ಬೆಂಗಳೂರು: “2028 ರ ವೇಳೆಗೆ ಡ್ರಗ್ಸ್ ಮುಕ್ತ- ನಶೆ ಮುಕ್ತ ಕರ್ನಾಟಕ ರೂಪಿಸುವುದು ನಮ್ಮ ಗುರಿ. ಇದರ ಸಲುವಾಗಿ ಪ್ರತಿಜ್ಞೆ ಮಾಡಿದ್ದೇವೆ. ಸಾರ್ವಜನಿಕರು, ಯವಜನತೆ ಮತ್ತು ವಿದ್ಯಾರ್ಥಿಗಳು ಸರ್ಕಾರದ ಜೊತೆ ಕೈ ಜೋಡಿಸಿದರೆ ಈ ದಂಧೆಯನ್ನು ಇಲ್ಲವಾಗಿಸಬಹುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಕರೆ ನೀಡಿದರು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳ ಸಾಗಣೆ ವಿರೋಧಿ ದಿನ – 2026 ಕಾರ್ಯಕ್ರಮವನ್ನು ಸಿಎಂ ಡಿ ಕೆ ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು.
“ನಶೆ ಬಿಡಿ ಖುಷಿ ಪಡಿ ಇದು ನಮ್ಮ ಚಿಂತನೆ. ನಮ್ಮ ಆದರ್ಶಗಳನ್ನು ನಾವೇ ರೂಪಿಸಿಕೊಳ್ಳಬೇಕು. ನಾವು ಇಂದು ಮಾಡಿರುವ ಸಂಕಲ್ಪ, ಪ್ರತಿಜ್ಞೆಯು ನಮ್ಮ ಜೀವನದ ಉದ್ದಕ್ಕೂ ರೂಡಿಸಿಕೊಳ್ಳಬೇಕು. ನಮ್ಮ ಸುತ್ತಲಿನ ಪರಿಸರದಲ್ಲೂ ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ಅನೇಕರು ನಮ್ಮ ಮೇಲೆ ಒತ್ತಡ ಹೇರಬಹುದು. ಅದಕ್ಕೆ ವಿದ್ಯಾರ್ಥಿ, ಯುವಜನತೆ ಮಣಿಯಬಾರದು. ನಿಮ್ಮ, ದೇಹ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳಬಾರದು” ಎಂದು ಕರೆ ನೀಡಿದರು.
89 ಕೋಟಿ ರೂ. ಮೊತ್ತದ ಮಾದಕವಸ್ತುಗಳ ನಾಶ
“ಕಳೆದ ಮೂರು ವರ್ಷಗಳಲ್ಲಿ ಹಿಂದಿನ ಗೃಹಸಚಿವರಾಗಿದ್ದ ಪರಮೇಶ್ವರ್ ಅವರ ನೇತೃತ್ವದಲ್ಲಿ 89 ಕೋಟಿ ರೂ. ಮೊತ್ತದ ಮಾದಕವಸ್ತುಗಳನ್ನು ನಾಶಪಡಿಸಲಾಗಿದೆ. ಈ ಜಾಲವನ್ನು ಬೇಧಿಸಿದ ಎಲ್ಲಾ ಉನ್ನತ ಪೊಲೀಸ್ ಅಧಿಕಾರಿಗಳು, ಕಾನ್ಸ್ಸ್ಟೇಬಲ್ ಹಾಗೂ ಎಲ್ಲಾ ಸಿಬ್ಬಂದಿಗಳಿಗೆ ನಾನು ತುಂಬು ಹೃದಯದಿಂದ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.
