SUDDIKSHANA KANNADA NEWS/ DAVANAGERE/ DATE:18-10-2024
ದಾವಣಗೆರೆ: ಜೀವನದ ಸಮಸ್ಯೆಗಳಿಗೆ ಬೆನ್ನು ತೋರಿಸದೆ ಧೈರ್ಯದಿಂದ ಎದುರಿಸಿದಾಗ ಮಾತ್ರ ಭವಿಷ್ಯದ ಬದುಕು ಉಜ್ವಲವಾಗಿರುತ್ತದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಹೇಳಿದರು.
ಸಾರ್ವಜನಿಕ ವಾಲ್ಮೀಕಿ ಜಯಂತೋತ್ಸವ ಸಮಿತಿ ಹಾಗೂ ಶ್ರೀ ವಾಲ್ಮೀಕಿ ಪ್ರತಿಷ್ಟಾನದಿಂದ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ 3 ನೇ ವರ್ಷದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವದಲ್ಲಿ ಮಹಿಳಾ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತೃತೀಯ ಲಿಂಗಿಯಾಗಿ ಕುಟುಂಬದಿಂದ ಬಹಿಷ್ಕಾರಕ್ಕೆ ಒಳಗಾದ ನಾನು ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೆ. ಆದರೆ ಸಾವೇ ಎಲ್ಲ ಸಮಸ್ಯೆಗಳಿಗೆ ಉತ್ತರ ಅಲ್ಲ ಎನ್ನುವುದನ್ನು ಅರಿತುಕೊಂಡು ಅನೇಕರ ಸಹಾಯದಿಂದ ಉತ್ತಮ ಬದುಕು ರೂಪಿಸಿಕೊಂಡೆ. ಈ ದೃಢ ನಿರ್ಧಾರ ನನ್ನನ್ನು ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿವರೆಗೆ ಕೊಂಡೊಯ್ಯಿತು ಎಂದು ಸ್ಮರಿಸಿಕೊಂಡರು.
ಪೋಷಕರು ತಮ್ಮ ಮಕ್ಕಳಿಗೆ ಲಿಂಗ ಬೇಧ ಮಾಡದೇ ಶಿಕ್ಷಣ ಕೊಡಿಸಬೇಕು, ಹೆಣ್ಣು, ಗಂಡು ಅಥವಾ ತೃತೀಯ ಲಿಂಗಿ ಯಾರೇ ಇರಲಿ ಬೇಧವಿಲ್ಲದೇ ಶಿಕ್ಷಣ ಕೊಡಿಸಬೇಕು. ತೃತಿಯ ಲಿಂಗಿ ಎಂಬ ಕಾರಣಕ್ಕೆ ಕೌಟುಂಬಿಕ, ಅಥವಾ ಸಾಮಾಜಿಕ ಬಹಿಷ್ಕಾರ ಹಾಕದೇ ಲಿಂಗ ಸಮಾನತೆಯನ್ನು ಎತ್ತಿ ಹಿಡಿಯಬೇಕು. ಈ ದೇಶದ ಸಂವಿಧಾನ ಎಲ್ಲರಿಗೂ ಬದುಕುವ ಹಕ್ಕು ನೀಡಿದೆ. ಯಾರಿಗೂ ಯಾರ ವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಹಕ್ಕು ನೀಡಿಲ್ಲ. ಹಾಗಾಗಿ ಮಹಿಳೆಯರು ಯಾವುದಕ್ಕೂ ಅಂಜದೇ ಧೈರ್ಯದಿಂದ ಮುನ್ನುಗ್ಗಿದಾಗ ಸಮಾಜ ಗುರುತಿಸುತ್ತದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ಸಂಸ್ಕಾರವಂತರಾಗುತ್ತಾರೆ. ಸಂಸ್ಕಾರ ಕಲಿತವರು ಮಾತ್ರವೇ ನಮ್ಮ ಸಂಸ್ಕೃತಿಯನ್ನು ಉಳಿಸಲು ಸಾಧ್ಯ. ಹಾಗಾಗಿ ಪೋಷಕರು 1 ರಿಂದ 10 ನೇ ತರಗತಿಯವರೆಗೂ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿ ಓದಿಸಬೇಕು ಎಂದು ಕರೆ ನೀಡಿದ ಅವರು, ಇಂದು ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಇವುಗಳನ್ನು ಎತ್ತಿ ಹಿಡಿಯುವ ಬಗ್ಗೆ ಪೋಷಕರೆ ಮಕ್ಕಳಿಗೆ ಹೇಳಿ ಕೊಡಬೇಕು. ಮೊಬೈಲ್ ಅಭ್ಯಾಸದಿಂದ ಮಕ್ಕಳನ್ನು ದೂರ ಇಟ್ಟು ಪುಸ್ತಕ, ದಿನಪತ್ರಿಕೆ ಓದುವ ಅಭ್ಯಾಸ ಮಾಡಿಸುವಂತೆ ಕಿವಿ ಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಾರ್ವಜನಿಕ ವಾಲ್ಮೀಕಿ ಜಯಂತೋತ್ಸವ ಸಮಿತಿ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ವಾಲ್ಮೀಕಿ ಸಮುದಾಯಕ್ಕೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಳೆದ 3 ವರ್ಷಗಳಿಂದ ಸಾರ್ವಜನಿಕ ವಾಲ್ಮೀಕಿ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿವರ್ಷ ಹೊಸ ಪ್ರಯೋಗ ಮಾಡಲಾಗುತ್ತಿದೆ. ಈ ವರ್ಷ ಮಹಿಳೆಯರಿಂದಲೇ ಜಯಂತಿ ಆಚರಿಸಲು ನಿರ್ಧರಿಸಲಾಯಿತು. ಕಳೆದ 45 ದಿನಗಳಿಂದ
ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಡಲಾಗಿದೆ ಎಂದರು.
ಬಹಳಷ್ಟು ಜನ ವಾಲ್ಮೀಕಿ ಜಯಂತಿಯನ್ನು ರಾಜಕೀಯ ಲಾಭಕ್ಕಾಗಿ ಪರಿವರ್ತನೆ ಮಾಡಲು ನೋಡುತ್ತಾರೆ. ಆದರೆ ನಾವು ಸಮುದಾಯದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವ ಮತ್ತು ಮಹಿಳೆಯರನ್ನು ಮುಂಚೂಣಿಗೆ ತರಲು ಚಿಂತನೆ ಮಾಡಿದ್ದೇವೆ. ನ್ಯಾಷನಲ್ ಲವ್ಲಿ ಹುಡ್ ಯೋಜನೆಯಡಿ ಪಶುಸಖಿ, ಕೃಷಿ ಸಖಿಯಾಗಿ ಕೆಲಸ ಮಾಡುತ್ತಿರುವ ಮಹಿಳೆಯರು ಕೇವಲ 2-3 ಸಾವಿರ ರೂಗೆ ಕೆಲಸ ಮಾಡುತ್ತಿದ್ದಾರೆ. ಇದನ್ನು ಕನಿಷ್ಟ 12 ಸಾವಿರ ರೂಗೆ ಹೆಚ್ಚಳ ಮಾಡಬೇಕು, ಈ ಕುರಿತು ಶೀಘ್ರವೇ ದಾವಣಗೆರೆ ಸಂಸದರನ್ನು ಭೇಟಿ ಮಾಡಿ ಈ ಬಗ್ಗೆ ಬರುವ ಸಂಸತ್ತಿನ ಅಧಿವೇಶನದಲ್ಲಿ ಧ್ವನಿ ಎತ್ತಬೇಕೆಂದು ಮನವಿ ಸಲ್ಲಿಸೋಣ ಎಂದು ಹೇಳಿದರು.
