ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಸ್ವತ್ತು ತಿದ್ದುಪಡಿ ಪ್ರಕ್ರಿಯೆಯು ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಖಾತೆದಾರರ ಅನಗತ್ಯ ಅಲೆದಾಟವನ್ನು ತಪ್ಪಿಸಲು ಅಧಿಕಾರಿಗಳು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಎಂ.ಜಿ. ಶ್ರೀಕಾಂತ್ ಗಂಭೀರವಾಗಿ ಒತ್ತಾಯಿಸಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿವೇಶನ ಹಾಗೂ ಮನೆ ಖಾತೆದಾರರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ಇ-ಸ್ವತ್ತು ನಮೂನೆ-2 (Form-2) ಪಡೆದ ನಂತರ ನೋಂದಣಿ ಇಲಾಖೆಗೆ ತೆರಳುವಾಗ ಅಥವಾ ಬ್ಯಾಂಕ್ಗಳಲ್ಲಿ ಸಾಲ ಪಡೆಯಲು ಮುಂದಾದಾಗ ವಿವಿಧ ತಾಂತ್ರಿಕ ಹಾಗೂ ದಾಖಲಾತಿ ದೋಷಗಳು ಎದುರಾಗುತ್ತಿವೆ. ಇ-ಸ್ವತ್ತು ನಮೂನೆಯಲ್ಲಿ ಮಾಲೀಕರ ವಿಳಾಸ ತಪ್ಪಾಗಿರುವುದು, ತಂದೆಯ ಹೆಸರು ತಪ್ಪಾಗಿರುವುದು, ಆಸ್ತಿಯ ಅಳತೆಯಲ್ಲಿ ವ್ಯತ್ಯಾಸವಿರುವುದು ಹಾಗೂ ಚೆಕ್ಕುಬಂದಿ (Boundary details) ತಪ್ಪಾಗಿ ನಮೂದಾಗಿರುವುದು ಮುಂತಾದ ಸಣ್ಣಪುಟ್ಟ ಲೋಪದೋಷಗಳಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಸಾವಿರಾರು ರೂಪಾಯಿಗಳಿಂದ ಹಿಡಿದು ಲಕ್ಷಾಂತರ ರೂಪಾಯಿಗಳವರೆಗೆ ನಿಯಮಿತವಾಗಿ ಆಸ್ತಿ ತೆರಿಗೆ ಪಾವತಿಸುವ ಪ್ರಾಮಾಣಿಕ ನಾಗರಿಕರು, ಕೇವಲ ದಾಖಲೆಗಳ ತಿದ್ದುಪಡಿಗಾಗಿ ಕಚೇರಿಗಳ ಅಲೆದಾಡಿ ಹೈರಾಣಾಗುತ್ತಿದ್ದಾರೆ. ಪಾಲಿಕೆ ಸಿಬ್ಬಂದಿ ಹಾಗೂ ತಂತ್ರಾಂಶದ ನಡುವಿನ ಸಮನ್ವಯತೆಯ ಕೊರತೆಯಿಂದಾಗಿ ಜನಸಾಮಾನ್ಯರು ಕಚೇರಿಗಳ ಮೆಟ್ಟಿಲು ಹತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಗಂಭೀರ ಸಮಸ್ಯೆಯನ್ನು ಮನಗಂಡು, ರಾಜ್ಯ ಸರ್ಕಾರ ಹಾಗೂ ಮಹಾನಗರ ಪಾಲಿಕೆ ಆಡಳಿತವು ಕೂಡಲೇ ಎಚ್ಚೆತ್ತುಕೊಳ್ಳಬೇಕು. ಆನ್ಲೈನ್ ತಂತ್ರಾಂಶದಲ್ಲಿ ಇರುವ ಸ್ವತ್ತಿನ ವಿವರಗಳು ಹಾಗೂ ದೋಷಗಳನ್ನು ಸುಲಭವಾಗಿ ತಿದ್ದುಪಡಿ ಮಾಡಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಿಶೇಷ ಹಾಗೂ ಸರಳೀಕೃತ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಎಂ.ಜಿ. ಶ್ರೀಕಾಂತ್ ಆಗ್ರಹಿಸಿದ್ದಾರೆ.





Leave a comment