ನವದೆಹಲಿ : ಎನ್ಡಿಎ ಮೈತ್ರಿಕೂಟದ ಸಮ್ಮಿಶ್ರ ಸರ್ಕಾರ ಭಾನುವಾರ ಅಸ್ತಿತ್ವಕ್ಕೆ ಬಂದಿದ್ದು, ಮೋದಿ ಅವರ 3.0 ಸರ್ಕಾರದಲ್ಲಿ ಮೂವತ್ತು ಮಂದಿಗೆ ಸಂಪುಟ ದರ್ಜೆ, 36 ಸಂಸದರಿಗೆ ರಾಜ್ಯ ಖಾತೆಯನ್ನು ನೀಡಲಾಗಿದೆ. ಭಾನುವಾರ ಸಂಜೆ 7.15ಕ್ಕೆ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಕರ್ನಾಟಕದ ಐವರು ಸೇರಿದಂತೆ ಒಟ್ಟು 72 ಮಂದಿ ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಪೈಕಿ ಆರು ಮಂದಿ ವಿವಿಧ ರಾಜ್ಯಗಳ ಮಾಜಿ ಮುಖ್ಯಮಂತ್ರಿಗಳು, ಆರು ಜನ ರಾಜ್ಯಸಭೆ ಸದಸ್ಯರು ಸೇರಿದ್ದಾರೆ. ಕಳೆದ 3-4 ವರ್ಷಗಳಿಂದ ಬಿಜೆಪಿ ಅಧ್ಯಕ್ಷರಾಗಿ ಪಕ್ಷದ ಕೆಲಸ ಕಾರ್ಯಗಳನ್ನು ನಿರ್ವಹಿಸಿದ ಜೆ.ಪಿ.ನಡ್ಡಾ ಅವರನ್ನು ಪ್ರಧಾನಿ ಮೋದಿ ಅವರು ಈ ಸಲ ತಮ್ಮ ಸಂಪುಟಕ್ಕೆ ಸೇರಿಕೊಂಡಿದ್ದರೆ, ಎನ್ ಸಿಪಿಯ ಅಜಿತ್ ಪವಾರ್ ಬಣಕ್ಕೆ ಮೋದಿ ಕ್ಯಾಬಿನೆಟ್ ನಲ್ಲಿ ಅವಕಾಶ ನೀಡದಿರೋದು ಆಶ್ಚರ್ಯಕರ ಸಂಗತಿ. ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ 20 ಮಂದಿಗೆ ಮೋದಿಯವರ 3.0 ಜಂಬೋ ಕ್ಯಾಬಿನೆಟ್ ನಲ್ಲೂ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಬಿಜೆಪಿಯ ಒಟ್ಟು 37 ಸಂಸದರಿಗೆ ಸಚಿವ ಸ್ಥಾನಗಳನ್ನು ನೀಡಲಾಗಿದೆ. ಆದರೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸೋತ ಪ್ರಮುಖ ಅಭ್ಯರ್ಥಿಗಳ ಪೈಕಿ ರಾಜೀವ್ ಚಂದ್ರಶೇಖರ್, ಸ್ಮೃತಿ ಇರಾನಿ, ಅನುರಾಗ್ ಠಾಕೂರ್, ಪುರುಷೋತ್ತಮ ರೂಪಾಲಿ, ನಾರಾಯಣ ರಾಣೆ ಅವರಿಗೆ ಸಂಪುಟದಿಂದ ಕೋಕ್ ನೀಡಲಾಗಿದೆ. ಯಾರೆಲ್ಲ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು? ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಜೆ.ಪಿ.ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್, ನಿರ್ಮಲಾ ಸೀತಾರಾಮನ್, ಎಸ್.ಜೈಶಂಕರ್, ಮನೋಹರಲಾಲ್ ಖಟ್ಟರ್, ಹೆಚ್.ಡಿ.ಕುಮಾರಸ್ವಾಮಿ, ಪಿಯೂಶ್ ಗೋಯಲ್, ಧರ್ಮೇಂದ್ರ ಪ್ರಧಾನ್, ಜಿತನ್ ರಾಮ್ ಮಾಂಝಿ, ರಾಜೀವ್ ರಂಜನ್ ಸಿಂಗ್, ಸರ್ಬಾನಂದ ಸೋನೋವಾಲ್, ಡಾ.ವೀರೇಂದ್ರ ಕುಮಾರ್, ಕಿಂಜರಾಪು ರಾಮ್ ಮೋಹನ್ ನಾಯ್ಡು, ಪ್ರಹ್ಲಾದ್ ಜೋಶಿ, ಜುಯಲ್ ಓರಾಮ್, ಗಿರಿರಾಜ್ ಸಿಂಗ್, ಅಶ್ವಿನಿ ವೈಷ್ಣವ್, ಜ್ಯೋತಿರಾದಿತ್ಯ ಸಿಂಧ್ಯಾ, ಭೂಪೇಂದ್ರ ಯಾದವ್, ಗಜೇಂದ್ರಸಿಂಗ್ ಶೇಖಾವತ್, ಅನ್ನಪೂರ್ಣಾದೇವಿ, ಕಿರಣ್ ರಿಜಿಜು, ಹರ್ದೀಪ್ ಸಿಂಗ್ ಪುರಿ, ಡಾ.