ದಾವಣಗೆರೆ: “ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಮೊದಲಿನಿಂದಲೂ ಸಂಸ್ಕಾರ ಹಾಗೂ ಪ್ರಬುದ್ಧತೆ ಇಲ್ಲ” ಎಂದು ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ಮತ್ತು ಸಾಹುಕಾರಿಕೆ ಯಾರೊಬ್ಬರಿಗೂ ಶಾಶ್ವತವಲ್ಲ. ದೇಶ ಮತ್ತು ರಾಜ್ಯವನ್ನು ಆಳಿದ ಅನೇಕ ಶ್ರೀಮಂತರು ಹಾಗೂ ಅಧಿಕಾರಿಗಳನ್ನು ನೋಡಿದ್ದೇವೆ. ವ್ಯಕ್ತಿಗೆ ನಡೆ ಮತ್ತು ನುಡಿ ಮಾತ್ರ ಶಾಶ್ವತ ಎಂಬುದನ್ನು ಸಚಿವರು ನೆನಪಿಟ್ಟುಕೊಳ್ಳಬೇಕು ಎಂದು ಕಿಡಿಕಾರಿದರು.
ಮೊದಲು ಸಂಸ್ಕಾರ ಬೆಳೆಸಿಕೊಳ್ಳಲಿ. ದರ್ಪ, ಅಹಂಕಾರ ಒಳ್ಳೆಯದಲ್ಲ, ಪ್ರಬುದ್ಧತೆ ಬೇಕು. ಅಧಿಕಾರ ಸಿಗುತ್ತೆ ಹೋಗುತ್ತೆ. ಸಾಹುಕಾರಿಕೆ ಇರುತ್ತೆ ಹೋಗುತ್ತೆ. ಬಹಳ ಶ್ರೀಮಂತರು, ಅಧಿಕಾರಿಗಳು, ದೇಶ ಮತ್ತು ರಾಜ್ಯ ಆಳಿದವರನ್ನು ನೋಡಿದ್ದೇನೆ. ಹೇಗೆ ಇದ್ದಾರೆ ಎಂದು ಯೋಚನೆ ಮಾಡಲಿ. ನಡೆ ನುಡಿ ಶಾಶ್ವತ
“ಸಚಿವ ಮಲ್ಲಿಕಾರ್ಜುನ್ ಅವರಿಗೆ ವಯಸ್ಸಾದ ಹಿರಿಯರ ಜೊತೆ ಹೇಗೆ ಮಾತನಾಡಬೇಕೆಂಬ ಅರಿವಿಲ್ಲ. ಈ ಹಿಂದೆಯೂ ನನ್ನ ವಿರುದ್ಧ ಏಕವಚನ ಬಳಸಿ ಮಾತನಾಡಿದ್ದರು. ಇತ್ತೀಚೆಗೆ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಅವರ ವಿರುದ್ಧ ಅವರು ಬಳಸಿರುವ ಅವಾಚ್ಯ ಪದಗಳು ಅಕ್ಷಮ್ಯ. ಜನಪ್ರತಿನಿಧಿಗೆ ಈ ರೀತಿ ನಿಂದಿಸುವುದು ಸರಿಯಲ್ಲ” ಎಂದು ಖಂಡಿಸಿದರು.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ತಕ್ಷಣವೇ ಶಾಸಕ ಬಿ.ಪಿ. ಹರೀಶ್ ಹಾಗೂ ಜಿಲ್ಲೆಯ ಜನರ ಕ್ಷಮೆಯಾಚಿಸಬೇಕು. ಈ ಮೂಲಕ ಜಿಲ್ಲೆಗೆ ಒಳ್ಳೆಯ ಸಂದೇಶ ನೀಡಬೇಕು ಎಂದು ಸಿದ್ದೇಶ್ವರ ಆಗ್ರಹಿಸಿದರು.





Leave a comment