SUDDIKSHANA KANNADA NEWS/ DAVANAGERE/ DATE:09-06-2024
ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ವಿರುದ್ಧವೇ ಬಿಜೆಪಿ ಶಾಸಕ ಬಿ. ಪಿ. ಹರೀಶ್ ತಿರುಗಿ ಬಿದ್ದಿದ್ದಾರೆ.
ನಗರದ ಹರಿಹರ ಅರ್ಬನ್ ಸಮುದಾಯ ಭವನದಲ್ಲಿ ಮತದಾರರು, ಕಾರ್ಯಕರ್ತರು ಹಾಗೂ ಮುಖಂಡರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ವರಿಷ್ಠರ ವಿರುದ್ಧವೇ
ತಿರುಗಿ ಬಿದ್ದಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ದೆಹಲಿ ಹಾಗೂ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಡಾ. ಜಿ. ಎಂ. ಸಿದ್ದೇಶ್ವರ ವಿರುದ್ಧ ಹೇಳಿಕೆ ನೀಡಿದರು. ಮನಸ್ಸೋ ಇಚ್ಚೆ ಬೈದಾಡಿದರು. ಸಿದ್ದೇಶ್ವರ ಅವರು ಹೊರಗಿನವರು ಟಿಕೆಟ್ ನೀಡುವುದು ಬೇಡ ಎಂದೆಲ್ಲಾ ಗೊಂದಲ ಸೃಷ್ಟಿಸಿದರು. ಆಗ ಬಿ. ಎಸ್. ಯಡಿಯೂರಪ್ಪ ಅವರು ಸುಮ್ಮನಿದ್ದರು. ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ಇರಲಿಲ್ವಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರ ಮನೆಗೆ ರೇಣುಕಾಚಾರ್ಯ ಹೋಗಿದ್ದರು. ಅವರಿಗೆ ಮಾನ, ಮರ್ಯಾದೆ ಇಲ್ವಾ. ನಾಚಿಕೆಯಾಗಬೇಕು ರೇಣುಕಾಚಾರ್ಯ ಅವರಿಗೆ. ವ್ಯವಸ್ಥಿತವಾಗಿ ರಾಜ್ಯ ನಾಯಕರು ಹಾಗೂ ಸ್ಥಳೀಯ ನಾಯಕರು ಶಾಮನೂರು ಶಿವಶಂಕರಪ್ಪರ ಋಣ ತೀರಿಸುವ ಕೆಲಸ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರದಿಂದ ಕೆಳಗಿಳಿಸುವ ಕೂಗು ಬಂದಿತ್ತು. ಆಗ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಯಡಿಯೂರಪ್ಪ ಅವರನ್ನು ಕೆಳಗಿಳಿಸಿದರೆ ರಾಜ್ಯಾದ್ಯಂತ ವೀರಶೈವ ಲಿಂಗಾಯತ ಸಮುದಾಯವು ಹೋರಾಟ ನಡೆಸಲಿದೆ ಎಂಬ ಎಚ್ಚರಿಕೆ ನೀಡಿದ್ದರು. ಆಗ ಬಿಎಸ್ ವೈ ಬೆಂಬಲಕ್ಕೆ ನಿಂತಿದ್ದರು. ಹಾಗಾಗಿ, ವ್ಯವಸ್ಥಿತವಾಗಿ ಜಿ. ಎಂ. ಸಿದ್ದೇಶ್ವರ ಅವರ ಮನೆತನ ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ರೂಪಿಸಿರುವುದು ಗೊತ್ತಾಗುತ್ತದೆ ಎಂದು ಹರೀಶ್ ದೂರಿದರು.
ಸಿದ್ದೇಶ್ವರರ ಮನೆತನಕ್ಕೆ ಟಿಕೆಟ್ ನೀಡಬಾರದು ಎಂಬುದು ಸಂಚು ರೂಪಿಸಿರುವುದು ಗೊತ್ತಾಗುತ್ತದೆ. ದಾವಣಗೆರೆ ಹರಾಜು ಮಾಡುವ ತೀರ್ಮಾನವನ್ನು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರು ಮಾಡಿದ್ದಾರೆ ಎಂದು ಆರೋಪಿಸುವ ಮೂಲಕ ಸ್ವಪಕ್ಷದ ನಾಯಕರ ವಿರುದ್ಧವೇ ಆರೋಪ ಮಾಡಿರುವುದು ಈಗ ಬಿಜೆಪಿಯಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.