ಮನ್ಸೂಖ್ ಮಾಂಡವೀಯ, ಜಿ.ಕಿಶನ್ ರೆಡ್ಡಿ, ಚಿರಾಗ್ ಪಾಸ್ವಾನ್, ಸಿ.ಆರ್.ಪಾಟೀಲ್, ಇಂದ್ರಜಿತ್ ಸಿಂಗ್, ಡಾ.ಜಿತೇಂದ್ರ ಸಿಂಗ್, ಅರ್ಜುನ್ ರಾಮ್ ಮೇಘವಾಲ್, ಪ್ರತಾಪ್ ರಾವ್ ಗಣಪತರಾವ್ ಜಾಧವ್, ಜಯಂತ್ ಚೌಧರಿ, ಜಿತಿನ್ ಪ್ರಸಾದ್, ಶ್ರೀಪಾದ್ ನಾಯಕ್, ಪಂಕಜ್ ಚೌಧರಿ, ಕಿಶನ್ ಪಾಲ್ ಗುರ್ಜರ್, ರಾಮ್ ದಾಸ್ ಅಠಾವಳೆ, ರಾಮ್ ನಾಥ್ ಠಾಕೂರ್, ನಿತ್ಯಾನಂದ ರಾಯ್, ಅನುಪ್ರಿಯಾ ಪಟೇಲ್, ವಿ.ಸೋಮಣ್ಣ, ಡಾ.ಚಂದ್ರಶೇಖರ್, ಪ್ರೊ.ಎಸ್.ಪಿ.ಸಿಂಗ್ ಬಘೇಲ, ಶೋಭಾ ಕರಂದ್ಲಾಜೆ, ಕೀರ್ತಿವರ್ಧನ್ ಸಿಂಗ್, ಬಿ.ಎಲ್.ವರ್ಮಾ, ಶಾಂತನೂ ಠಾಕೂರ್, ಸುರೇಶ್ ಗೋಪಿ, ಎಲ್.ಮುರುಗನ್, ಅಜಯ್ ತಮಟಾ, ಬಂಡಿ ಸಂಜಯ್ ಕುಮಾರ್, ಕಮಲೇಶ್ ಪಾಸ್ವಾನ್, ಭಗೀರಥ ಚೌಧರಿ, ಸತೀಶ್ ಚಂದ್ರ ದುಬೆ, ಸಂಜಯ್ ಸೇಠ್, ರವನೀತ್ ಸಿಂಗ್, ದುರ್ಗಾದಾಸ್ ವಿ.ಕೆ, ರಕ್ಷಾ ನಿಖಿಲ್ ಖಡ್ಸೆ, ಸುಕಾಂತ್ ಮುಜುಂದಾರ್, ಸಾವಿತ್ರಿ ಠಾಕೂರ್, ತೊತನ್ ಸಾಹು, ರಾಜ್ ಭೂಷಣ್ ಚೌಧರಿ, ಭೂಪತಿ ಶ್ರೀನಿವಾಸ್ ಶರ್ಮಾ, ಹರ್ಷ ಮಲ್ಹೋತ್ರಾ, ನಿಟುಬೆನ್ ಜಯಂತಿಬಾಯಿ, ಮುರಳೀಧರ ಮೋಹನ್, ಜಾರ್ಜ್ ಕುರಿಯನ್ ಪ್ರಮಾಣ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪತಿ ಮುರ್ಮು ಪ್ರತಿಜ್ಞಾಗೌಪ್ಯ ವಿಧಿಯೊಂದಿಗೆ ಪ್ರಮಾಣ ವಚನವನ್ನು ಬೋಧಿಸಿದರು. ಬಹುತೇಕ ಸಂಸದರು ಈಶ್ವರನ ಹೆಸರಲ್ಲಿ ಪ್ರಮಾಣವನ್ನು ಸ್ವೀಕರಿಸಿದರೆ, ಕೆಲವರು ದೇವರ ಹೆಸರಲ್ಲಿ ಮತ್ತೆ ಕೆಲವರು ಸತ್ಯ-ನಿಷ್ಠೆಗಳ ಹೆಸರಲ್ಲಿ, ಸಂವಿಧಾನದ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಉಪರಾಷ್ಟ್ರಪತಿ ಜಗದೀಪ್ ಧನಕರ್, ವಿವಿಧ ರಾಜ್ಯಗಳ ರಾಜ್ಯಪಾಲರು, ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಸಂಸದರ ಕುಟುಂಬಸ್ಥರು ಸೇರಿ ಮತ್ತಿತರ ಗಣ್ಯರು ಹಾಜರಿದ್ದರು. ನೆರೆಯ ದೇಶಗಳಾದ ಶ್ರೀಲಂಕಾದ ಅಧ್ಯಕ್ಷ ವಿಕ್ರಮ್ ರಾನಿಲ್ ಸಿಂಘೆ, ಬಾಂಗ್ಲಾ ದೇಶದ ಅಧ್ಯಕ್ಷೆ ಹಸೀನಾ ಬೇಗಂ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮಯಿಝ ಸೇರಿದಂತೆ ಮತ್ತಿತರು ಪದಗ್ರಹಣ ಸಮಾರಂಭಕ್ಕೆ ಸಾಕ್ಷಿಯಾದರು. ಬಳಿಕ ಪ್ರಧಾನಿ, ರಾಷ್ಟ್ರಪತಿಗಳೊಂದಿಗೆ ನೂತನ ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಸಂಸದರು ಸಾಮೂಹಿಕ ಫೋಟೋಕೆ ಪೋಸ್ ನೀಡಿದರು.