ಸುರೇಂದ್ರನಗರ (ಗುಜರಾತ್): ಅಕ್ರಮ ಸಂಬಂಧ ಮತ್ತು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮೊದಲ ಪ್ರೇಮಿಯನ್ನೇ ಅಂದರೆ ಪ್ರಸ್ತುತ ಗಂಡನಾಗಿದ್ದವನನ್ನು ಎರಡನೇ ಪ್ರೇಮಿಯೊಂದಿಗೆ ಸೇರಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಗುಜರಾತ್ನ ಸುರೇಂದ್ರನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಆರಂಭದಲ್ಲಿ ಕೇವಲ ‘ಆಕಸ್ಮಿಕ ಸಾವು’ ಎಂದು ಮುಚ್ಚಿಹೋಗಿದ್ದ ಈ ನಿಗೂಢ ಪ್ರಕರಣವನ್ನು ಅಹಮದಾಬಾದ್ ನಗರ ಕ್ರೈಂ ಬ್ರಾಂಚ್ ಪೊಲೀಸರು ತನಿಖೆ ನಡೆಸಿ ಯಶಸ್ವಿಯಾಗಿ ಭೇದಿಸಿದ್ದಾರೆ.
ಘಟನೆಯ ಹಿನ್ನೆಲೆ ಮತ್ತು ಅಕ್ರಮ ಸಂಬಂಧಗಳ ಜಾಲ:
ಬಂಧಿತ ಮಹಿಳೆಯನ್ನು ಜಾಗೃತಿ ಗೋಸ್ವಾಮಿ ಎಂದು ಗುರುತಿಸಲಾಗಿದೆ. ಈಕೆಗೆ ಈ ಹಿಂದೆ ಸುಖ್ದೇವ್ಗಿರಿ ಎಂಬಾತನೊಂದಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಆದರೆ, ಜಾಗೃತಿ ತನ್ನ ಮೊದಲ ಪತಿಯ ಅಣ್ಣನಾದ ಶಾಂತಿಗಿರಿ ಗೋಸ್ವಾಮಿಯನ್ನು ಪ್ರೀತಿಸಿ, ಮಕ್ಕಳನ್ನು ಬಿಟ್ಟು ಆತನೊಂದಿಗೆ ಓಡಿಹೋಗಿ ಮದುವೆಯಾಗಿದ್ದಳು. ಟ್ರಕ್ ಚಾಲಕನಾಗಿದ್ದ ಶಾಂತಿಗಿರಿ ಕೆಲಸದ ನಿಮಿತ್ತ ದಿನಗಟ್ಟಲೆ ಮನೆಯಿಂದ ಹೊರಗ ಇರುತ್ತಿದ್ದ. ಈ ಸಮಯದಲ್ಲಿ ಇವರ ಮನೆಯ ಪಕ್ಕದಲ್ಲೇ ವಾಸವಿದ್ದ ಕಾಂತಿಲಾಲ್ ಯಾನೆ ಭರತ್ಭಾಯಿ ಎಂಬಾತನೊಂದಿಗೆ ಜಾಗೃತಿಗೆ ಅಕ್ರಮ ಸಂಬಂಧ ಬೆಳೆದಿತ್ತು.
ಮೊದಲ ಪ್ಲಾನ್ ಫೇಲ್ – ಸುಪಾರಿ ಕಿಲ್ಲರ್ ಮಾಡಿದ ವಂಚನೆ:
ಪತಿ ಶಾಂತಿಗಿರಿ ಜೊತೆಗಿನ ಜಗಳದಿಂದ ಬೇಸತ್ತಿದ್ದ ಜಾಗೃತಿ ಮತ್ತು ಆಕೆಯ ಎರಡನೇ ಪ್ರೇಮಿ ಕಾಂತಿಲಾಲ್, ಆತನನ್ನು ಮುಗಿಸಲು ಯೂನಿಸ್ ಎಂಬ ಸುಪಾರಿ ಕಿಲ್ಲರ್ಗೆ ₹25,000 ಹಣ ನೀಡಿದ್ದರು. ಒಂದು ರಾತ್ರಿ ಕೊಲೆ ಮಾಡಲು ಶಾಂತಿಗಿರಿ ಮನೆಗೆ ನುಗ್ಗಿದ ಯೂನಿಸ್, ಆತ ಮಲಗಿರುವುದನ್ನು ನೋಡಿ ಹೆದರಿದ್ದಾನೆ. ಕೊಲೆ ಮಾಡದೆಯೇ, ಮಲಗಿದ್ದ ಶಾಂತಿಗಿರಿಯ ಫೋಟೋ ತೆಗೆದು ಜಾಗೃತಿಗೆ ಕಳುಹಿಸಿ, ‘ಕೆಲಸ ಮುಗಿದಿದೆ’ ಎಂದು ಸುಳ್ಳು ಹೇಳಿ ಹಣ ಪಡೆದುಕೊಂಡು ಪರಾರಿಯಾಗಿದ್ದಾನೆ. ಆದರೆ ಮರುದಿನ ಬೆಳಗ್ಗೆ ಗಂಡ ಬದುಕಿರುವುದನ್ನು ನೋಡಿ ಜಾಗೃತಿಗೆ ಸುಪಾರಿ ಕಿಲ್ಲರ್ ವಂಚಿಸಿರುವುದು ಗೊತ್ತಾಗಿದೆ.
