ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಸ್ ಡಿಪಿಐ ಮತ್ತು ಪಕ್ಷೇತರರೊಟ್ಟಿಗೆ ಸೇರಿಕೊಂಡು ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಕೈಜೋಡಿಸಿದ್ದೇನೆಂಬ ಆರೋಪ ಸತ್ಯಕ್ಕೆ ದೂರವಾದದ್ದು. ಹಣ, ಹೆಂಡ, ಸೀರೆ ಹಂಚಿ ಕಾಂಗ್ರೆಸ್ ಗೆದ್ದಿದೆ. ಜಮೀರ್ ಅಹ್ಮದ್ ನನಗೆ ಪರಿಚಯವೇ ಇಲ್ಲ. ಸಿರಾಜ್ ಅಹ್ಮದ್ ಆತ್ಮೀಯರೂ ಅಲ್ಲ. ಆದರೂ ಸುಳ್ಳು ಆರೋಪ ಮಾಡಿರುವುದು ಸರಿಯಲ್ಲ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು ಶಾಸಕ ಸಮರ್ಥ್ ಶಾಮನೂರು ಅವರಿಗೆ ತಿರುಗೇಟು ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀರ್ ಅಹ್ಮದ್ ಖಾನ್ ಅವರನ್ನು ಭೇಟಿಯಾಗಿಲೇ ಇಲ್ಲ. ಕಾಲಿಗೆ ಬಿದ್ದಿದ್ದೇನೆಂಬ ಆರೋಪ ಮಾಡಿರುವ ಆಡಿಯೋದಲ್ಲಿದೆ. ಜಮೀರ್ ಅಹ್ಮದ್ ಮತ್ತು ಸಿರಾಜ್ ಅಹ್ಮದ್ ಅವರು ಮಾತನಾಡಿರುವುದು ಅವರ ಆಂತರಿಕ ವಿಚಾರ. ಆದರೆ ನಾನು ಕೇಳಿಕೊಂಡಿದ್ದೇನೆ, ಕಾಲಿಗೆ ಬಿದ್ದಿದ್ದೇನೆ ಎಂಬುದೆಲ್ಲಾ ಸುಳ್ಳು. ಚುನಾವಣೆ ವೇಳೆ ಸಿರಾಜ್ ಅಹ್ಮದ್ ಸಿಕ್ಕಿಲ್ಲ, ಮಾತನಾಡಿಯೂ ಇಲ್ಲ. ಹಾಗೆಂದ ಮೇಲೆ ಹೊಂದಾಣಿಕೆ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.
ಬಿಜೆಪಿ ಸಿದ್ಧಾಂತದ ಮೇಲೆ ನಾನು ಮತ ಕೇಳಿದ್ದೇನೆ. ಒಂದು ವೇಳೆ ಶಾಸಕ ಸಮರ್ಥ್ ಶಾಮನೂರು ಅವರು ಆರೋಪ ಮಾಡಿದಂತೆ ಎಸ್ ಡಿಪಿಐ ಮತ್ತು ಪಕ್ಷೇತರರೊಟ್ಟಿಗೆ ಕೈ ಜೋಡಿಸಿದ್ದರೆ ಗೆಲ್ಲುತ್ತಿದ್ದೆ. ಬಿಜೆಪಿ ಪಕ್ಷದ ಸಿದ್ಧಾಂತ, ತತ್ವದ ಆಧಾರದಡಿ ಚುನಾವಣೆ ಎದುರಿಸಿದ್ದೇನೆ. ನನಗೆ 64 ಸಾವಿರ ಮತಗಳು ಬಂದಿವೆ. ಎಲ್ಲಾ ಮತದಾರರಿಗೆ ಕಾಲಿಗೆ ನಮಸ್ಕರಿಸುತ್ತೇನೆ. ಕಾಂಗ್ರೆಸ್ ರೀತಿ ಅಡ್ಡ ದಾರಿ ಹಿಡಿದು ರಾಜಕೀಯ ಮಾಡಲ್ಲ. ಚುನಾವಣೆಯಲ್ಲಿ ವಾಮಮಾರ್ಗ ಅನುಸರಿಸಿಲ್ಲ. ಜನತೆ ಕಾಂಗ್ರೆಸ್ ಗೆ ಆಶೀರ್ವಾದ ಮಾಡಿದ್ದಾರೆ. ಇಂಥ ಆರೋಪ ಮಾಡುವುದನ್ನು ಬಿಟ್ಟು ಜನಸೇವೆ ಮಾಡಲಿ ಎಂದು ಕಿಡಿಕಾರಿದರು.
ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ನೂತನ ಶಾಸಕರು ಕ್ಷೇತ್ರಕ್ಕೆ ಬಂದಿರುವ 100 ಕೋಟಿ ರೂಪಾಯಿ ಅನುದಾನದಲ್ಲಿ ಒಳ್ಳೆಯ ಕೆಲಸ ಮಾಡಲಿ. ಬಿಜೆಪಿಯು ಅಭಿವೃದ್ಧಿಪರ ಕೆಲಸಕ್ಕೆ ವಿರೋಧ ಮಾಡುವುದಿಲ್ಲ. ಸುಳ್ಳು ಆರೋಪ ಮಾಡಿದರೆ
ಜನರು ನಂಬುವುದಿಲ್ಲ. ಉತ್ತಮ ಕೆಲಸ ಮಾಡುತ್ತಾ ಮುನ್ನಡೆಯಿರಿ ಎಂದು ಸಲಹೆ ನೀಡಿದರು.
ನನ್ನ ತಂದೆ ದೂಡಾ ಅಧ್ಯಕ್ಷರಾಗಿದ್ದಾಗ ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ತಂದೆಯ ಹಾದಿಯಲ್ಲೇ ರಾಜಕಾರಣ ಮಾಡುತ್ತೇನೆ. ನಾನು ಯಾವತ್ತಿಗೂ ಪಕ್ಷದ ಚೌಕಟ್ಟು ಮೀರಿ ಹೋಗುವುದಿಲ್ಲ. ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಹಗಲಿರುಳು ಶ್ರಮಿಸಿದ ಕಾರಣಕ್ಕೆ ಇಷ್ಟೊಂದು ಮತ ಬರಲು ಸಾಧ್ಯವಾಗಿದೆ ಎಂದು ಶ್ರೀನಿವಾಸ್ ದಾಸಕರಿಯಪ್ಪ ತಿಳಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಯುವ ಮುಖಂಡ ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ಶಂಕರಗೌಡ ಬಿರಾದಾರ್, ಕಿಶೋರ್, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.





Leave a comment