“ಸಮಾಜದಲ್ಲಿ ಗೌರವ ಹಾಳಾಗಲಿದೆ ಎಂದು ಮಕ್ಕಳ ಪೋಷಕರು ಯಾವುದೇ ವಿಚಾರವನ್ನು ಮುಚ್ಚಿಟ್ಟುಕೊಳ್ಳಬೇಡಿ. ನೀವು ಮಕ್ಕಳ ದುರಭ್ಯಾಸವನ್ನು ಮುಚ್ಚಿಟ್ಟಷ್ಟು ಅವರ ಭವಿಷ್ಯವೇ ಹಾಳಾಗಲಿದೆ. ನೀವು ತಿಳುವಳಿಕೆ ನೀಡಿ. ಪೊಲೀಸರನ್ನು ವಿಶ್ವಾಸಕ್ಕೆ ಪಡೆದು ಇದರ ಮೂಲವನ್ನು ಕಂಡುಹಿಡಿಯಲು ಸಹಾಯ ಮಾಡಬೇಕು. ಈ ಜಾಲದಿಂದ ನಿಮ್ಮ ಮಕ್ಕಳನ್ನು ಕಾಪಾಡಬಹುದು. ನಿಮ್ಮ ಮಕ್ಕಳ ಹೆಸರು ಬಹಿರಂಗಗೊಳ್ಳದಂತೆ ಪೊಲೀಸ್ ಇಲಾಖೆಗೆ ನಾನು ನಿರ್ದೇಶನ ನೀಡುತ್ತೇನೆ” ಎಂದರು.
ಮಾದಕ ವಸ್ತುಗಳ ಸೇವನೆ ಮಾಹಿತಿ ನೀಡಿದರೆ ಬಹುಮಾನ
“ಮಾದಕ ವಸ್ತುಗಳ ಸೇವನೆ ಬಗ್ಗೆ ಸಾರ್ವಜನಿಕರು, ಪೋಷಕರು ಗುಪ್ತ ಮಾಹಿತಿ ನೀಡಿದರೆ ಅವರಿಗೆ ಪೊಲೀಸ್ ಇಲಾಖೆಯಿಂದ ಬಹುಮಾನ ನೀಡುವ ತೀರ್ಮಾನ ಮಾಡಲಾಗಿದೆ. ಇದರಿಂದ ಸರಬರಾಜು ಜಾಲವನ್ನು ಹತ್ತಿಕ್ಕಬಹುದು. ಮಾದಕ ವಸ್ತುಗಳ ವಿರುದ್ಧದ ಹೋರಾಟದಿಂದ ನಿಮ್ಮ ಕುಟುಂಬ, ಊರು, ಪರಿಸರ ಹಾಗೂ ರಾಜ್ಯ ಎಲ್ಲವೂ ಚೆನ್ನಾಗಿರಲಿದೆ. ದೇಶದ ಪ್ರಗತಿಗೂ ಸಹಕಾರಿಯಾಗಲಿದೆ” ಎಂದು ತಿಳಿಸಿದರು.
“ಡ್ರಗ್ಸ್ ಮುಕ್ತ ಕರ್ನಾಟಕ ಎನ್ನುವುದು ಕೇವಲ ಸರ್ಕಾರ ಘೋಷಣೆಯಲ್ಲ. ಇದು ಪ್ರತಿಯೊಬ್ಬ ಕನ್ನಡಿಗರ ಸಂಕಲ್ಪ. ನಾವೆಲ್ಲರೂ ಮನುಷ್ಯರಾಗಿ ಹುಟ್ಟಿದ್ದೇವೆ. ಸಾಧನೆ ಇಲ್ಲದೇ ಸತ್ತರೇ ಸಾವಿಗೆ ಅವಮಾನ, ಆದರ್ಶ ಇಲ್ಲದೇ ಬದುಕಿದರೆ ಬದುಕಿಗೆ ಅವಮಾನ. ನಾವೆಲ್ಲರೂ ಜೀವನದಲ್ಲಿ ಆದರ್ಶ ಅಳವಡಿಸಿಕೊಂಡು ಮುನ್ನಡೆಯಬೇಕು. ಮಾದಕ ವಸ್ತುಗಳ ಕಂಟಕವನ್ನ ಸಮಾಜದಿಂದ ಕಿತ್ತು ಹಾಕಬೇಕು ಎಂದು ನಾವೆಲ್ಲರೂ ಪ್ರತಿಜ್ಞೆ ಮಾಡಿದ್ದೇವೆ. ವಿದ್ಯಾರ್ಥಿಗಳು ಮಾದಕ ವಸ್ತು ವಿರೋಧಿಯಾಗಿ ಪ್ರತಿಜ್ಞೆ ತೆಗೆದುಕೊಂಡಿದ್ದೀರಿ. ನನ್ನ ಹೃದಯದಿಂದ ಎಲ್ಲಾ ವಿದ್ಯಾರ್ಥಿಗಳಿಗೆ, ಪೋಷಕರಿಗೆ, ವಿದ್ಯಾಸಂಸ್ಥೆಗಳಿಗೆ ವಂದನೆಗಳನ್ನು ಸಲ್ಲಿಸುತ್ತೇನೆ” ಎಂದರು.