ದಿಂಬು ಒತ್ತಿ ಕೊಲೆ, ಮೂರನೇ ಪ್ರೇಮಿಯ ಎಂಟ್ರಿ!
ಮೊದಲ ಪ್ಲಾನ್ ವಿಫಲವಾದಾಗ ಜಾಗೃತಿ ಮತ್ತು ಕಾಂತಿಲಾಲ್ ತಾವೇ ಕೊಲೆ ಮಾಡಲು ನಿರ್ಧರಿಸಿದ್ದಾರೆ. ಮನೆಯೊಳಗೆ ಕಾಂತಿಲಾಲ್ ಶಾಂತಿಗಿರಿಯ ಕುತ್ತಿಗೆ ಹಿಸುಕಿದರೆ, ಜಾಗೃತಿ ಆತನ ಮುಖದ ಮೇಲೆ ದಿಂಬು ಇಟ್ಟು ಕಿರುಚದಂತೆ ಗಟ್ಟಿಯಾಗಿ ಒತ್ತಿ ಹಿಡಿದು ಕೊಲೆ ಮಾಡಿದ್ದಾರೆ. ಶವವನ್ನು ಮರೆಮಾಡಲು ಜಾಗೃತಿ ತನಗಿದ್ದ ಮತ್ತೊಬ್ಬ (ಮೂರನೇ) ಪ್ರೇಮಿ ದೀಪಕ್ ಯಾನೆ ಮುನ್ನಾ ಎಂಬಾತನ ಸಹಾಯ ಪಡೆದಿದ್ದಾಳೆ. ದೀಪಕ್ ಕಾರೊಂದನ್ನು ವ್ಯವಸ್ಥೆ ಮಾಡಿದ್ದು, ಮೂವರೂ ಸೇರಿ ಶವವನ್ನು ಸುರೇಂದ್ರನಗರದ ಕಾಲುವೆಯೊಂದಕ್ಕೆ ಎಸೆದು, ಅದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಆಕಸ್ಮಿಕ ಘಟನೆ ಎಂದು ಬಿಂಬಿಸಲು ಯತ್ನಿಸಿದ್ದಾರೆ. ಯಾರೂ ಪೊಲೀಸರಿಗೆ ದೂರು ನೀಡದಂತೆ ‘ಆತ ಕೆಲಸದ ಮೇಲೆ ಹೊರಗೆ ಹೋಗಿದ್ದಾನೆ’ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು.
ಪೊಲೀಸ್ ತನಿಖೆ:
ಕಾಲುವೆಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಶವವನ್ನು ಸ್ಥಳೀಯ ಪೊಲೀಸರು ಆಕಸ್ಮಿಕ ಸಾವು ಎಂದು ದಾಖಲಿಸಿಕೊಂಡಿದ್ದರು. ಆದರೆ, ಅಹಮದಾಬಾದ್ ಕ್ರೈಂ ಬ್ರಾಂಚ್ ಅಧಿಕಾರಿಗಳಿಗೆ ಸಿಕ್ಕ ರಹಸ್ಯ ಮಾಹಿತಿ ಮತ್ತು ತಾಂತ್ರಿಕ ತನಿಖೆಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದಾಗ ಈ ಭೀಕರ ಕೊಲೆ ರಹಸ್ಯ ಬಯಲಾಗಿದೆ. ಸದ್ಯ ಪೊಲೀಸರು ಪ್ರಮುಖ ಆರೋಪಿಗಳಾದ ಜಾಗೃತಿ ಗೋಸ್ವಾಮಿ ಮತ್ತು ಕಾಂತಿಲಾಲ್ನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.





Leave a comment