತ್ತೊಬ್ಬ ಪುತ್ರ. ತಂದೆ ಹಾಗೂ ಅಣ್ಣ ರಾಜಕೀಯದಲ್ಲಿ ಬ್ಯುಸಿ ಆಗಿರುವ ಕಾರಣ ಎಲ್ಲಾ ವ್ಯವಹಾರಗಳನ್ನೇ ಅವರೇ
ನೋಡಿಕೊಳ್ಳುತ್ತಿದ್ದಾರೆ.
ಕ್ರಿಯಾಶೀಲರಾಗಿ, ಪಕ್ಷದಲ್ಲಿ ಹೆಚ್ಚು ಸಕ್ರಿಯರಾಗಿ, ಹಿರಿಯರಿಗೆ ಗೌರವ ನೀಡುತ್ತಾ, ಕಿರಿಯರನ್ನು ಪ್ರೋತ್ಸಾಹಿಸುತ್ತಾ, ಎಲ್ಲರ ಪ್ರೀತಿ ಗಳಿಸುವ ಶ್ಯಾಮ್ ಅವರಿಗೆ ರಾಜಕಾರಣದಲ್ಲಿ ಹಣ ಮಾಡಬೇಕೆಂದಿಲ್ಲ. ಜನರ ಸಂಕಷ್ಟ ಪರಿಹರಿಸಬೇಕು, ಮಾಯಕೊಂಡ ಕ್ಷೇತ್ರವೆಂದರೆ ಪ್ರತಿಯೊಬ್ಬರೂ ಬಂದು ನೋಡುವಂತಾಗಬೇಕೆಂಬ ಅದಮ್ಯ ಬಯಕೆ, ಹಠ ಇದೆ.
ಇನ್ನು ಜಿ. ಎಸ್. ಶ್ಯಾಮ್ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ದಾವಣಗೆರೆಯ ಪಿ. ಜೆ. ಬಡಾವಣೆಯಲ್ಲಿನ ಲೂಟ್ಸ್ ಬಾಯ್ಸ್ ಸ್ಕೂಲ್ ನಲ್ಲಿ ಓದಿದವರು. ಆ ನಂತರ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಕೆ. ವಿ. ಕಾಲೇಜಿನಲ್ಲಿ 2014ರಲ್ಲಿ ಎಂಜಿನಿಯರಿಂಗ್ ಪೂರೈಸಿದವರು. ಮನಸ್ಸು ಮಾಡಿದ್ದರೆ ದೊಡ್ಡ ಹುದ್ದೆಯಲ್ಲಿದ್ದುಕೊಂಡು ಉತ್ತಮ ಸಂಪಾದನೆ ಮಾಡಬಹುದಿತ್ತು. ಆದ್ರೆ, ಅವರ ಮನಸ್ಸಲ್ಲಿ ಮೂಡಿದ್ದು ಜನರಿಗಾಗಿ, ಜನರಿಗೋಸ್ಕರ, ಜನರಿಗೆಂದೇ ರಾಜಕಾರಣ ಮಾಡಬೇಕೆಂಬು ಎಂಬುದು. ಆಗಿನಿಂದಲೂ ಆರ್ ಎಸ್ ಎಸ್ ಮತ್ತು ಬಿಜೆಪಿಯ ಶಿಸ್ತಿನ ಸಿಪಾಯಿ ಆದರು.
ರಾಷ್ಟ್ರೀಯ ಗೋ ಸೇವಾ ಸಂಘ ರಾಜ್ಯ ಘಟಕದ ಕೋಶಾಧ್ಯಕ್ಷ, ದಾವಣಗೆರೆ ತಾಲೂಕಿನ ಗೊಲ್ಲರಹಳ್ಳಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ವಿದ್ಯಾ ಸಂಸ್ಥೆಯ ಖಜಾಂಚಿ, ಮಾಯಕೊಂಡ ಬಿಜೆಪಿ ಮಂಡಲ ಕಾರ್ಯದರ್ಶಿ ಸೇರಿದಂತೆ ವಿವಿಧ
ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಬಿ. ಟಿ. ಸಿದ್ದಪ್ಪನವರು ಮಾಯಕೊಂಡದಲ್ಲಿ ತಮ್ಮ ಸೇವಾ ಕಾರ್ಯದಿಂದಲೇ ಜನರ ಮನ್ನಣೆ ಗಳಿಸಿದವರು. ಅದೇ ರೀತಿಯಲ್ಲಿ ಶ್ಯಾಮ್ ಸಹ ಮುಂದುವರಿಯುತ್ತಿದ್ದಾರೆ. ನಾಗಪ್ಪ ವಜ್ಜಲ್ ರ ಪುತ್ರಿ ಸಂಗೀತಾ ಎಂಬುವವರ ಜೊತೆ ವಿವಾಹವಾದ ಶ್ಯಾಮ್ ದಂಪತಿಗೆ ಪುತ್ರ ರಾಜ್ ಗೆ ಐದು ತಿಂಗಳು. ಪತಿಯ ರಾಜಕಾರಣಕ್ಕೆ ಪತ್ನಿಯ ಸಂಪೂರ್ಣ ಸಹಕಾರ ಇದೆ. ಕುಟುಂಬದವರು ಎಲ್ಲಾ ರೀತಿಯ ಸಹಕಾರ, ಪ್ರೋತ್ಸಾಹ ನೀಡುತ್ತಿದ್ದಾರೆ.
ಇಂಥ ಯುವನಾಯಕನಿಗೆ “ರಾಷ್ಟ್ರೀಯ ಪ್ರಜಾ ಸೇವೆ ರತ್ನ” ಲಭಿಸಿದೆ. ಸ್ನೇಹಿತರು, ಹಿತೈಷಿಗಳು, ಬಿಜೆಪಿ ಮುಖಂಡರು, ಕಾರ್ಯಕರ್ತರು, ಮಾಯಕೊಂಡ ಕ್ಷೇತ್ರದ ಜನರು ಜಿ. ಎಸ್. ಶ್ಯಾಮ್ ಅವರನ್ನು ಅಭಿನಂದಿಸಿದ್ದಾರೆ.