ನವದೆಹಲಿ: ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸಂಸ್ಥೆಯ ಪದಾಧಿಕಾರಿಗಳ ಮೇಲಿದ್ದ ಕ್ರಿಮಿನಲ್ ಆರೋಪಗಳನ್ನು ಅಮೆರಿಕದ ಫೆಡರಲ್ ನ್ಯಾಯಾಲಯವು ಖಾಯಂ ಆಗಿ ವಜಾಗೊಳಿಸಿದ ಬೆನ್ನಲ್ಲೇ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬೆಳವಣಿಗೆಯ ಹಿಂದೆ “ಕಣ್ಣಿಗೆ ಕಾಣಿಸುವುದಕ್ಕಿಂತ ಹೆಚ್ಚಿನ ಸಂಗತಿಗಳಿವೆ” ಎಂದು ಅವರು ಆರೋಪಿಸಿದ್ದಾರೆ.
ಅಮೆರಿಕ ನ್ಯಾಯಾಲಯದ ತೀರ್ಪಿನ ವರದಿಯನ್ನು ‘X’ (ಟ್ವಿಟರ್) ನಲ್ ಹಂಚಿಕೊಂಡಿರುವ ರಾಹುಲ್ ಗಾಂಧಿ, “ಒಪ್ಪಂದಗಳಿಗೆ ಮಣಿದಿರುವ ಪ್ರಧಾನಿಯೊಬ್ಬರು ಭಾರತದ ಹಿತಾಸಕ್ತಿಯನ್ನು ಮಾರಾಟ ಮಾಡಲು ಬಲವಂತಕ್ಕೊಳಗಾಗಿದ್ದಾರೆ. ಇದರಿಂದಾಗಿ ಭಾರತವು ಇಂದು ದೊಡ್ಡ ಬೆಲೆಯನ್ನು ತೆರುತ್ತಿದೆ” ಎಂದು ಕಟುವಾಗಿ ವೀಮರ್ಶಿಸಿದ್ದಾರೆ.
ಅಮೆರಿಕದ ಈಸ್ಟರ್ನ್ ಡಿಸ್ಟ್ರಿಕ್ಟ್ ಆಫ್ ನ್ಯೂಯಾರ್ಕ್ನ ಜಿಲ್ಲಾ ನ್ಯಾಯಾಧೀಶ ನಿಕೋಲಸ್ ಗರಾಫಿಸ್ ಅವರು ಗೌತಮ್ ಅದಾನಿ, ಸಾಗರ್ ಅದಾನಿ ಹಾಗೂ ಅದಾನಿ ಗ್ರೀನ್ ಎನರ್ಜಿ ಮಾಜಿ ಸಿಇಒ ವಿನೀತ್ ಜೈನ್ ವಿರುದ್ಧದ ಸೆಕ್ಯುರಿಟಿ ವಂಚನೆ ಮತ್ತು ವೈರ್ ವಂಚನೆ ಸಂಚಿನ ಮೂರು ಕ್ರಿಮಿನಲ್ ಆರೋಪಗಳನ್ನು ಶಾಶ್ವತವಾಗಿ ವಜಾಗೊಳಿಸಿ ಆದೇಶಿಸಿದ್ದಾರೆ. ಅಮೆರಿಕ ನ್ಯಾಯಾಂಗ ಇಲಾಖೆಯ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಆದಾಗ್ಯೂ, ಈ ವಜಾಗೊಳಿಸುವಿಕೆಯು ಆರೋಪಗಳ ಸತ್ಯಾಸತ್ಯತೆಯ ಕುರಿತಾದ ತೀರ್ಪಲ್ಲ ಮತ್ತು ಇದನ್ನು ಆರೋಪಮುಕ್ತ ಎಂದು ಭಾವಿಸಬಾರದು ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ. ವಿಚಾರಣೆಗೆ ಹಾಜರಾಗದ ಇತರ ಐವರು ಭಾರತೀಯ ಆರೋಪಿಗಳಿಗೆ ಸಂಬಂಧಿಸಿದಂತೆ ತೀರ್ಪನ್ನು ಕಾಯ್ದಿರಿಸಲಾಗಿದೆ. ಕೋರ್ಟ್ ನಿರ್ಧಾರವನ್ನು ಗೌತಮ್ ಅದಾನಿ ಸ್ವಾಗತಿಸಿದ್ದು, ನ್ಯಾಯಾಂಗ ಪ್ರಕ್ರಿಯೆಗೆ ಗೌರವ ಸಲ್ಲಿಸುವುದಾಗಿ ತಿಳಿಸಿದ್ದಾರೆ.





Leave a comment