“ಪಾನ್ ಮಸಲಾ, ಗುಟ್ಕಾದಲ್ಲಿ ವಿವಿಧ ರೀತಿಯ ಅಮಲು ಪದಾರ್ಥಗಳನ್ನು ಬೆರೆಸುವುದು ಗಮನಕ್ಕೆ ಬಂದಿದೆ. ಫೋನ್ ಮುಖಾಂತರ ಸಂಪರ್ಕಿಸಿ ಮನೆಗಳಿಗೆ ಅಮಲು ಪದಾರ್ಥಗಳನ್ನು ತಲುಪಿಸಲಾಗುತ್ತಿದೆ ಎನ್ನುವ ಮಾಹಿತಿಯನ್ನು ಪೊಲೀಸ್ ಇಲಾಖೆ ನೀಡಿದೆ. ಪಾನ್ ಮಸಲಾ, ಗುಟ್ಕಾದಲ್ಲಿ ಅಮಲು ಪದಾರ್ಥ ಬೆರೆಸುವುದು ಗೊತ್ತಾದರೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸಂದೇಶ ನೀಡಿದ್ದೇನೆ. ನೂತನ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಈ ಇಲಾಖೆಯನ್ನು ಅಚ್ಚುಕಟ್ಟಾಗಿ ಮುನ್ನಡೆಸುತ್ತಿದ್ದಾರೆ” ಎಂದರು.
“ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ದೇಶದಲ್ಲಿ ತಂಬಾಕು ಸೇವನೆ ಮಾಡಿ ಪ್ರತಿ ವರ್ಷ 13- 14 ಲಕ್ಷ ಜನ ಸಾಯುತ್ತಿದ್ದಾರೆ ಎಂದು ವರದಿ ನೀಡಿತ್ತು. ನಮ್ಮ ದೇಶದ ಸಂಸ್ಕೃತಿ, ಭಾಷೆ, ವೈವಿದ್ಯತೆಯನ್ನು ಇಡೀ ಪ್ರಪಂಚ ಗಮನಿಸುತ್ತಿದೆ. ಇದು ಮಾದರಿಯಾಗಬಾರದು” ಎಂದು ಹೇಳಿದರು.
