SUDDIKSHANA KANNADA NEWS/ DAVANAGERE/ DATE:25-12-2023
ದಾವಣಗೆರೆ: ಎರಡು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಅಡಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಕಿರುವ ಘಟನೆ ಹೊನ್ನಾಳಿ ತಾಲ್ಲೂಕಿನ ಮುಕ್ತೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತರಾದ ಪರಮೇಶ್ವರಪ್ಪ ಅವರಿಗೆ ಸೇರಿದ ಎರಡು ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಅಡಿಕೆ ಗಿಡಗಳನ್ನು ರಾತ್ರೋರಾತ್ರಿ ಕಡಿದು ಹಾಕಲಾಗಿದೆ.ಜಮೀನಿನ ವ್ಯಾಜ್ಯದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಈ
ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ರೈತ ಪರಮೇಶ್ವರಪ್ಪ ಅವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಸುಮಾರು ಒಂದು ಸಾವಿರ ಅಡಕೆ ಮರಗಳನ್ನು ಬೆಳೆಸಿದ್ದರು. ಆದರೆ ರಾತ್ರೋರಾತ್ರಿ ಈ ಘಟನೆ ನಡೆದಿರುವುದು ಕುಟುಂಬದ ಸದಸ್ಯರಿಗೆ ಆಘಾತ
ತಂದಿದೆ.ಈ ಕುರಿತು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿ. ಜಿ. ಶಾಂತನಗೌಡ ಭೇಟಿ, ಪರಿಶೀಲನೆ:
ಮುಕ್ತೇನಹಳ್ಳಿ ಗ್ರಾಮದ ಪರಮೇಶ್ವರಪ್ಪ ಅವರ 2 ಎಕರೆ ಜಮೀನಿನಲ್ಲಿ ಹಾಕಿದ್ದ ಸುಮಾರು ಒಂದೂವರೆ ವರ್ಷದ ಅಡಿಕೆಗಿಡಗಳನ್ನ ತಡರಾತ್ರಿ ದುಷ್ಕರ್ಮಿಗಳು ಸಂಪೂರ್ಣವಾಗಿ ಕಡಿದು ಹಾಕಿದ್ದು ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಅವರ ಕುಟುಂಬ ಸದಸ್ಯರಿಗೆ ಹೊನ್ನಾಳಿ – ನ್ಯಾಮತಿ ಶಾಸಕ ಡಿ. ಜಿ. ಶಾಂತನಗೌಡ ಸಾಂತ್ವನ ಹೇಳಿದರು. ಆರಕ್ಷಕ ಇಲಾಖೆಯ ಅಧಿಕಾರಿಗಳಿಗೆ ಸಂಪೂರ್ಣ ತನಿಖೆ ನಡೆಸಿ ದುಷ್ಕರ್ಮಿಗಳನ್ನ ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ರೇಣುಕಾಚಾರ್ಯ ಭೇಟಿ:
ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ಅವರು, ಮುಕ್ತೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದರು. ಈ ಕೃತ್ಯ ಎಸಗಿದ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಬೇಕು. ಆದಷ್ಟು ಬೇಗ ಆರೋಪಿಗಳನ್ನು
ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು. ಇನ್ನು ರೈತ ಪರಮೇಶ್ವರಪ್ಪ ಅವರಿಗೆ ಸಾಂತ್ವನ ಹೇಳುವ ಜೊತೆಗೆ ಧೈರ್ಯ ತುಂಬಿದರು.