ನವದೆಹಲಿ: ಜಾರ್ಖಂಡ್ನಲ್ಲಿ ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮ ವಿರೋಧಿ ವಿದ್ಯಾರ್ಥಿ ಪ್ರತಿಭಟನೆಯ ನಡುವೆ, ಹಿರಿಯ ನಟ ನಸೀರುದ್ದೀನ್ ಶಾ, ಪಿಯೂಷ್ ಮಿಶ್ರಾ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ನಡುವೆ ಮಾತಿನ ಸಮರ ತೀವ್ರಗೊಂಡಿದೆ. ನಸೀರುದ್ದೀನ್ ಶಾ ಅವರನ್ನು ಕಂಗನಾ ರಣಾವತ್ “ನರಿ” (Lomdi) ಎಂದು ಕರೆಯುವ ಮೂಲಕ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.
ಏನಿದು ವಿವಾದ?
ಇತ್ತೀಚೆಗೆ ವಿದ್ಯಾರ್ಥಿ ಪ್ರತಿಭಟನೆಗಳ ಕುರಿತು ಬಾಲಿವುಡ್ನ ಪ್ರಮುಖ ನಟರು ಮೌನ ವಹಿಸಿರುವುದನ್ನು ಪ್ರಶ್ನಿಸಿದ್ದ ನಸೀರುದ್ದೀನ್ ಶಾ, “ಬಾಯಿಯಲ್ಲಿ ಮೂಳೆ ಇಟ್ಟುಕೊಂಡಿರುವ ನಾಯಿ ಬೊಗಳಲು ಸಾಧ್ಯವಿಲ್ಲ. ಬಾಯಿಯಿಂದ ಮೂಳೆ ಕೆಳಗೆ ಬಿದ್ದಾಗಷ್ಟೇ ಅವು ಬೊಗಳುತ್ತವೆ” ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ರಾಂಚಿಯ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ ನಟ-ಗಾಯಕ ಪಿಯೂಷ್ ಮಿಶ್ರಾ ಆಕ್ಷೇಪ ವ್ಯಕ್ತಪಡಿಸಿ, “ಈಗ ಜಾರ್ಖಂಡ್ನಲ್ಲಿ ನಡೆಯುತ್ತಿರುವ ಪರೀಕ್ಷೆ ಅಕ್ರಮಗಳ ಬಗ್ಗೆ ಮಾತನಾಡದ ‘ಮೂಳೆ ಇಟ್ಟುಕೊಂಡ ನಾಯಿಗಳು’ ಯಾರು?” ಎಂದು ಶಾ ಅವರ ಹೇಳಿಕೆಯನ್ನು ನೇರವಾಗಿ ಪ್ರಶ್ನಿಸಿದ್ದರು.
ಕಂಗನಾ ರಣಾವತ್ ಕಟು ಪ್ರತಿಕ್ರಿಯೆ:
ಪಿಯೂಷ್ ಮಿಶ್ರಾ ಹೇಳಿಕೆಯನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಕಂಗನಾ ರಣಾವತ್:
“ಸತ್ಯವೇನೆಂದರೆ ಪ್ರತಿಯೊಬ್ಬರೂ ಯಾರದ್ದೋ ನಾಯಿಯೇ. ಆದರೆ ನಾನು ತಿಂದ ಮನೆಗೆ (ದೇಶಕ್ಕೆ) ನಿಷ್ಠೆಯಿಂದಿದ್ದು, ಅದಕ್ಕಾಗಿ ಹೋರಾಡುತ್ತೇನೆ ಎಂಬ ಹೆಮ್ಮೆ ನನಗಿದೆ. ನಸೀರ್ ಸಾಬ್ ಈ ದೇಶದ ಅನ್ನ ತಿಂದು ನೆರೆ ದೇಶಕ್ಕಾಗಿ ಹೋರಾಡುತ್ತಾರೆ,” ಎಂದು ಆರೋಪಿಸಿದರು.
ಮುಂದುವರಿದು, “ಇಂದಿನ ಕಾಲದಲ್ಲಿ ಯಾರನ್ನಾದರೂ ನಾಯಿ ಎಂದು ಕರೆಯುವುದು ಮೆಚ್ಚುಗೆಯಿದ್ದಂತೆ, ಏಕೆಂದರೆ ನಿಷ್ಠೆ ಮತ್ತು ಮುಗ್ಧತೆ ಅಪರೂಪ. ನಸೀರುದ್ದೀನ್ ಅವರಂತಹ ನರಿ (Lomdi) ಆಗುವುದಕ್ಕಿಂತ ನಾಯಿಯಾಗಿಯೇ ಇರಲು ಬಯಸುತ್ತೇನೆ,” ಎಂದು ತಿರುಗೇಟು ನೀಡಿದರು.





Leave a comment