ಸಮುದಾಯದ ಹೆಣ್ಣು ಮಕ್ಕಳಿಗೆ ಉಚಿತ ಹಾಸ್ಟೆಲ್ ಸೌಲಭ್ಯ ನೀಡುವುದು, ವಾಲ್ಮೀಕಿ ಅವರನ್ನು ದರೋಡೆಕೋರ ಎಂದು ಸಂಬೋಧಿಸಿದರೆ ಪಂಜಾಬ್ ಮಾದರಿಯಲ್ಲಿ ಮೊಕದ್ದಮೆ ಹೂಡುವುದು, ರಾಜ್ಯದ ಯಾವುದೇ ಭಾಗದಲ್ಲಿ ಪ್ರತಿಷ್ಟಾಪನೆಯಾಗುವ ವಾಲ್ಮೀಕಿ ಮೂರ್ತಿಯನ್ನು ತೆರವು ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಪಂಜಾಬ್ ಮಾದರಿಯ “ವಾಲ್ಮೀಕಿ ಪ್ರೊಟೆಕ್ಷನ್ ಆಕ್ಟ್” ಜಾರಿಗೆ ತರುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ವೇದಿಕೆ ಮೂಲಕ ಒತ್ತಾಯಿಸಲಾಗುವುದು ಎಂದು ಹೇಳಿದರು.
ಮಹಿರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಕೂಡ್ಲಿಗೆಯ ಪದ್ಮಾವತಿ ಮಾತನಾಡಿ, ಸಮುದಾಯದ ಮಹಿಳೆಯರು ಜಾಗೃತರಾದರೆ ಮಾತ್ರ ಸೌಲಭ್ಯಗಳನ್ನು ಪಡೆಯಲು ಸಾಧ್ಯ. ಯಾವುದೇ ಕೆಲಸಗಳಿಗೂ ಹಿಂದೆ ಬೀಳದೆ ನಮ್ಮತನವನ್ನು ತೋರಿಸಿದಾಗ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತ ಪುರಸ್ಕೃತೆ ವೀರಾಪುರ ಅಂಜಿನಮ್ಮ, ಸಾರ್ವಜನಿಕ ವಾಲ್ಮೀಕಿ ಜಯಂತೋತ್ಸವ ಸಮಿತಿಯ ನಳಿನ ಕಿತ್ತೂರು, ಶೃತಿ, ದೇವರಮನೆ ಮಹೇಶ್, ದಾವಣಗೆರೆ ತಾಪಂ ಮಾಜಿ ಸದಸ್ಯ ಗುಮ್ಮನೂರು ಶಂಭಣ್ಣ, ಉದ್ಯಮಿ ಜ್ಞಾನೇಶ್ವರ್, ರೈತ ಸಂಘದ ಮುಖಂಡರಾದ ಯರವನಾಗತಿಹಳ್ಳಿ ಪರಮೇಶ್ವರಪ್ಪ, ಪಾಮೇನಹಳ್ಳಿ ಗೌಡರ ಶೇಖರಪ್ಪ, ಚಿಕ್ಕಮಲ್ಲನಹೊಳೆ ಚಿರಂಜೀವಿ, ಎಪಿಎಂಸಿ ಮಾಜಿ ಅಧ್ಯಕ್ಷ ಹೂವಿನ ಮಡು ಹಾಲಪ್ಪ, ಎನ್ಎನ್ಟಿ ತಿಪ್ಪೇಸ್ವಾಮಿ. ಗುಮ್ಮನೂರು ರವಿ, ಕೋಗಲೂರು ಕುಮಾರ್, ಕುರ್ಕಿ ಹನುಮಂತ. ಆಲೂರು ಪರಶುರಾಮ್, ರಾಜನಹಟ್ಟಿ ರಾಜು ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಇದೇ ವೇಳೆ ಜಾನಪದ ಕಲಾವಿದ ಸಿ.ಎಚ್.ಉಮೇಶ್ ಅವರಿಗೆ 2024-25 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಗರದ ಜಯ ಚಾಮರಾಜಪೇಟೆ ವೃತ್ತದಿಂದ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆಗೆ ಪದ್ಮಾವತಿ ಅವರು ಚಾಲನೆ ನೀಡಿದರು. ಡೊಳ್ಳು, ಸಮಾಳ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರಗು ನೀಡಿದ್ದವು.