ಕಾನ್ಪುರ: ಪ್ರೀತಿಸಿದ ಹುಡುಗಿಗಾಗಿ ಮೊದಲ ಪತ್ನಿ ಮತ್ತು ಮಗನನ್ನು ತೊರೆದು, ಆಕೆಯನ್ನೇ ಎರಡನೇ ಮದುವೆಯಾದ ವ್ಯಕ್ತಿಯೊಬ್ಬ ವಿವಾಹವಾದ ಕೇವಲ ಎರಡೇ ತಿಂಗಳಿಗೆ ಪತ್ನಿಯ ನಡತೆಯ ಮೇಲೆ ಅನುಮಾನಗೊಂಡು ಆಕೆಯನ್ನು ಕಬ್ಬಿಣದ ರಾಡ್ನಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯ ದುರೌಲಿ ಗ್ರಾಮದ ನಿವಾಸಿ ಗಜೇಂದ್ರ ಸಂಖ್ವಾರ್ (30) ವೃತ್ತಿಯಲ್ಲಿ ಮೇಸ್ತ್ರಿಯಾಗಿದ್ದನು. ಈತನಿಗೆ ಅಸ್ಮಾ (29) ಎಂಬ ಮಹಿಳೆಯೊಂದಿಗೆ ಪರಿಚಯವಾಗಿ, ಅದು ಪ್ರೇಮಕ್ಕೆ ತಿರುಗಿತ್ತು. ಇಬ್ಬರಿಗೂ ಈಗಾಗಲೇ ಮೊದಲ ಮದುವೆಯಾಗಿ ಮಕ್ಕಳಿದ್ದರೂ ಸಹ, ಗಜೇಂದ್ರ ತನ್ನ ಮೊದಲ ಪತ್ನಿ ಹಾಗೂ ಮಗನನ್ನು ತೊರೆದು ಅಸ್ಮಾಳೊಂದಿಗೆ ಸಂಸಾರ ಮಾಡಲು ನಿರ್ಧರಿಸಿದ್ದನು.
ಅಸ್ಮಾ ತನ್ನ ಹೆಸರನ್ನು ‘ಸಪ್ನಾ’ ಎಂದು ಬದಲಾಯಿಸಿಕೊಂಡು ಪ್ರಮಾಣಪತ್ರ ಸಲ್ಲಿಸಿ, ಗಜೇಂದ್ರನೊಂದಿಗೆ ಮಾತಿ ಕೋರ್ಟ್ನಲ್ಲಿ ಕಾನೂನುಬದ್ಧವಾಗಿ ವಿವಾಹವಾಗಿದ್ದಳು. ಮದುವೆಯ ನಂತರ ಇಬ್ಬರೂ ನೆಹರೂ ನಗರ ವಾರ್ಡ್ (ಅಕ್ಬರ್ಪುರ) ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಘಟನೆಗೆ ಕಾರಣವಾದ ಮೊಬೈಲ್ ಕಾಲ್:
ಮದುವೆಯಾದ ಆರಂಭದಲ್ಲೇ ದಂಪತಿಗಳ ನಡುವೆ ಸಣ್ಣಪುಟ್ಟ ವಿಚಾರಗಳಿಗೆ ಮನಸ್ತಾಪ ಶುರುವಾಗಿತ್ತು. ಗಜೇಂದ್ರನಿಗೆ ಸಪ್ನಾಳ ನಡತೆಯ ಮೇಲೆ ತೀವ್ರ ಅನುಮಾನವಿತ್ತು. ಸೆಪ್ಟೆಂಬರ್ 6ರ ಭಾನುವಾರ ಬೆಳಿಗ್ಗೆ ಸಪ್ನಾ ಮೊಬೈಲ್ನಲ್ಲಿ ಬೇರೆಯವರೊಂದಿಗೆ ಮಾತನಾಡುತ್ತಿದ್ದಾಗ ಗಜೇಂದ್ರ ಆಕೆಯೊಂದಿಗೆ ಜಗಳ ತೆಗೆದಿದ್ದಾನೆ. “ಯಾರ ಜೊತೆ ಮಾತನಾಡುತ್ತಿದ್ದೀಯಾ?” ಎಂದು ಪ್ರಶ್ನಿಸಿದ್ದು, ಮಾತಿಗೆ ಮಾತು ಬೆಳೆದು ವಾಗ್ವಾದ ಉಗ್ರರೂಪ ತಳೆದಿದೆ.
ಕಬ್ಬಿಣದ ರಾಡ್ನಿಂದ ಭೀಕರ ಹಲ್ಲೆ:
ಆಕ್ರೋಶಗೊಂಡ ಗಜೇಂದ್ರ ಮನೆಯಲ್ಲಿದ್ದ ಕಬ್ಬಿಣದ ರಾಡ್ನಿಂದ ಸಪ್ನಾಳ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸಪ್ನಾ ಸ್ಥಳದಲ್ಲೇ ಪ್ರಜ್ಞಾಹೀನಳಾಗಿ ಕುಸಿದು ಬಿದ್ದಿದ್ದಾಳೆ. ಕೊಲೆಯಾದ ಭೀತಿಯಲ್ಲಿ ಗಜೇಂದ್ರ ತಾನೇ ನೇರವಾಗಿ 112 ತುರ್ತು ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.
ಪೋಲಿಸ್ ತನಿಖೆ:
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ತೀವ್ರ ಗಾಯಗೊಂಡಿದ್ದ ಸಪ್ನಾಳನ್ನು ಅಕ್ಬರ್ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರೂ, ಆಕೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಪೊಲೀಸರು ಆರೋಪಿ ಗಜೇಂದ್ರ ಸಂಖ್ವಾರ್ನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.





Leave a comment