SUDDIKSHANA KANNADA NEWS/ DAVANAGERE/ DATE:08-02-2024
ದಾವಣಗೆರೆ: ದೇಶ ವಿಭಜನೆ ಬಗ್ಗೆ ಮಾತನಾಡುವ ಸಂಸದ ಡಿ. ಕೆ. ಸುರೇಶ್, ಶಾಸಕ ವಿನಯ್ ಕುಲಕರ್ಣಿ ಅವರು ದೇಶದ್ರೋಹಿಗಳು. ಇಂಥವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೊಳಿಸಬೇಕು ಎಂದು ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದರು.
ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಇಂಥ ರಾಷ್ಟ್ರದ್ರೋಹಿಗಳನ್ನು ಪಕ್ಷದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ತಾಕತ್ತಿದ್ದರೆ ಕಿತ್ತು ಹಾಕಲಿ ಎಂದು ಸವಾಲು ಹಾಕಿದರು.
ಮಲ್ಲಿಕಾರ್ಜುನ್ ಖರ್ಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅಖಂಡ ಭಾರತ ಇರುತ್ತದೆ. ಇದನ್ನು ವಿಭಜಿಸಲು ಸಾಧ್ಯವಿಲ್ಲ, ನಮ್ಮ ಸಹಕಾರವೂ ಇಲ್ಲ ಎಂದಿದ್ದಾರೆ. ಆದ್ರೆ, ದಕ್ಷಿಣ ಭಾರತ ಪ್ರತ್ಯೇಕ ಮಾಡಬೇಕು ಎಂದಿರುವ ಡಿ. ಕೆ. ಸುರೇಶ್ ಹಾಗೂ ವಿನಯ್ ಕುಲಕರ್ಣಿ ಅವರಂಥವರಿಗೆ ತಕ್ಕ ಶಿಕ್ಷೆಯಾಗಬೇಕು. ಇನ್ನೊಂದು ಬಾರಿ ಈ ರೀತಿ ಮಾತನಾಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೆ ತರಬೇಕು ಎಂದು ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡುವುದಾಗಿ ಹೇಳಿದರು.
ದೇಶವೆಂದರೆ ಇವರಿಬ್ಬರು ಏನಂದುಕೊಂಡಿದ್ದಾರೆ. ಭಾರತಾಂಬೆಯ ಮಕ್ಕಳು ನಾವು. ದೇಶ ತುಂಡು ಮಾಡಲು ಹೊರಟಿರುವ ರಾಷ್ಟ್ರದ್ರೋಹಿಗಳು. ಈ ವ್ಯವಸ್ಥೆ ಕಾಂಗ್ರೆಸ್ ಗೆ ಹೊಸದಲ್ಲ. ಜವಾಹರ್ ಲಾಲ್ ನೆಹರೂ ಅವರಿಂದಲೂ ಇದೇ ಮಾಡಿಕೊಂಡು ಬಂದಿರುವುದು. ಅಂದು ಹಿಂದೂಸ್ತಾನ ಪಾಕಿಸ್ತಾನ ಮಾಡಿದರು. ದೇಶ ಒಂದಾಗಲಿ, ಎರಡಾಗಲೀ, ನಾಲ್ಕಾಗಲೀ ನಾವು ಅಧಿಕಾರ ಹಿಡಿಯಬೇಕು ಎನ್ನುವುದು ಕಾಂಗ್ರೆಸ್ ಸಂಕಲ್ಪ. ಜಿನ್ನಾ ಸಂಸ್ಕೃತಿ ವಿನಯ್ ಕುಲಕರ್ಣಿ, ಡಿ. ಕೆ. ಸುರೇಶ್ ಬಾಯಲ್ಲಿ ಬಂದಿದೆ. ವಿಶ್ವದಲ್ಲಿ ಬಿಜೆಪಿ ಹತ್ತು ಕೋಟಿ ಸದಸ್ಯರನ್ನು ಹೊಂದಿದ ಏಕೈಕ ಪಕ್ಷ. ದೇಶ ತುಂಡು ಮಾಡಲು ಬಿಡಲ್ಲ. ದೇಶ ಒಡೆಯಲು ಅವಕಾಶ ಕೊಡುವುದಿಲ್ಲ. ಪಾಕಿಸ್ತಾನವನ್ನು ಭಾರತಕ್ಕೆ ಸೇರಿಸಿ ಅಖಂಡ ಭಾರತ ಮಾಡ್ತೇವೆ. ದೇಶ ತುಂಡರಿಸುತ್ತೇವೆ ಎಂಬ ಹೇಳಿಕೆ ಕೊಡುವಾಗ ಖಂಡಿಸುವ ಶಕ್ತಿ ಕೆಲವರಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ದೇಶ ವಿಭಜನೆಗೆ ನಾವು ಒಪ್ಪಲ್ಲ ಎಂದಿರುವ ಸಿದ್ದರಾಮಯ್ಯ ಅವರು ಇದೊಂದು ಸತ್ಯ ಹೇಳಿದ್ದಾರೆ. ಇದನ್ನು ಸ್ವಾಗತಿಸುತ್ತೇನೆ. ತಲೆಯಿಂದ ಪಾದದವರೆಗೂ ಸುಳ್ಳು ಹೇಳುತ್ತಾರೆ. ಆದ್ರೆ, ಈ ವಿಚಾರದಲ್ಲಿ ಸತ್ಯ ಹೇಳಿರುವುದು ಸಂತಸದ ವಿಚಾರ ಎಂದರು.
ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಚಂದ್ರನ ಫೋಟೋ ಇಟ್ಟಿದ್ದು ಬಿಜೆಪಿಯಲ್ಲ, ವಿಶ್ವದಲ್ಲಿಯೇ ಈ ಬಗ್ಗೆ ಮಾತನಾಡಲಾಗುತ್ತಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ, ತುಂಡು ತುಂಡು ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಜನರು ತಕ್ಕ ಪಾಠ ಕಲಿಸುವುದು ನಿಶ್ಚಿತ. ಪ್ರಭು ಶ್ರೀರಾಮಚಂದ್ರ ಎಲ್ಲಾ ಜಾತಿಗಳನ್ನು ಒಟ್ಟಾಗಿಸಿದ. ಒಂದೆಡೆ ರಾಮ ಮತ್ತೊಂದು ಕಡೆ ಮೋದಿ ಎನ್ನುವುದು ದೇಶದ ಜನರ ಮಾತು. ಮೋದಿ ಹೆಸರು ಕೇಳಿದರೆ ಎಷ್ಟೋ ಜನರ ಎದೆಬಡಿತ ಹೆಚ್ಚಾಗುತ್ತದೆ. ಕಾಂಗ್ರೆಸ್ ನವರು ಗುಂಪಾಗಿ ಸೇರಿದಾಗ ನನ್ನ ಪತ್ನಿ, ಮಕ್ಕಳು ಬಿಜೆಪಿಗೆ ಮತ ಹಾಕ್ತಾರೆ, ನಾನು ರಾಷ್ಟ್ರಪ್ರೇಮಿ. ಮೋದಿಗೆ ಮತ ಹಾಕ್ತೇನೆ ಎನ್ನತೊಡಗಿದ್ದಾರೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಅಹಿಂದ ನಾಯಕರೆಂದು ಮೊದಲಿನಿಂದಲೂ ಹೇಳುತ್ತಲೇ ಇದ್ದಾರೆ. ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ ಘಡದಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತಾಗಿಯ್ತು. ಕಾಂಗ್ರೆಸ್ ಕಿತ್ತು ಬಿಸಾಕಿ ಮೂರು ರಾಜ್ಯದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ತಂದಿರುವ ಜನರು ಅಲ್ಲಿ ಇಲ್ಲಿ ಉಸಿರಾಡುತ್ತಿರುವ ಕಾಂಗ್ರೆಸ್ ಗೆ ಕೊನೆ ಮೊಳೆ ಹೊಡೆಯಲಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಯಾವಾಗ ಬಿದ್ದು ಹೋಗುತ್ತೋ ಏನೋ ಗೊತ್ತಿಲ್ಲ ಎಂದು ಭವಿಷ್ಯ ನುಡಿದರು.
ಮಥುರಾ, ಕಾಶಿ ಹಿಂದೂಗಳ ಕೈಗೆ ಬಂದರೆ ಹಿಂದೂಗಳ ಯಶಸ್ವಿಗೆ ಕಾರಣವಾಗುತ್ತೆ ಎಂಬ ಹೊಟ್ಟೆ ಉರಿ ಕಾಂಗ್ರೆಸ್ ಗೆ ಇದೆ. ಅನೇಕ ಕಾಂಗ್ರೆಸ್ಸಿಗರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಸ್ವರ್ಗದಲ್ಲಿದ್ದಾರೆ. ವಂದೇ ಮಾತರಂ ಘೋಷಣೆ ಕೂಗಿ ಪ್ರಾಣ ಬಿಟ್ಟರು. ಕಾಶಿ, ಮಥುರಾ ಹಿಂದೂಗಳ ಕೈಗೆ ಬರಬೇಕು. ಜನವರಿ 22 ರಂದು ಭವ್ಯ ರಾಮಮಂದಿರ ಕಟ್ಟಿದ ಬಳಿಕ ಸ್ವರ್ಗದಲ್ಲಿಯೂ ಜೈ ಶ್ರೀರಾಮ್ ಎಂದು ಆತ್ಮಗಳು ಹೇಳುತ್ತಿವೆ. ಕೆಲವೆಡೆ ಇನ್ನೂ ಮಸೀದಿಗಳಿವೆ. ಅಲ್ಲಿ ಹರ ಹರ ಮಹಾದೇವ ಘೋಷಣೆ ಕೇಳಿ ಬರಬೇಕು ಎಂದು ಹೇಳಿದರು.
