ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಐತಿಹಾಸಿಕ ಜಯ ದಾಖಲಿಸಲಿದ್ದಾರೆ ಎಂದು ಸಂಸದೆ ಹಾಗೂ ಅಭ್ಯರ್ಥಿಯ ತಾಯಿ ಡಾ. ಪ್ರಭಾ ಮಲ್ಲಿಕಾರ್ಜುನ್ ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದ ಚುನಾವಣಾ ಪ್ರಚಾರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಕಾಂಗ್ರೆಸ್ ಪರವಾದ ಅಲೆ ಬಲವಾಗಿದೆ ಎಂದರು.
ಭಾರೀ ಅಂತರದ ಗೆಲುವು: “ಕ್ಷೇತ್ರದಲ್ಲಿ ಮತದಾರರ ಪ್ರತಿಕ್ರಿಯೆ ಅದ್ಭುತವಾಗಿದೆ. ಕೆಲವರು 8 ರಿಂದ 12 ಸಾವಿರ ಮತಗಳ ಅಂತರ ಎನ್ನುತ್ತಿದ್ದಾರೆ, ಮತ್ತೆ ಕೆಲವರು 12 ರಿಂದ 18 ಸಾವಿರ ಮತಗಳ ಅಂತರದಲ್ಲಿ ಸಮರ್ಥ್ ಗೆಲ್ಲಲಿದ್ದಾರೆ ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಒಟ್ಟಾರೆಯಾಗಿ ದೊಡ್ಡ ಅಂತರದಲ್ಲಿ ನಮ್ಮ ಅಭ್ಯರ್ಥಿ ವಿಜಯಶಾಲಿಯಾಗುವುದು ಖಚಿತ” ಎಂದು ಅವರು ತಿಳಿಸಿದರು.
ಮೇ 4ರ ಫಲಿತಾಂಶದ ಮೇಲೆ ಕಣ್ಣು: “ಜನರ ಆಶೀರ್ವಾದ ನಮ್ಮ ಮೇಲಿದೆ. ಮತದಾರರು ನೀಡಿದ ತೀರ್ಪು ಮೇ 4ರಂದು ಪ್ರಕಟಗೊಳ್ಳುವ ಫಲಿತಾಂಶದಲ್ಲಿ ಸ್ಪಷ್ಟವಾಗಲಿದೆ” ಎಂದು ಸಂಸದರು ವಿಶ್ವಾಸದಿಂದ ನುಡಿದರು. ಮಾಜಿ ಶಾಸಕ ಶಾಮನೂರು ಶಿವಶಂಕಪ್ಪ ಅವರ ನಿಧನದಿಂದ ತೆರವಾದ ಈ ಸ್ಥಾನಕ್ಕೆ ನಡೆಯುತ್ತಿರುವ ಉಪಚುನಾವಣೆಯು ಜಿಲ್ಲೆಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.






Leave a comment