ನ್ಯೂಯಾರ್ಕ್: “ಭಾರತದಲ್ಲಿ ಮುಸ್ಲಿಮರಿಗೆ ಸ್ಥಾನವಿಲ್ಲ ಎಂದು ಭಾವಿಸುವ ಯಾವುದೇ ವ್ಯಕ್ತಿ ನಿಜವಾದ ಹಿಂದೂ ಆಗಿರಲು ಸಾಧ್ಯವಿಲ್ಲ” ಎಂದು ಆರ್ಎಸ್ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದ ‘ಒಂದು ಜಗತ್ತು, ಒಂದು ಮಾನವೀಯತೆ’ (One World, One Humanity) ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ರಾಷ್ಟ್ರದ ಕಲ್ಪನೆಯು ಮುಸ್ಲಿಮರನ್ನು ಹೊರಗಿಡುವುದಿಲ್ಲ. ಹಿಂದುತ್ವವು ಜಾಗತಿಕ ಸೋದರತ್ವ ಮತ್ತು ಸಾರ್ವತ್ರಿಕ ಏಕತೆಯನ್ನು ಪ್ರತಿಪಾದಿಸುತ್ತದೆ ಎಂದು ತಿಳಿಸಿದರು.
2018ರ ಸಂವಾದ ನೆನಪಿಸಿಕೊಂಡ ಭಾಗವತ್:
2018ರಲ್ಲಿ ದೆಹಲಿಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ನಡೆದ ಸಂವಾದವನ್ನು ಉಲ್ಲೇಖಿಸಿದ ಅವರು, “ನಾವು ಹಿಂದೂ ರಾಷ್ಟ್ರ ಎಂದು ಹೇಳಿದಾಗ, ‘ಮುಸ್ಲಿಮರನ್ನು ದೇಶದಿಂದ ಹೊರಹಾಕುತ್ತೀರಾ?’ ಎಂದು ಕೆಲವರು ಕೇಳಿದ್ದರು. ಅದಕ್ಕೆ ನಾನು ‘ಖಂಡಿತ ಇಲ್ಲ, ಅದು ಹಿಂದುತ್ವದ ತತ್ವವಲ್ಲ’ ಎಂದು ಉತ್ತರಿಸಿದ್ದೆ. ಎಲ್ಲಾ ಮಾರ್ಗಗಳೂ ಒಂದೇ ದೇವರತ್ತ ಕೊಂಡೊಯ್ಯುತ್ತವೆ ಎಂದು ನಂಬುವುದೇ ಹಿಂದುತ್ವದ ಮೂಲ ತತ್ವ” ಎಂದರು.
ಸಂಪ್ರದಾಯ ಮತ್ತು ಆಚರಣೆಗಳು ವಿಭಿನ್ನವಾಗಿದ್ದರೂ, ಸತ್ಯ ಮತ್ತು ಮಾನವೀಯತೆ ಒಂದೇ ಆಗಿದೆ. ಭಾರತವು ಶತಮಾನಗಳಿಂದಲೂ ವಿವಿಧ ಧರ್ಮ ಮತ್ತು ಸಂಪ್ರದಾಯಗಳಿಗೆ ಆಶ್ರಯ ನೀಡುತ್ತಾ ಬಂದಿದ್ದು, ಇಡೀ ಜಗತ್ತನ್ನೇ ಒಂದು ಕುಟುಂಬ (“ವಸುಧೈವ ಕುಟುಂಬಕಂ”) ಎಂದು ಕಾಣುವ ಪರಂಪರೆ ನಮ್ಮದಾಗಿದೆ ಎಂದು ಅವರು ಪ್ರತಿಪಾದಿಸಿದರು.





Leave a comment