“ಶಾಲಾ ಕಾಲೇಜುಗಳಲ್ಲಿ ಸ್ಟುಡೆಂಟ್ ಪೊಲೀಸಿಂಗ್ ವ್ಯವಸ್ಥೆಯನ್ನು ಈಗಾಗಲೇ ಜಾರಿಗೆ ತರಲಾಗಿದೆ. ಈ ಹಿಂದೆ ಗೃಹಸಚಿವರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿತ್ತು. ಡ್ರಗ್ಸ್ ಸೇವನೆ ಸೇರಿದಂತೆ ಇತರೇ ಕಾನೂನುಬಾಹಿರ ಕೃತ್ಯಗಳನ್ನು ನಿಯಂತ್ರಿಸಲು ಸಾರ್ವಜನಿಕರು ಪೊಲೀಸ್ ಇಲಾಖೆಯ ಜೊತೆ ಕೈ ಜೋಡಿಸಬೇಕು. ಇದೇ ನಮ್ಮ ಆದ್ಯ ಕರ್ತವ್ಯವಾಗಬೇಕು” ಎಂದರು
“ದುರಾಭ್ಯಾಸಗಳಿಗೆ ಬಲಿಯಾಗಿರುವ ನಿಮ್ಮ ಸ್ನೇಹಿತರ ಬದುಕಿನಲ್ಲಿ ನೀವು ಬದಲಾವಣೆ ತರಬಹುದು. ನೀವು ವಿದ್ಯಾರ್ಥಿಗಳ ಜೊತೆಗೆ ದೇಶದ ಜವಾಬ್ದಾರಿಯುತ ಪ್ರಜೆಗಳು. ಇಡೀ ವಿಶ್ವ ಬೆಂಗಳೂರನ್ನು ನೋಡುತ್ತಿದೆ. ಪ್ರತಿ ವರ್ಷ ನಮ್ಮ ರಾಜ್ಯದಿಂದ 19, 940 ಜನ ವೈದ್ಯರು, 1 ಲಕ್ಷಕ್ಕೂ ಹೆಚ್ಚು ಶುಶ್ರುಕರು ಹೊರಬರುತ್ತಿದ್ದಾರೆ. ಎಂಜಿನಿಯರ್ ಗಳು ಅತ್ಯುತ್ತಮ ಮಾನವ ಸಂಪನ್ಮೂಲ ಇರುವ ರಾಜ್ಯ ನಮ್ಮದು” ಎಂದರು.
“ಪೊಲೀಸ್ ವ್ಯವಸ್ಥೆ ಮೇಲೆ ನಂಬಿಕೆ ಇರಬೇಕು. ಇವರು ಸಹ ನಿಮ್ಮ ಕುಟುಂಬವಿದ್ದಂತೆ. ಯಾವುದೇ ಪೊಲೀಸ್ ಆಗಲಿ ಕುಟುಂಬ ವ್ಯವಸ್ಥೆಗೆ ಧಕ್ಕೆ ತರುವುದಿಲ್ಲ. ಇವರು ರಾಜ್ಯದ ಹಿತಕ್ಕಾಗಿ ದುಡಿಯುತ್ತಿದ್ದಾರೆ. ಎಲ್ಲಾ ಜನಪ್ರತಿನಿಧಿಗಳು ನಶೆ ಮುಕ್ತ ಕರ್ನಾಟಕಕ್ಕೆ ಕೈ ಜೋಡಿಸಲಿದ್ದಾರೆ” ಎಂದು ಹೇಳಿದರು.
- Bangalore crime news
- CM DK Shivakumar speech
- Drug free Karnataka 2028
- Drugs free Karnataka
- International Day against Drug Abuse
- Karnataka anti drug drive
- Karnataka Police drug bust
- Priyank Kharge Home Minister
- Rewards for drug information
- Student policing Karnataka
- ಕಂಠೀರವ ಕ್ರೀಡಾಂಗಣ
- ಕರ್ನಾಟಕ ಪೊಲೀಸ್ ಇಲಾಖೆ
- ಡ್ರಗ್ಸ್ ದಂಧೆ ತಡೆ
- ಡ್ರಗ್ಸ್ ದಂಧೆ ಬಹುಮಾನ
- ನಶೆ ಮುಕ್ತ ಕರ್ನಾಟಕ
- ಪ್ರಿಯಾಂಕ್ ಖರ್ಗೆ
- ಬೆಂಗಳೂರು ಕ್ರೈಂ ನ್ಯೂಸ್
- ಮಾದಕ ವಸ್ತು ಮುಕ್ತ ಕರ್ನಾಟಕ
- ಮಾದಕ ವಸ್ತು ವಿರೋಧಿ ದಿನ
- ಮಾದಕ ವಸ್ತುಗಳ ನಾಶ
- ಸಿಎಂ ಡಿಕೆ ಶಿವಕುಮಾರ್





Leave a comment