ಬಿಜೆಪಿ ಎಂಪಿಗಳು ಗಂಡಸರು ಇಲ್ವಾ ಅಂತಾರೆ. ಯಾಕಿಂತ ಇಂಥ ಪದ ಬಳಸುತ್ತಿದ್ದಾರೆ ಗೊತ್ತಿಲ್ಲ. ನಾನು ಹುಟ್ಟಾದಿಗಿನಿಂದ ಆಡಳಿತ ನಡೆಸುವ ಸರ್ಕಾರ ದೆಹಲಿಗೆ ಹೋಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದನ್ನು ನೋಡಿರಲಿಲ್ಲ. ಎಲ್ಲಾ ಪತ್ರಿಕೆಗಳಲ್ಲಿಯೂ ಪೂರ್ತಿ ಪುಟ ಜಾಹೀರಾತು ಕೊಟ್ಟರೆ ದುಡ್ಡು ಬರುತ್ತಾ? ಕೇಂದ್ರದಲ್ಲಿ ಮನವಿ ಮಾಡಿ. ರಾಜಕಾರಣಕ್ಕೋಸ್ಕರ ಮಾಡಿದ್ದೇವೆ. ರಾಜಕಾರಣ ಮಾಡ್ತೀವಿ, ಸ್ವಲ್ಪ ಕೊಡಿ ಎಂದರೆ ಕೇಂದ್ರ ಸರ್ಕಾರ ಕೊಡುತ್ತೆ. ಗಂಡಸರಾ, ನಿಮ್ಮ ಅಪ್ಪನ ಮನೆಯಿಂದ ಕೊಡ್ತೀರಾ ಅಂತೀರಾ. ಬಿಜೆಪಿ ಎಂಪಿಗಳೂ ಬರಲಿ ಎಂಬ ಪ್ರಾರ್ಥನೆ ಮಾಡ್ತಾರೆ. ಇದು ಕಾಂಗ್ರೆಸ್ ನ ವಿಚಿತ್ರವಾದ ಪರಿಸ್ಥಿತಿ. ರಾಜ್ಯದ ಜನರು ದೊಂಬರಾಟ ನೋಡಿದ್ದಾರೆ ಎಂದು ತಿಳಿಸಿದರು.
ಶಾಸಕ ಬಿ. ಪಿ. ಹರೀಶ್ ಮಾತನಾಡಿ, ಕೇಂದ್ರದಲ್ಲಿ ಮತ್ತೊಮ್ಮೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಬರಬೇಕು. ಪ್ರತಿಯೊಬ್ಬರು ಮನೆ ಮನೆಗೆ ಹೋಗಿ ಮತದಾರರಿಗೆ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡೋಣ. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರೋಣ ಎಂದು ಕರೆ ನೀಡಿದರು.
ಮಾಜಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ನೀವೆಲ್ಲರೂ ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕುವ ಎಲ್ಲಾ ಬಿಜೆಪಿ ಸದಸ್ಯರು ಗೆಲ್ಲಬೇಕು. ಕೇಂದ್ರದಲ್ಲಿ ಬಂದಿರುವ ಅನುದಾನ ಕಟ್ಟಕಡೆಯ ಜನರಿಗೆ ತಲುಪಬೇಕು. ಅತಿ ಹೆಚ್ಚು ಮತಗಳಿಂದ ಸಂಸದರನ್ನಾಗಿ ಗೆಲ್ಲಿಸಿ ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಶಿವಯೋಗಿಸ್ವಾಮಿ, ಮಾಜಿ ಶಾಸಕರಾದ ಪ್ರೊ. ಲಿಂಗಣ್ಣ, ಗುರುಸಿದ್ದನಗೌಡ, ಮಾಡಾಳ್ ವಿರೂಪಾಕ್ಷಪ್ಪ, ನೂತನ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ನಿಕಟಪೂರ್ವ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಶಿವಕುಮಾರ್, ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್ ಮತ್ತಿತರರು ಹಾಜರಿದ್ದರು.