SUDDIKSHANA KANNADA NEWS/ DAVANAGERE/ DATE:13-02-2024
ದಾವಣಗೆರೆ: ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಶುದ್ದೀಕರಣ ಘಟಕದ ಪರಿಶೀಲನೆಯನ್ನು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಅವರು ನಡೆಸಿದರು.
ಬೇಸಿಗೆ ಆರಂಭವಾಗುತ್ತಿದ್ದು ಕುಡಿಯುವ ನೀರನ್ನು ಶುದ್ದೀಕರಣ ಮಾಡಿ ಪೂರೈಕೆ ಮಾಡಬೇಕು, ಇಲ್ಲದಿದ್ದಲ್ಲಿ ಹಲವಾರು ಅನಾರೋಗ್ಯಕ್ಕೆ ಕಾರಣಗವುದರಿಂದ ಶುದ್ದೀಕರಣ ಘಟಕದಲ್ಲಿ ನೀರಿಗೆ ಕ್ಲೋರಿನೇಷನ್ ಮಾಡುವ ಮೂಲಕ ಪೂರೈಕೆ ಮಾಡಬೇಕು. ಬೇಸಿಗೆ ಆರಂಭವಾಗಿದ್ದು ನೀರನ್ನು ಮಿತವಾಗಿ ಹಾಗೂ ನಿರಂತರವಾಗಿ ನೀರು ಪೂರೈಕೆ ಮಾಡಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನೀರಿನ ಹರಿವು ಪರಿಶೀಲನೆ:
ಭದ್ರಾ ಜಲಾಶಯದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಮೈಲಾರ ಜಾತ್ರಾ ಮಹೋತ್ಸವದ ಉದ್ದೇಶಕ್ಕೆ ತುಂಗಭದ್ರಾ ನದಿಗೆ ನೀರು ಬಿಡಲಾಗಿದ್ದು ನೀರಿನ ಹರಿವು ಬಗ್ಗೆ ಅಧಿಕಾರಿಗಳೊಂದಿಗೆ ಹರಿಹರದ ಸಮೀಪ ಪರಿಶೀಲನೆ ನಡೆಸಿದರು. ಈ ವೇಳೆ ನಗರಾಭಿವೃದ್ದಿಕೋಶ ಯೋಜನಾ ನಿರ್ದೇಶಕ ಮಹಂತೇಶ್, ತಹಶೀಲ್ದಾರ್ ಗುರುಬಸವರಾಜ್, ನಗರಸಭೆ ಆಯುಕ್ತ ಬಸವರಾಜ್ ಐಗೂರು ಉಪಸ್ಥಿತರಿದ್ದರು.
ಇ-ಖಾತಾ ಆಂದೋಲನೆ:
ಜಿಲ್ಲಾಧಿಕಾರಿಯವರ ಸೂಚನೆಯಂತೆ ನಮ್ಮ ಖಾತೆ, ನಮ್ಮ ಹಕ್ಕು, ನಮ್ಮ ದಾಖಲೆ ನಮ್ಮ ಹಕ್ಕು ಘೋಷಣೆಯನ್ವಯ ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಜನರಿಗೆ ಅನುಕೂಲವಾಗಲು ಇ-ಖಾತೆ ಆಂದೋಲನದ ಮೂಲಕ ಮನೆ ಮನೆಗೂ ಇ-ಸ್ವತ್ತು ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಆಸ್ತಿ ತೆರಿಗೆ ಪಾವತಿಸಿದ ಎಲ್ಲಾ ಖಾತೆದಾರರಿಗೆ ಇ-ಸ್ವತ್ತು ದಾಖಲೆ ನೀಡಲಾಗುತ್ತದೆ. ಇದಕ್ಕಾಗಿ ಗುತ್ತೂರು ಸತ್ಯ ಗಣಪತಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿರುವ ಆಂದೋಲನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಅವರು ನಾಗರೀಕರಿಗೆ ಇ-ಸ್ವತ್ತು ಪ್ರಮಾಣಪತ್ರ ವಿತರಿಸಿದರು.
ಹೊಸ ನಗರಸಭೆ ಕಟ್ಟಡ ಪರಿಶೀಲನೆ:
ಹರಿಹರ ನಗರಸಭೆ ಹೊಸ ಕಟ್ಟಡವನ್ನು 4 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಕಟ್ಟಡ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿ ಗುಣಮಟ್ಟದ ಕಾಮಗಾರಿ ಜೊತೆಗೆ ನಿಗಧಿತ ಕಾಲಾವಧಿಯಲ್ಲಿ ಕಟ್ಟಡ ನಿರ್ಮಿಸಿಕೊಡಲು
ಗುತ್ತಿಗೆದಾರರಿಗೆ ಸೂಚನೆ ನೀಡಿದರು.