ಮುಂಬೈ: ಕಂಗನಾ ರಣಾವತ್ ಅಭಿನಯದ ‘ರಾಜ್ಜೊ’ ಸಿನಿಮಾ ಸೇರಿದಂತೆ ‘ಪರಿಚಯ್’ ಹಾಗೂ ‘ಸಾವಧಾನ್ ಇಂಡಿಯಾ’ದಂತಹ ಜನಪ್ರಿಯ ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದ 27 ವರ್ಷದ ನಟಿ ಕೃತಿಕಾ ಚೌಧರಿ ಅವರ ದಾರುಣ ಕೊಲೆ ಪ್ರಕರಣದ ರಹಸ್ಯ ಮತ್ತೆ ಸೌಂಡ್ ಮಾಡುತ್ತಿದೆ. ಮುಂಬೈನ ಅಂಧೇರಿ ವೆಸ್ಟ್ನಲ್ಲಿರುವ ತಮ್ಮ ಫ್ಲ್ಯಾಟ್ನಲ್ಲಿ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದ ನಟಿಯ ಸಾವು ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ದುರ್ವಾಸನೆಯಿಂದ ಬಯಲಾದ ಕೊಲೆ ರಹಸ್ಯ
2017ರ ಜೂನ್ 12ರಂದು ಅಂಧೇರಿ ವೆಸ್ಟ್ನ ಶ್ರೀ ಭೈರವನಾಥ ಎಸ್ಆರ್ಎ ಸೊಸೈಟಿಯ 5ನೇ ಮಹಡಿಯ ಫ್ಲ್ಯಾಟ್ ಸಂಖ್ಯೆ 503 ರಿಂದ ತೀವ್ರ ದುರ್ವಾಸನೆ ಬರಲು ಪ್ರಾರಂಭಿಸಿತು. ನೆರೆಹೊರೆಯವರು ತಕ್ಷಣ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಬಾಗಿಲು ಮುರಿದು ಒಳಹೋದಾಗ ಕೃತಿಕಾ ಶವವಾಗಿ ಬಿದ್ದಿದ್ದರು. ಶವ ಕೊಳೆಯುವುದನ್ನು ತಡಮಾಡಲು ಹಾಗೂ ನೆರೆಹೊರೆಯವರಿಗೆ ಸಂಶಯ ಬಾರದಿರಲು ಕೊಲೆಗಾರರು ಟಿವಿ ಮತ್ತು ಎಸಿಯನ್ನು ಆನ್ನಲ್ಲೇ ಇಟ್ಟು, ಹೊರಗಿನಿಂದ ಬೀಗ ಹಾಕಿ ಪರಾರಿಯಾಗಿದ್ದರು.
ಸಾಕ್ಷ್ಯಾಧಾರಗಳ ಪ್ರಕಾರ, ಕೃತಿಕಾ ಅವರ ತಲೆಗೆ ಹಿತ್ತಾಳೆಯ ‘ಬ್ರಾಸ್ ನಕಲ್’ನಿಂದ ಭೀಕರವಾಗಿ ಹೊಡೆದು ಕೊಲೆ ಮಾಡಲಾಗಿತ್ತು. ಸ್ಥಳದಲ್ಲಿ ಡ್ರಗ್ಸ್ ಎನ್ನಲಾದ ಬಿಳಿ ಪೌಡರ್ ಹಾಗೂ ರಕ್ತಸಿಕ್ತವಾದ ಗಂಡಸಿನ ಶರ್ಟ್ ಪತ್ತೆಯಾಗಿತ್ತು.
ಸಿಸಿಟಿವಿ ದೃಶ್ಯ ಹಾಗೂ ಆರೋಪಿಗಳ ಬಂಧನ
ಕಟ್ಟಡದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರಿಗೆ ಇಬ್ಬರು ಶಂಕಿತ ವ್ಯಕ್ತಿಗಳು ಕೃತಿಕಾ ಫ್ಲ್ಯಾಟ್ನಿಂದ ಹೊರಹೋಗುವುದು ಕಂಡುಬಂತು. ಸ್ಥಳದಲ್ಲಿದ್ದ ರಕ್ತದ ಕಲೆಯಿದ್ದ ಶರ್ಟ್ ಹಾಗೂ ಮಾಹಿತಿ ನೀಡಿದವರ ಸಹಾಯದಿಂದ ಪೊಲೀಸರು ಪನ್ವೇಲ್ನಲ್ಲಿ ಶಕೀಲ್ ನಸೀಮ್ ಮತ್ತು ವಾಸುದೇವ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದರು.
6,000 ರೂಪಾಯಿ ಸಾಲದ ಸಿದ್ಧಾಂತ
ಪೋಲಿಸರ ವಿಚಾರಣೆ ವೇಳೆ ಆರೋಪಿ ಶಕೀಲ್ ನಸೀಮ್, ತಾನು ಡ್ರಗ್ಸ್ ಡೀಲರ್ ಆಗಿದ್ದು, ಕೃತಿಕಾ ತನಗೆ 6,000 ರೂಪಾಯಿ ಸಾಲ ನೀಡಬೇಕಿತ್ತು ಎಂದು ಹೇಳಿಕೆ ನೀಡಿದ್ದ. ಜೂನ್ 8ರಂದು ಹಣ ವಸೂಲಿಗಾಗಿ ಬಂದಾಗ ಮೂವರೂ ಒಟ್ಟಿಗೆ ಊಟ ಮಾಡಿದ್ದರು. ಬಳಿಕ ಹಣದ ವಿಚಾರವಾಗಿ ಜಗಳವಾಗಿ, ಆಕೆಯ ತಲೆಗೆ ಬ್ರಾಸ್ ನಕಲ್ನಿಂದ ಹೊಡೆದು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ.
ಪೊಲೀಸರ ವಾದಕ್ಕೆ ಕುಟುಂಬಸ್ಥರ ಅನುಮಾನ
ಆದರೆ, ಪೊಲೀಸರು ಮಂಡಿಸಿದ ಈ 6,000 ರೂ. ಸಾಲದ ಕೊಲೆ ಸಿದ್ಧಾಂತವನ್ನು ಕೃತಿಕಾ ಕುಟುಂಬಸ್ಥರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಕೊಲೆ ನಡೆದ ಸ್ಥಳದಲ್ಲಿ ಪೊಲೀಸರಿಗೆ 22,000 ರೂಪಾಯಿ ನಗದು ಸಿಕ್ಕಿತ್ತು. “ಕೈಯಲ್ಲಿ 22,000 ರೂ. ನಗದು ಇರುವಾಗ, ಕೇವಲ 6,000 ರೂ. ಸಾಲಕ್ಕಾಗಿ ನನ್ನ ತಂಗಿ ಪ್ರಾಣ ಕಳೆದುಕೊಳ್ಳಲು ಹೇಗೆ ಸಾಧ್ಯ?” ಎಂದು ಕೃತಿಕಾ ಸಹೋದರ ದೀಪಕ್ ಪ್ರಶ್ನಿಸಿದ್ದಾರೆ.





Leave a comment